ಮೇ 24: ಕಾಸರಗೋಡು ಜಿಲ್ಲೆ ರಚನೆ ದಿನ; ಬಿಜೆಪಿಯಿಂದ ವಿವಿಧ ಕಾರ್ಯಕ್ರಮ
Team Udayavani, May 14, 2020, 5:42 AM IST
ಕಾಸರಗೋಡು: ಕಾಸರಗೋಡು ಜಿಲ್ಲೆ ರೂಪೀಕರಣಗೊಂಡ ಮೇ 24ರಂದು ಬಿಜೆಪಿ ಮತ್ತು ವಿವಿಧ ಮೋರ್ಚಾಗಳ ಆಶ್ರಯದಲ್ಲಿ ವಿವಿಧ ಕಾರ್ಯಕ್ರಮಗಳನ್ನು ನಡೆಸಲು ಬಿಜೆಪಿ ಜಿಲ್ಲಾ ಪದಾಧಿಕಾರಿಗಳ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಕೆ. ಶ್ರೀಕಾಂತ್ ಹೇಳಿದ್ದಾರೆ.
ಲಾಕ್ಡೌನ್ ಹಿನ್ನೆಲೆಯಲ್ಲಿ ಮನೆಯಿಂದಲೇ ವೀಡಿಯೋ ಕಾನ್ಫರೆನ್ಸ್ ಮೂಲಕ ಅವರು ಪತ್ರಕರ್ತರಿಗೆ ಮಾಹಿತಿ ನೀಡಿದರು.
“ಕಾಸರಗೋಡು ಜಿಲ್ಲೆ ನಿನ್ನೆ-ಇಂದು-ನಾಳೆ’ ಎಂಬ ಘೋಷಣೆಯೊಂದಿಗೆ ಪ್ರಚಾರ ಕಾರ್ಯಕ್ರಮ ಆಯೋಜಿಸಲಾಗುವುದು. ಒಂದು ತಿಂಗಳ ಕಾಲಾವಧಿಯ ಕಾರ್ಯಕ್ರಮದಲ್ಲಿ ಜಿಲ್ಲೆಯ ಅಭಿವೃದ್ಧಿ, ಆರೋಗ್ಯ, ಶಿಕ್ಷಣ ಕ್ಷೇತ್ರದ ಹಿಂದುಳಿದಿರುವಿಕೆಗೆ ಪರಿಹಾರ ಮಾರ್ಗಗಳ ಕುರಿತು ಚರ್ಚಿಸಲಾಗುವುದು. ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿನ ಸಾಧಕರಿಗೆ ಸಮ್ಮಾನ ನಡೆಯಲಿದೆ. ಸೋಶಿಯಲ್ ಮೀಡಿಯ ಮೂಲಕ ಪ್ರಮುಖರೊಂದಿಗೆ ಚರ್ಚೆ, ಕ್ರಿಯಾತ್ಮಕ ನಿರ್ದೇಶಗಳು, ಅಭಿಪ್ರಾಯಗಳನ್ನು ಸ್ವೀಕರಿಸಿ ಅಭಿಯಾನಗಳು, ಆರೋಗ್ಯ, ಶಿಕ್ಷಣ, ಕೃಷಿ, ಕೈಗಾರಿಕೆ, ಉದ್ಯೋಗ, ಪರಿಸರ ಮೊದಲಾದ ಕ್ಷೇತ್ರಗಳಲ್ಲಿನ ಸಾಧನೆಯ ಕುರಿತು ಖ್ಯಾತರೊಂದಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ಮೊದಲಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಕೆ. ಶ್ರೀಕಾಂತ್ ಹೇಳಿದ್ದಾರೆ.