ಮಂಜೇಶ್ವರ: ರೈಲು ಹಳಿಯಲ್ಲಿ ಕಲ್ಲು ಇರಿಸಿ ಬುಡಮೇಲು ಕೃತ್ಯಕ್ಕೆ ಯತ್ನ
Team Udayavani, May 5, 2023, 8:20 AM IST
ಮಂಜೇಶ್ವರ: ಮಂಜೇಶ್ವರ-ಉಪ್ಪಳ ರೈಲು ನಿಲ್ದಾಣದ ನಡುವಿನ ರೈಲು ಹಳಿಯಲ್ಲಿ ದುಷ್ಕರ್ಮಿಗಳು ಕಲ್ಲು ಇರಿಸಿ ರೈಲು ಬುಡಮೇಲು ಕೃತ್ಯಕ್ಕೆ ಯತ್ನಿಸಿದ ಘಟನೆ ನಡೆದಿದೆ. ಮಲಬಾರ್ ಎಕ್ಸ್ಪ್ರೆಸ್ ರೈಲು ಮಂಗಳೂರಿನಿಂದ ಮಂಜೇಶ್ವರಕ್ಕೆ ಬರುತ್ತಿರುವ ವೇಳೆ ರೈಲು ಹಳಿಯ ಮೇಲೆ ಸಾಲಾಗಿ ಕಗ್ಗಲ್ಲು ಇರಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ರೈಲು ಅದರ ಮೇಲೆ ಸಂಚರಿಸಿದ್ದು, ಸಂಭಾವ್ಯ ಬುಡಮೇಲು ಕೃತ್ಯ ಅದೃಷ್ಟವಶಾತ್ ತಪ್ಪಿ ಹೋಗಿದೆ.
ವಿಷಯ ತಿಳಿದು ಕಾಸರಗೋಡು ರೈಲ್ವೇ ಪೊಲೀಸರು ಹಾಗು ರೈಲ್ವೇ ಭದ್ರತಾ ಪಡೆಯ ಕಾಸರಗೋಡು ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಈ ಬಗ್ಗೆ ಆರ್ಪಿಎಫ್ ಸಮಗ್ರ ತನಿಖೆ ನಡೆಸುತ್ತಿದೆ.
ಬೇಕಲ ಮತ್ತು ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಪ್ರದೇಶಗಳಲ್ಲಿ ಈ ಹಿಂದೆ ಇಂತಹ ಹಲವು ಘಟನೆಗಳು ನಡೆದಿತ್ತು. ಈ ಪ್ರದೇಶದಲ್ಲಿ ಸಂಚರಿಸುತ್ತಿರುವ ರೈಲುಗಳಿಗೆ ಕಲ್ಲೆಸೆಯುತ್ತಿರುವುದೂ ಇಲ್ಲಿ ಸಾಮಾನ್ಯವಾಗಿದೆ.