ಲಾರಿ ಢಿಕ್ಕಿಯಾಗಿ ಬಸ್ ಪಲ್ಟಿ : ಚಾಲಕಗೆ ಗಾಯ
Team Udayavani, Mar 17, 2023, 5:00 AM IST
ಕುಂದಾಪುರ: ಇಲ್ಲಿನ ಬಸ್ ಡಿಪ್ಪೋದಿಂದ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ ಸಂತೆ ಮಾರುಕಟ್ಟೆ ಬಳಿಯ ಹೆದ್ದಾರಿಯಲ್ಲಿ ಯೂ ಟರ್ನ್ ತೆಗೆದುಕೊಳ್ಳುವ ವೇಳೆ ಲಾರಿ ಹಿಂಬದಿಯಿಂದ ಬಂದು ಢಿಕ್ಕಿ ಹೊಡೆದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಗುರುವಾರ ಬೆಳಗ್ಗಿನ ಜಾವ 5.15 ರ ಸುಮಾರಿಗೆ ಸಂಭವಿಸಿದೆ.
ಬಸ್ ಪಲ್ಟಿಯಾದ ಪರಿಣಾಮ ಚಾಲಕ ಭಾಸ್ಕರ್ ಎನ್. ನಾಯ್ಕ ಅವರು ಗಾಯಗೊಂಡಿದ್ದು, ಅವರನ್ನು ಕುಂದಾಪುರದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ಬಸ್ ಆಗ ತಾನೇ ಬರುತ್ತಿದ್ದ ಪ್ರಯಾಣಿಕರು ಇರಲಿಲ್ಲ. ಮಾತ್ರವಲ್ಲದೆ ಬೆಳಗ್ಗಿನ ಜಾವ ಆಗಿದ್ದರಿಂದ ಹೆದ್ದಾರಿಯಲ್ಲಿ ವಾಹನ ದಟ್ಟಣೆಯೂ ಕಡಿಮೆ ಇದ್ದುದರಿಂದ ಹೆಚ್ಚಿನ ಅನಾಹುತ ಸಂಭವಿಸಲಿಲ್ಲ.
ರಾಷ್ಟ್ರೀಯ ಹೆದ್ದಾರಿಯ ಸಂತೆ ಮಾರುಕಟ್ಟೆ ಬಳಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ತೆರಳಲು ಉಡುಪಿ ಕಡೆಯಿಂದ ಬರುವಂತಹ ಬಸ್ಗಳನ್ನು ತಿರುಗಿಸಲು ಚಾಲಕರು ಪ್ರಯಾಸಪಡುವಂತಾಗಿದೆ. ಇದಲ್ಲದೆ ಹೆದ್ದಾರಿಯು ಆಗಾಗ್ಗೆ ಬ್ಲಾಕ್ ಆಗುತ್ತಿದ್ದು, ಸವಾರರು, ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.
ಲಾರಿ ಚಾಲಕ ಈರಪ್ಪ ಆರ್. ಹಡಗಲಿ ಅವರ ವಿರುದ್ಧ ಕುಂದಾಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.