Crime News ಕಾಸರಗೋಡು ಅಪರಾಧ ಸುದ್ದಿಗಳು
Team Udayavani, Dec 6, 2023, 8:21 PM IST
ನೇಣು ಬಿಗಿದ ಸ್ಥಿತಿಯಲ್ಲಿ
ಯುವಕನ ಶವ ಪತ್ತೆ
ಮಂಜೇಶ್ವರ: ಮಂಜೇಶ್ವರ ರೈಲು ನಿಲ್ದಾಣದಿಂದ ಸುಮಾರು 100 ಮೀ. ದೂರದಲ್ಲಿ ರೈಲು ಹಳಿ ಸಮೀಪವಿರುವ ವಿದ್ಯುತ್ ಕಂಬದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.
ಸುಮಾರು 45ರಿಂದ 50 ವರ್ಷ ಪ್ರಾಯ ಅಂದಾಜಿಸಲಾಗಿದೆ. ಮೃತ ವ್ಯಕ್ತಿ ಒಳ ಉಡುಪು ಮಾತ್ರವೇ ಧರಿಸಿದ್ದು, ಬಟ್ಟೆಯಿಂದ ನೇಣು ಬಿಗಿಯಲಾಗಿದೆ. ಮಂಜೇಶ್ವರ ಪೊಲೀಸರು ಮತ್ತು ರೈಲ್ವೇ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ನಡೆಸಿದರು.
ಸಾವಿನ ಬಗ್ಗೆ ನಿಗೂಢತೆಗಳಿರುವುದಾಗಿ ಹೇಳಲಾಗಿದೆ. ಮೃತ ವ್ಯಕ್ತಿಯ ಎರಡೂ ಕಾಲುಗಳಲ್ಲಿ ಗಾಯಗಳು ಹಾಗೂ ಅದರಿಂದ ರಕ್ತ ಒಸರುತ್ತಿತ್ತು. ಈ ಗಾಯಗಳು ಹೇಗೆ ಉಂಟಾಯಿತು ಎಂಬ ಬಗ್ಗೆ ಸಮಗ್ರ ತನಿಖೆಯಿಂದ ತಿಳಿಯಬಹುದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಫೇಸ್ಬುಕ್ನಲ್ಲಿ ವಿವಾದಿತ ಪೋಸ್ಟ್ : ಯುವಕನ ವಿರುದ್ಧ ಕೇಸು
ಕಾಸರಗೋಡು: ಫೇಸ್ಬುಕ್ನಲ್ಲಿ ವಿವಾದಿತ ಪೋಸ್ಟ್ ಹಾಕಿದ ಶಿರಿಯದ ಅಬ್ದುಲ್ ಖಾದರ್ ಪುದಿಯಂಗಾಡಿ ವಿರುದ್ಧ ಕುಂಬಳೆ ಪೊಲೀಸರು ಸ್ವಯಂ ಕೇಸು ದಾಖಲಿಸಿಕೊಂಡಿದ್ದಾರೆ.ಹಿಂದೂ ಧರ್ಮೀಯರ ನಂಬುಗೆಗೆ ಧಕ್ಕೆ ತರುವ ರೀತಿಯ ಪೋಸ್ಟ್ ಹಾಕಿದ್ದಾಗಿ ಪೊಲೀಸರು ಕೇಸು ದಾಖಲಿಸಿದ್ದಾರೆ.
ಠೇವಣಿ ವಂಚನೆ : ತನಿಖೆ ಆರಂಭ
ಕುಂಬಳೆ: ಸಾಕಷ್ಟು ಭರವಸೆ ನೀಡಿ ಕೋಟ್ಯಂತರ ರೂ. ಠೇವಣಿ ಸಂಗ್ರಹಿಸಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಕುಂಬಳೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ತನಿಖೆಯ ಅಂಗವಾಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ರೋಯಲ್ ಟ್ರಾವಂಕೂರ್ ಕಂಪೆನಿಯ ಕುಂಬಳೆ ಶಾಖೆಯ ಸಿಬಂದಿಗಳಾದ ಐವರು ಯುವತಿಯರಿಂದ ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ವಿದ್ಯಾರ್ಥಿಯ ಸಾವು : ಪೊಲೀಸರ ವಿರುದ್ಧ ಪ್ರಕರಣ ದಾಖಲು
ಕುಂಬಳೆ: ಪೊಲೀಸರು ತಮ್ಮ ಜೀಪಿನಲ್ಲಿ ಹಿಂಬಾಲಿಸುತ್ತಿದ್ದ ವೇಳೆ ಕಾರು ನಿಯಂತ್ರಣ ತಪ್ಪಿ ಮಗುಚಿ ಬಿದ್ದು ಅಂಗಡಿಮೊಗರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ ಟು ವಿದ್ಯಾರ್ಥಿ ಪೇರಾಲ್ ಕಣ್ಣೂರು ನಿವಾಸಿ ಫರೋಸ್ (17) ಸಾವಿಗೀಡಾದ ಪ್ರಕರಣಕ್ಕೆ ಸಂಬಂದಿಸಿ ಇಬ್ಬರು ಪೊಲೀಸರ ವಿರುದ್ಧ ಕಾಸರಗೋಡು ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ (2) ದ ನಿರ್ದೇಶದಂತೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ರೈಲಿಗೆ ಕಲ್ಲು ತೂರಾಟ : ಪ್ರಯಾಣಿಕನಿಗೆ ಗಾಯ
ಕಾಸರಗೋಡು: ಪುಣೆ-ಎರ್ನಾಕುಳಂ ಸೂಪರ್ ಫಾಸ್ಟ್ ರೈಲು ಗಾಡಿಗೆ ಕಣ್ಣೂರಿನ ಎಡಕ್ಕಾಡ್ ಮತ್ತು ಧರ್ಮಡಂ ಮಧ್ಯೆ ಕಿಡಿಗೇಡಿಗಳು ಕಲ್ಲೆಸೆದಿದ್ದು, ಕಣ್ಣೂರು ಕನ್ನಾಡಿಪರಂಬ ನಿವಾಸಿ ಮುಹಮ್ಮದ್ ಅನಸ್ (25) ಗಾಯಗೊಂಡಿದ್ದಾರೆ.
ಅಲ್ಲದೆ ಕಲ್ಲು ತೂರಾಟದಿಂದ ರೈಲಿನ ಬೋಗಿಯೊಂದರ ಕಿಟಕಿ ಗಾಜು ಕೂಡ ಪುಡಿಯಾಗಿದೆ. ರೈಲ್ವೇ ಪೊಲೀಸರು ಮತ್ತು ರೈಲ್ವೇ ಭದ್ರತಾ ಪಡೆ ಪ್ರಕರಣ ದಾಖಲಿಸಿಕೊಂಡಿದೆ.