ರೇಷನಿಂಗ್ ಜಾರಿಗೆ ಪಾಲಿಕೆ ಒಲವು: ನಗರದಲ್ಲಿ ಬಿಗಡಾಯಿಸುತ್ತಿದೆ ನೀರಿನ ಸಮಸ್ಯೆ
Team Udayavani, Apr 15, 2023, 3:47 PM IST
ಮಹಾನಗರ: ವಿಧಾನಸಭೆ ಚುನಾವಣ ಕಾವು ಏರುತ್ತಿದ್ದಂತೆ, ಮಂಗಳೂರು ನಗರದಲ್ಲಿ ಕುಡಿಯುವ ನೀರಿನ ಕೊರತೆಯೂ ಬಿಗಡಾಯಿಸಲು ಆರಂಭವಾಗಿದೆ. ಯಾವುದೇ ಕ್ಷಣದಲ್ಲಿ ಕುಡಿಯುವ ನೀರು ಕಡಿತವಾಗುವ ಎಲ್ಲ ಲಕ್ಷಣಗಳು ದಟ್ಟವಾಗಿವೆ.
ತುಂಬೆ ಡ್ಯಾಂನಲ್ಲಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿರುವ ಕಾರಣ ನಗರದ ಭವಿಷ್ಯದ ದೃಷ್ಟಿಯಿಂದ ನೀರು ರೇಷನಿಂಗ್ ಮಾಡುವುದು ಅನಿವಾರ್ಯ ಎಂಬ ಪರಿಸ್ಥಿತಿಯನ್ನು ಮಂಗಳೂರು ಪಾಲಿಕೆ ಮನಗಂಡಿದೆ. ಹೀಗಾಗಿ ಕೆಲವೇ ದಿನದಲ್ಲಿ ರೇಷನಿಂಗ್ ನಿಯಮ ಜಾರಿಗೆ ಬರುವ ಎಲ್ಲ ಸಾಧ್ಯತೆಗಳಿವೆ. ಮೊದಲಿಗೆ 2 ದಿನಕ್ಕೊಮ್ಮೆ ನೀರು ನಿಯಮ ಜಾರಿಗೆ ತರಲು ಪಾಲಿಕೆ ಯೋಚನೆ ಮಾಡಿದೆ.
ಎ. 5ರಂದು ಬಂಟ್ವಾಳದ ಶಂಭೂರಿನ ಎಎಂಆರ್ ಅಣೆಕಟ್ಟಿನಿಂದ ತುಂಬೆ ಅಣೆಕಟ್ಟಿಗೆ ನೀರು ಬಿಡಲಾಗಿತ್ತು. 6 ಮೀ.ವರೆಗೆ ನೀರು ನಿಲ್ಲಿಸಲಾಗಿತ್ತು. ಸದ್ಯ ತುಂಬೆ ಡ್ಯಾಂನಲ್ಲಿ 5.57 ಮೀ. ನೀರು ಸಂಗ್ರಹವಿದೆ. ಎಎಂಆರ್ ಡ್ಯಾಂನಲ್ಲಿ 14.17 ಮೀ. ನೀರು ಸಂಗ್ರಹವಿದೆ.
ನೀರಿಗೆ ಹಾಹಾಕಾರ
ನಗರದ ವ್ಯಾಪ್ತಿಯಲ್ಲಿ ಕೆಲವು ಕಡೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ. ಅಪಾರ್ಟ್ಮೆಂಟ್, ಹೊಟೇಲ್, ವಾಣಿಜ್ಯ ಸಂಕೀರ್ಣಗಳು, ಪಿ.ಜಿ.ಗಳು, ಕೆಲವು ಶಿಕ್ಷಣ ಸಂಸ್ಥೆಗಳು ಖಾಸಗಿಯಾಗಿ ಟ್ಯಾಂಕರ್ಗಳ ಮೂಲಕ ನೀರು ಪಡೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವು ಎತ್ತರದ ಪ್ರದೇಶದ “ಎಂಡ್ ಪಾಯಿಂಟ್’ಗಳಿಗೆ ಪೈಪ್ ನೀರು ತಲುಪುವಲ್ಲಿ ಸಮಸ್ಯೆಯಾಗುತ್ತಿದೆ. ಅಂತಹ ಸ್ಥಳಗಳಿಗೆ ಪಾಲಿಕೆಯಿಂದಲೂ ನೀರು ಟ್ಯಾಂಕರ್ ಮೂಲಕ ಪೂರೈಕೆ ಮಾಡಲಾಗುತ್ತಿದೆ.
ವಿವಿಧೆಡೆ ಕಟ್ಟಡ ನಿರ್ಮಾಣ ಸಹಿ ತ ವಿವಿಧ ನಿರ್ಮಾಣ ಕಾಮಗಾರಿಗಳು ನಡೆಯುತ್ತಿದ್ದು, ಇವುಗಳಿಗೆ ಪಾಲಿಕೆಯಿಂದ ನೀರು ಪೂರೈಕೆ ಸ್ಥಗಿತಗೊಳಿಸಲಾಗಿದೆ. ಇದರಿಂದ ನಿರ್ಮಾಣ ಸಂಸ್ಥೆಗಳೂ ಪರ್ಯಾಯ ಮೂಲವಾಗಿ ಟ್ಯಾಂಕರ್ ನೀರು ಅವಲಂಬಿಸಿವೆ.
