ಲೈಂಗಿಕ ಕಿರುಕುಳ: 6 ಕೇಸು ದಾಖಲು; ಮಹಿಳೆ ಸಹಿತ ಮೂವರು ಪೊಲೀಸ್ ವಶಕ್ಕೆ
Team Udayavani, Dec 20, 2022, 7:18 PM IST
ಕಾಸರಗೋಡು: 19ರ ಹರೆಯದ ಯುವತಿಯನ್ನು ಹಲವೆಡೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ ಘಟನೆಗೆ ಸಂಬಂಧಿಸಿ ಕಾಸರಗೋಡು ಪೊಲೀಸರು ಆರು ಕೇಸುಗಳನ್ನು ದಾಖಲಿಸಿಕೊಂಡು ಮಹಿಳೆ ಸಹಿತ ಮೂವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ವಿದ್ಯಾನಗರ ಪೊಲೀಸ ಠಾಣೆ ವ್ಯಾಪ್ತಿಯ ತರುಣಿಗೆ ಆಕೆಯ ಸಂಬಂಧಿಕ ಯುವಕ ಮಹಿಳೆಯ ಸಹಾಯದೊಂದಿಗೆ ಕಿರುಕುಳ ನೀಡಿರುವುದಾಗಿಯೂ, ಅಲ್ಲದೆ ಕಾಸರಗೋಡು, ಚೆರ್ಕಳ ಹಾಗು ತೃಶ್ಶೂರು, ಮಂಗಳೂರು ಮೊದಲಾದೆಡೆಗೆ ಕರೆದೊಯ್ದು ಹಲವರಿಗೆ ಒಪ್ಪಿಸಿರುವುದಾಗಿಯೂ ಪೊಲೀಸರಿಗೆ ದೂರು ನೀಡಲಾಗಿದೆ. ಅದರಂತೆ ಕೇಸು ದಾಖಲಿಸಲಾಗಿದೆ.
ಟ್ಯಾಂಕರ್ ಢಿಕ್ಕಿ: ಸ್ಕೂಟರ್ ಸವಾರ ಸಾವು
ಕಾಸರಗೋಡು: ಪಳ್ಳಿಕೆರೆ-ಪೆರಿಯ ರಸ್ತೆಯಲ್ಲಿ ಡಿ. 19ರಂದು ರಾತ್ರಿ 11.15ಕ್ಕೆ ಟ್ಯಾಂಕರ್ ಲಾರಿ ಢಿಕ್ಕಿ ಹೊಡೆದು ಸ್ಕೂಟರ್ ಸವಾರ ಬೇಕಲ ಮವ್ವಲ್ ನಿವಾಸಿ ಅಬ್ದುಲ್ ರಹಿಮಾನ್ ಅವರ ಪುತ್ರ ಅಶ್ಫಾಕ್(18) ಮೃತಪಟ್ಟರು. ಜತೆಯಲ್ಲಿದ್ದ ಉದುಮ ಪಾಕ್ಯಾರ್ ನಿವಾಸಿ ಬಶೀರ್ ಅವರ ಪುತ್ರ ಅಬ್ದುಲ್ ರಹಿಮಾನ್ ಗಂಭೀರ ಗಾಯಗೊಂಡಿದ್ದು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮನೆಯಿಂದ ಚಿನ್ನಾಭರಣ ಕಳವು
ಬೋವಿಕ್ಕಾನ: ಮುಳಿಯಾರು ಗ್ರಾ. ಪಂ. ಸದಸ್ಯೆ ಕಾಚಿಕ್ಕಾಡ್ ನಿವಾಸಿ ಹಸೀನಾ ಸತ್ತಾರ್ ಅವರ ಮನೆಯಿಂದ 7 ಪವನ್ ಚಿನ್ನಾಭರಣ ಕಳವು ಮಾಡಿದ ಘಟನೆ ನಡೆದಿದೆ.
ಡಿ. 15 ಹಾಗೂ 17 ರ ಮಧ್ಯೆ ಕಳವು ನಡೆದಿದೆ. ಹಸೀನಾ ಅವರ ಪುತ್ರಿಯ ವಿವಾಹ ಇತ್ತೀಚೆಗೆ ನಡೆದಿತ್ತು. ಆಬಳಿಕ ಮನೆಯಲ್ಲಿ ಕಪಾಟು ಪರಿಶೀಲಿಸಿದಾಗ ಚಿನ್ನಾಭರಣ ಕಳವಾಗಿರುವುದು ತಿಳಿದು ಬಂತು. ಈ ಬಗ್ಗೆ ಆದೂರು ಪೊಲೀಸರಿಗೆ ದೂರು ನೀಡಲಾಗಿದೆ.