ನಮ್ಮ ಅಭಿಪ್ರಾಯ ಶುಕ್ರವಾರ ನೀಡುತ್ತೇವೆ : ಪ್ರತಾಪ್ ಸಿಂಹಗೆ ಸಚಿವರ ತಿರುಗೇಟು
Team Udayavani, Jan 19, 2022, 3:46 PM IST
ಚಿತ್ರದುರ್ಗ: ಜನರ ಆರೋಗ್ಯ ನಮಗೆ ತುಂಬಾ ಮುಖ್ಯ, ನಮ್ಮ ಅಭಿಪ್ರಾಯ ಶುಕ್ರವಾರ ನೀಡುತ್ತೇವೆ ಎಂದು ಬುಧವಾರ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿಕೆ ನೀಡಿದ್ದಾರೆ.
ಹಿರಿಯೂರು ತಾಲ್ಲೂಕಿನ ಆದಿವಾಲ ಗ್ರಾಮದಲ್ಲಿ ಸುದಿಗಾರರೊಂದಿಗೆ ಮಾತನಾಡಿದ ಅವರು, ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಪ್ರತಿಕ್ರಿಯಿಸಿ , ಪ್ರತಿಯೊಬ್ಬರಿಗೂ ಅವರದ್ದೆ ಆದ ಅಭಿಪ್ರಾಯ ಇರುತ್ತದೆ.ಮುಖ್ಯಮಂತ್ರಿಗಳು ರಾಜ್ಯದ ಜನರ ಆರೋಗ್ಯದ ಹಿತ ಕಾಯಲು ನಿರ್ಣಯ ತೆಗೆದುಕೊಳ್ಳುತ್ತಾರೆ.ನಾನು ಯಾರ ಹೇಳಿಕೆಗೂ ಕೂಡ ಪ್ರತಿಕ್ರಿಯೆ ಕೊಡುವುದಿಲ್ಲ. ಜನರ ಆರೋಗ್ಯ ನನಗೆ ತುಂಬಾ ಮುಖ್ಯ, ನಮ್ಮ ಅಭಿಪ್ರಾಯ ಶುಕ್ರವಾರ ನೀಡುತ್ತೇವೆ ಎಂದರು.
ಇದನ್ನೂ ಓದಿ:ಲಾಕ್ ಡೌನ್, ಕರ್ಫ್ಯೂ ತೆಗೆಯಿರಿ: ಸರಕಾರದ ವಿರುದ್ಧವೇ ಸಿಂಹ ಘರ್ಜನೆ !
ಸಿಎಂ ಮನೆ ಬಳಿ ಕಾಂಗ್ರೆಸ್ ನಾಯಕರು ಧರಣಿ ನಡೆಸುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಪರವಾನಿಗೆ ಪಡೆದು ಅವರು ಪ್ರತಿಭಟನೆ ಮಾಡಲಿ. ಯಾರ ಮನೆ ಬಳಿ, ಯಾವ ರೀತಿ ಬೇಕಾದರೂ ಪ್ರತಿಭಟಿಸಲು ಅವಾಕಾಶ ಇದೆ.ಆದರೆ ಯಾವ ಪುರುಷಾರ್ಥಕ್ಕೆ ಪ್ರತಿಭಟನೆ ಎಂಬುದು ತಿಳಿಸಲಿ ಎಂದರು.
ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಯಾರು ತಪ್ಪು ಮಾಡಿದರು ತಪ್ಪೇ. ನಿಯಮಗಳನ್ನು ಯಾರೂ ಸಹ ಮೀರಿ ನಡೆಯಬಾರದು. ಶುಕ್ರವಾರದ ಸಭೆಯಲ್ಲಿ ಮುಂದಿನ ಕ್ರಮದ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.
ಸಾಧಕ ಬಾಧಕ ಗಮನಿಸಿ ಸಿಎಂ ಬೊಮ್ಮಾಯಿ ಅಂತಿಮ ನಿರ್ಣಯ ಕೈಗೊಳ್ಳುತ್ತಾರೆ. ವಿಪಕ್ಷ ನಾಯಕರು ಹತಾಶೆಯಿಂದ ಮಾತಾಡುತ್ತಿದ್ದಾರೆ, ನಾನು ಪ್ರತಿಕ್ರಿಯಿಸುವುದಿಲ್ಲ ಎಂದರು.
ಏರ್ ಪೋರ್ಟ್ ನಲ್ಲಿ ಕೊವಿಡ್ ಟೆಸ್ಟ್ ರಿಪೋರ್ಟ್ ಗೋಲ್ ಮಾಲ್ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ವಿಚಾರ ಈವರೆಗೆ ನನ್ನ ಗಮನಕ್ಕೆ ಬಂದಿಲ್ಲ. ತಪ್ಪು ವರದಿ ಕೊಟ್ಟಿದ್ದರೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಯಾವುದೇ ಲ್ಯಾಬ್ ತಪ್ಪು ವರದಿ ನೀಡಿದ್ದರೆ ಲೈಸನ್ಸ್ ರದ್ದು ಮಾಡುತ್ತೇವೆ. ವಿಮಾನ ನಿಲ್ದಾಣವೇ ಆಗಿರಲಿ, ಎಲ್ಲೇ ತಪ್ಪು ಆಗಿದ್ದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.