ಟ್ಯಾಂಕರ್ ಡಿಮ್ಯಾಂಡ್
ಟ್ಯಾಂಕರ್ಗಳು ನೀರು ಪಡೆಯುತ್ತಿರುವ ನಗರದ ಕೆಲವು ಜಲ ಮೂಲಗಳಲ್ಲಿಯೂ ನೀರಿನ ಮಟ್ಟ ಕಡಿಮೆಯಾಗಿದೆ. ಕದ್ರಿ ಪಿಂಟೋಸ್ ಲೇನ್ ಬಳಿಯಿಂದ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಖಾಸಗಿ ಟ್ಯಾಂಕರ್ಗಳು ಬಾವಿ, ಬೋರ್ವೆಲ್ನಿಂದ ನೀರು ತೆಗೆದು ಪೂರೈಕೆ ಮಾಡುತ್ತವೆ. ಸುಮಾರು 6 ಕಡೆಗಳಿಂದ ನೀರು ತೆಗೆಯಬಹುದಾಗಿದ್ದು, ಇಲ್ಲಿಯೂ ನೀರಿನ ಲಭ್ಯತೆ ಕಡಿಮೆಯಾಗಿದೆ. ಅತ್ತಾವರ ನಂತೂರಿನಲ್ಲಿಯೂ ಈ ಸಮಸ್ಯೆ ಇದೆ.
ಮತ್ತೊಮ್ಮೆ ಎಎಂಆರ್ ನೀರು?
ಮೂಲಗಳ ಪ್ರಕಾರ ಎಎಂಆರ್ನಿಂದ ಕೈಗಾರಿಕೆಗಳಿಗೆ ನೀರು ಸರಬರಾಜು ನಿಲ್ಲಿಸಲಾಗಿದೆ. ಡ್ಯಾಂನಲ್ಲಿರುವ ನೀರು ಬಿರುಬಿಸಿಲಿಗೆ ಆವಿಯಾಗುತ್ತಿದೆ. ಕೆಲವು ದಿನಗಳವರೆಗೆ ನೀರು ಆವಿಯಾಗುವ ಸಾಧ್ಯತೆಯೇ ಅಧಿಕ. ಹೀಗಾಗಿ ಮತ್ತೊಮ್ಮೆ ತುಂಬೆ ಡ್ಯಾಂಗೆ ನೀರು ಹರಿಸುವ ಬಗ್ಗೆ ಜಿಲ್ಲಾಡಳಿತ/ಪಾಲಿಕೆ ಚಿಂತನೆ ನಡೆಸಬೇಕಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಪಾಲಿಕೆ ಆಯುಕ್ತ ಚನ್ನಬಸಪ್ಪ ಅವರ ಪ್ರಕಾರ “ಸದ್ಯ ತುಂಬೆ ಡ್ಯಾಂನಲ್ಲಿ 5.57 ಮೀ. ನೀರು ಸಂಗ್ರಹವಿದೆ. ಮತ್ತೂಮ್ಮೆ ಎಎಂಆರ್ನಿಂದ ನೀರು ಹರಿಸುವ ಸಾಧ್ಯತೆಗಳ ಬಗ್ಗೆ ಪರಿಶೀಲಿಸಲಾಗುವುದು’ ಎನ್ನುತ್ತಾರೆ.
ಮಳೆಯಾಗಲಿ…
ನೇತ್ರಾವತಿಯಲ್ಲಿ ನೀರು ಹರಿಯಬೇಕಾದರೆ ಘಟ್ಟದ ತಪ್ಪಲಲ್ಲಿ ಉತ್ತಮ ಮಳೆಯಾಗಬೇಕು. ಸುಬ್ರಹ್ಮಣ್ಯ ಭಾಗದಲ್ಲಿ ಮಳೆಯಾದರೆ ಕುಮಾರಧಾರಾ ನದಿಯೂಲ್ಲೂ ನೀರಿನ ಹರಿಯುವಿಕೆ ಹೆಚ್ಚಾಗುತ್ತದೆ. ಇದು ಕೂಡ ನೇತ್ರಾವತಿಯೊಂದಿಗೆ ಸಂಗಮವಾಗುವುದರಿಂದ ನೇತ್ರಾವತಿಯಲ್ಲಿ ನೀರು ಹೆಚ್ಚಾಗುತ್ತದೆ. ಸದ್ಯ ನೇತ್ರಾವತಿಯಲ್ಲಿ ನೀರಿನ ಹರಿವು ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಕಳೆದ ವರ್ಷ ಎಪ್ರಿಲ್ ಅಂತ್ಯ- ಮೇ ತಿಂಗಳಲ್ಲಿ ಉತ್ತಮ ಮಳೆ ಸುರಿದು ನೇತ್ರಾವತಿ ಸಹಿತ ವಿವಿಧ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿತ್ತು.
ರೇಷನಿಂಗ್ ಅನಿವಾರ್ಯ
ತುಂಬೆ ಡ್ಯಾಂನಲ್ಲಿ ನೀರಿನ ಮಟ್ಟ ಇಳಿಕೆಯಾಗುತ್ತಿದೆ. ಮಳೆ ಕೂಡ ಬರುತ್ತಿಲ್ಲ. ನೀರಿನ ಬಳಕೆ ಕೂಡ ಅಧಿಕವಾಗಿದೆ. ಭವಿಷ್ಯದ ದೃಷ್ಟಿಯಿಂದ ನೀರು ಸರಬರಾಜಿನಲ್ಲಿ ರೇಷನಿಂಗ್ ಮಾಡುವ ಅನಿವಾರ್ಯವಿದೆ. ಕೆಲವೇ ದಿನದಲ್ಲಿ ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು.
– ಚನ್ನಬಸಪ್ಪ, ಆಯುಕ್ತರು, ಮಂಗಳೂರು ಮಹಾನಗರ ಪಾಲಿಕೆ
-ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ
Tollywood: ಅಧಿಕೃತವಾಗಿ ರಿವೀಲ್ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್ ಡೇಟ್
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್?