Tripura: ತ್ರಿಪುರಾ ವಿಧಾನಸಭೆಯಲ್ಲಿ ಕೋಲಾಹಲ
Team Udayavani, Jul 8, 2023, 7:25 AM IST
ಹೊಸದಿಲ್ಲಿ: ಬಜೆಟ್ ಅಧಿವೇಶನದ ವೇಳೆಯೇ ತ್ರಿಪುರಾ ವಿಧಾನಸಭೆಯಲ್ಲಿ ಶುಕ್ರವಾರ ಕೋಲಾಹಲ ಸಂಭವಿಸಿದೆ. ಈ ವರ್ಷದ ಆರಂಭದಲ್ಲಿ ವಿಧಾನಸಭೆಯಲ್ಲಿ ಅಶ್ಲೀಲ ವಿಡಿಯೊ ವೀಕ್ಷಿಸಿದ್ದ, ಬಿಜೆಪಿ ಶಾಸಕ ಜದಾಬ್ ಲಾಲ್ ದೇಬ್ನಾಥ್ ವಿರುದ್ಧ ಕ್ರಮ ಕೈಗೊಳ್ಳಲು ವಿಪಕ್ಷ ನಾಯಕರು ಆಗ್ರಹಿಸಿದರು.
ಈ ಪ್ರತಿಭಟನೆ ವೇಳೆ ವಿಪಕ್ಷ ಸದಸ್ಯರು, ಆಡಳಿತ ಪಕ್ಷದ ಸದಸ್ಯರೊಂದಿಗೆ ತಳ್ಳಾಟ ನಡೆಸಿ, ಮೇಜುಗಳ ಮೇಲೆ ನಡೆದರು. ಮಾನವ ಸರಪಳಿಯನ್ನು ನಿರ್ಮಿಸುವ ಮೂಲಕ ಸರ್ಕಾರ ಮತ್ತು ಸ್ಪೀಕರ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ಹಿನ್ನೆಲೆಯಲ್ಲಿ ಸ್ಪೀಕರ್ ಅವರು ವಿಪಕ್ಷಗಳ ಐವರು ಸದಸ್ಯರನ್ನು ದಿನದ ಮಟ್ಟಿಗೆ ಅಮಾನತುಗೊಳಿಸಿದರಾದರೂ ಕೊನೆಯಲ್ಲಿ ವಿಪಕ್ಷಗಳ ಆಗ್ರಹ, ಪ್ರತಿಭಟನೆಗೆ ಮಣಿದು ಅಮಾನತನ್ನು ಹಿಂಪಡೆದರು.