ಕರ್ಮಚಾರಿ ಆಯೋಗ ಸದಸ್ಯರಿಂದ ಸ್ವಚ್ಛತಾ ಕಾರ್ಮಿಕರೊಂದಿಗೆ ಸಂವಾದ
Team Udayavani, Nov 2, 2021, 4:52 AM IST
ಕಾಸರಗೋಡು: ಜಿಲ್ಲೆಯ ಶುಚೀಕರಣ ಸಿಬಂದಿಯೊಂದಿಗೆ ನ್ಯಾಶನಲ್ ಕಮಿಷನ್ ಫಾರ್ ಸಫಾಯಿ ಕರ್ಮಚಾರೀಸ್ ಸದಸ್ಯರಾಗಿರುವ ಕೇಂದ್ರ ಸರಕಾರದ ಸ್ಟಾಟಸ್ ಕಾರ್ಯದರ್ಶಿ ಡಾ| ಪಿ.ಪಿ. ವಾವ ಸೋಮವಾರ ಸಂವಾದ ನಡೆಸಿದರು.
ಕೇರಳ ರಾಜ್ಯ ಸಂದರ್ಶನದ ಅಂಗವಾಗಿ ಕಾಸರಗೋಡು ಜಿಲ್ಲೆಗೆ ಭೇಟಿ ನೀಡಿದ ಅವರು ಜಿಲ್ಲಾಧಿಕಾರಿ ಕಚೇರಿಯ ಕಿರು ಸಭಾಂಗಣದಲ್ಲಿ ಶುಚೀಕರಣ ಕಾರ್ಮಿಕರ ಸಮಸ್ಯೆಗಳನ್ನು ಆಲಿಸಿದರು. ವಿವಿಧ ಇಲಾಖೆಗಳ ಮುಖ್ಯಸ್ಥರು, ನಗರಸಭೆ ಕಾರ್ಯದರ್ಶಿಗಳು, ನಗರಸಭೆಗಳ ಶುಚೀಕರಣ ಸಿಬಂದಿ, ಸಫಾಯಿ ಕರ್ಮಚಾರೀಸ್ ಪ್ರತಿನಿಧಿಗಳು, ಆರೋಗ್ಯ ವಿಭಾಗ ಸಿಬ್ಬಂದಿಗಳು ಮೊದಲಾದವರೊಂದಿಗೆ ಮಾತುಕತೆ ನಡೆಸಿದರು.
ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ವೀರ್ ಚಂದ್, ರಾಜ್ಯ ಸಂಚಾಲಕ ನ್ಯಾಯವಾದಿ ಗೋಪಿ ಕೊಚ್ಚುರಾನ್, ಶುಚಿತ್ವ ಮಿಷನ್ ಜಿಲ್ಲಾ ಸಂಚಾಲಕಿ ಲಕ್ಷ್ಮೀ ಎ., ಸಹಾಯಕ ಸಂಚಾಲಕ ಕೆ.ವಿ. ಪ್ರೇಮರಾಜನ್ ಮೊದಲಾದವರು ಉಪಸ್ಥಿತರಿದ್ದರು. ಅನಂತರ ಅಮೈ ಕಾಲನಿಗೆ ಭೇಟಿ ನೀಡಿದ ಅವರು ಶುಚೀಕರಣ ಸಿಬಂದಿಗಳ ಕುಟುಂಬಗಳ ಸದಸ್ಯರೊಂದಿಗೆ ಮಾತುಕತೆ ನಡೆಸಿದರು. ಇಲ್ಲಿ ತಲೆದೋರಿರುವ ಜಾಗ ಸಂಬಂಧ ಸಮಸ್ಯೆಗಳನ್ನು ಪರಿಹರಿಸಲು ಅವರು ಜಿಲ್ಲಾಧಿಕಾರಿಗೆ ಆದೇಶ ನೀಡಿದರು.