ಪಿಲಿಕುಳದಲ್ಲಿ ಕಂಬಳ ಪ್ರದರ್ಶನ: ಕ್ರೀಡಾ ಇಲಾಖೆ ಒಲವು
ಪ್ರವಾಸಿ ಆಕರ್ಷಣೆ; ದಕ್ಷಿಣ ಕನ್ನಡ ಜಿಲ್ಲಾಡಳಿತದ ಪ್ರಸ್ತಾವನೆ
Team Udayavani, May 25, 2022, 10:28 AM IST
ಪಿಲಿಕುಳ: ಕರಾವಳಿಯ ಜಾನಪದ ಕ್ರೀಡೆ ಕಂಬಳಕ್ಕೆ ಪ್ರವಾಸೋದ್ಯಮದ ಮೂಲಕ ಒತ್ತು ನೀಡುವ ಉದ್ದೇಶ ದಿಂದ ಪಿಲಿಕುಳದಲ್ಲಿ ವಾರಾಂತ್ಯ ದಿನಗಳಲ್ಲಿ ಕಂಬಳ ಕ್ರೀಡೆ ಪ್ರದರ್ಶನವನ್ನು ಆಯೋಜಿಸುವ ದ.ಕ. ಜಿಲ್ಲಾಡಳಿತದ ಚಿಂತನೆಗೆ ರಾಜ್ಯ ಸರಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಸಕ್ತಿ ತೋರ್ಪಡಿಸಿದ್ದು, ಈ ಕುರಿತು ವಿವರವಾದ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಜಿಲ್ಲಾಡಳಿತವನ್ನು ಕೋರಿದೆ.
ಕಳೆದ ವರ್ಷ ನವೆಂಬರ್ನಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಕಂಬಳ ಸಮಿತಿಯ ಪ್ರತಿನಿಧಿಗಳ ಉಪಸ್ಥಿತಿಯೊಂದಿಗೆ ನಡೆದ ಪ್ರವಾಸೋದ್ಯಮ ಸಭೆಯಲ್ಲಿ ಈ ಬಗ್ಗೆ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅವರು ಪ್ರಸ್ತಾವನೆ ಮಾಡಿದ್ದರು. ಜಿಲ್ಲಾ ಕಂಬಳ ಸಮಿತಿಯ ಜತೆ ಸಮನ್ವಯ ಸಾಧಿಸಿ ಪೂರಕ ರೂಪರೇಖೆಗಳನ್ನು ಸಿದ್ಧಪಡಿಸಲು ಪ್ರವಾಸೋದ್ಯಮ ಇಲಾಖೆ ಹಾಗೂ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರಕ್ಕೆ ಜಿಲ್ಲಾಧಿಕಾರಿಯವರು ಸೂಚಿಸಿದ್ದರು.
ಕಂಬಳ ಕ್ರೀಡೆಯನ್ನು ಸಶಕ್ತಗೊಳಿಸಿ ಇನ್ನಷ್ಟು ಪೂರಕ ಕಾರ್ಯಕ್ರಮಗಳನ್ನು ರೂಪಿಸುವ ಬಗ್ಗೆ ಎ. 19ರಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ದ.ಕ. ಜಿಲ್ಲಾಧಿಕಾರಿಯವರು ಜಿಲ್ಲಾಡಳಿತದ ಪ್ರಸ್ತಾವನೆಯ ಬಗ್ಗೆ ವಿವರಿಸಿ ಪಿಲಿಕುಳ ನಿಸರ್ಗಧಾಮದಲ್ಲಿ ಇರುವ ಸಂಸ್ಕೃತಿ ಗ್ರಾಮದಲ್ಲಿ (ಹೆರಿಟೇಜ್ ವಿಲೇಜ್) ಪ್ರವಾಸಿಗರಿಗೆ ಕಂಬಳ ವೀಕ್ಷಿಸಲು ಅವಕಾಶ ಕಲ್ಪಿಸುವ ಯೋಜನೆ ಬಗ್ಗೆ ತಿಳಿಸಿದ್ದರು. ಈ ಬಗ್ಗೆ ವಿವರವಾದ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸುವಂತೆ ಜಿಲ್ಲಾಧಿಕಾರಿಯವರನ್ನು ಕೋರಲಾಗಿದೆ. ಮಾರ್ಚ್ನಲ್ಲಿ ನಡೆದಿದ್ದ ವಿಧಾನಪರಿಷತ್ ಅಧಿವೇಶನದಲ್ಲಿ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಸದಸ್ಯರಾದ ಮಂಜುನಾಥ ಭಂಡಾರಿ, ಪ್ರತಾಪಸಿಂಹ ನಾಯಕ್, ಕೆ. ಹರೀಶ್ ಕುಮಾರ್, ಡಾ| ಕೆ.ಗೋವಿಂದ ಗೌಡ, ಭೋಜೆಗೌಡ ಅವರು ಕಂಬಳ ಕ್ರೀಡೆಯ ಸಶಕ್ತೀಕರಣದ ಬಗ್ಗೆ ಆಗ್ರಹಿಸಿದ್ದ ಹಿನ್ನೆಲೆಯಲ್ಲಿ ವಿಧಾನಸಭೆ ಸಭಾಪತಿಯಾಗಿದ್ದ ಬಸವರಾಜ ಹೊರಟ್ಟಿಯವರು ಈ ಸಭೆಯನ್ನು ಆಯೋಜಿಸಿದ್ದರು.
