ಬಿಜೆಪಿಗೆ ಸಹಕರಿಸಲು ಟಿಎಂಸಿ ಮತ್ತು ಆಪ್ ಗೋವಾಕ್ಕೆ ಬಂದಿವೆ : ಗುಂಡೂರಾವ್
Team Udayavani, Nov 22, 2021, 4:37 PM IST
ಪಣಜಿ: ಗೋವಾಕ್ಕೆ ಬಂದಿರುವ ಹೊಸ ಪಕ್ಷ ಗಳು ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಅಲ್ಲ, ಬಿಜೆಪಿ ವಿರೋಧಿ ಮತಗಳ ವಿಭಜನೆ ಮಾಡಲು ಗೋವಾಕ್ಕೆ ಬಂದಿರುವಂತೆ ಕಂಡುಬರುತ್ತಿದೆ ಎಂದು ಗೋವಾ ಕಾಂಗ್ರೆಸ್ ಪ್ರಭಾರಿ ದಿನೇಶ್ ಗುಂಡೂರಾವ್ ತೃಣಮೂಲ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷಗಳನ್ನು ಟೀಕಿಸಿದ್ದಾರೆ.
ಗೋವಾದ ಥಿವಿಮ್ ಮತಕ್ಷೇತ್ರದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಗುಂಡೂರಾವ್, ತೃಣಮೂಲ ಕಾಂಗ್ರೆಸ್ ಪಕ್ಷವು ಗೋವಾಕ್ಕೆ ಬಂದು ಕೆಲವೇ ತಿಂಗಳಲ್ಲಿ ಕಾಂಗ್ರೆಸ್ ಸೇರಿದತೆ ಪ್ರಾದೇಶಿಕ ಪಕ್ಷಗಳ ನಾಯಕರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುವಲ್ಲಿ ಯಶಸ್ಸು ಸಾಧಿಸಿದೆ. ಇದರಿಂದಾಗಿ ಕಾಂಗ್ರೆಸ್ ಪಕ್ಷದ ಮತಗಳು ವಿಭಜನೆಯಾಗುವ ಭೀತಿ ಎದುರಾಗಿದೆ. ಈ ಮತ ವಿಭಜನೆಯ ಲಾಭ ಬಿಜೆಪಿಗೆ ಲಭಿಸುವ ಸಾಧ್ಯತೆಯಿದೆ ಎಂದು ಅಭಿಪ್ರಾಯಪಟ್ಟರು.
ಆಮ್ ಆದ್ಮಿ ಮತ್ತು ಟಿಎಂಸಿ ಈ ಎರಡೂ ಪಕ್ಷಗಳು ಗೋವಾದಲ್ಲಿ ಬಿಜೆಪಿಯನ್ನು ಹೊಡೆದೋಡಿಸಲು ಬಂದಿಲ್ಲ. ಕಾಂಗ್ರೆಸ್ ಪಕ್ಷದ ಮತ ವಿಭಜನೆ ಮಾಡಿ ಬಿಜೆಪಿಗೆ ಸಹಾಯ ಮಾಡಲು ಬಂದಿವೆ ಎಂದು ದಿನೇಶ್ ಗುಂಡೂರಾವ್ ಆರೋಪಿಸಿದರು.