ಏನಿದು ಯೋಜನೆ?
ಪಿಲಿಕುಳ ಗುತ್ತಿನ ಮನೆಯ ಮುಂಭಾಗದಲ್ಲಿರುವ ‘ನೇತ್ರಾವತಿ-ಫಲ್ಗುಣಿ’ ಜೋಡುಕರೆಯನ್ನು ಪುನಃ ಅಭಿವೃದ್ಧಿಪಡಿಸಿ ವಾರಾಂತ್ಯ ದಿನಗಳಾದ ಶನಿವಾರ, ರವಿವಾರ ಸೀಮಿತ ಸಂಖ್ಯೆಯ ಕೋಣಗಳೊಂದಿಗೆ ಕಂಬಳ ನಡೆಸಿ ಪ್ರವಾಸಿಗರಿಗೆ ಕರಾವಳಿಯ ವಿಶಿಷ್ಟ ಜಾನಪದ ಕ್ರೀಡೆ ಕಂಬಳವನ್ನು ಪರಿಚಯಿಸುವ ಉದ್ದೇಶವನ್ನು ಯೋಜನೆ ಹೊಂದಿದೆ. ಕಂಬಳಕ್ಕೆ ಪೂರ್ವಸಿದ್ಧತೆ, ಕೋಣಗಳ ಆರೈಕೆ, ತರಬೇತಿ, ಕಂಬಳಕ್ಕೆ ಅವುಗಳನ್ನು ಸಿದ್ಧಗೊಳಿಸುವುದು, ಮುಂತಾದುವುಗಳ ಬಗ್ಗೆ ಪ್ರವಾಸಿಗರಿಗೆ ಮಾಹಿತಿ ನೀಡುವುದು ಇದರಲ್ಲಿ ಒಳಗೊಂಡಿದೆ. ಕಲಾಗ್ರಾಮದ ಭಾಗವಾಗಿ ಇದನ್ನು ಜೋಡಿಸಲಾಗುತ್ತದೆ. ಕಂಬಳ ಸಮಿತಿಯೊಂದಕ್ಕೆ ಇದರ ಜವಾಬ್ದಾರಿಯನ್ನು ವಹಿಸಿಕೊಟ್ಟು ಪ್ರದರ್ಶನಕ್ಕೆ ಪ್ರವೇಶ ಶುಲ್ಕವನ್ನು ಸಂಗ್ರಹಿಲು ಉದ್ದೇಶಿಸಲಾಗಿದೆ.
ಇದಕ್ಕೆ ಪೂರಕವಾಗಿ ಪಿಲಿಕುಳದಲ್ಲಿ ಸೌಲಭ್ಯಗಳನ್ನು ಕಲ್ಪಿಸುವ ಬಗ್ಗೆ ಜಿಲ್ಲಾ ಕಂಬಳ ಸಮಿತಿಯ ಜತೆ ಚರ್ಚೆ ನಡೆಸಿ ಕ್ರಮಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ. ಕಂಬಳವನ್ನು ಪ್ರವಾಸಿ ಆಕರ್ಷಣೆಯಾಗಿ ರೂಪಿಸುವ, ಪ್ರದರ್ಶನ ಕಂಬಳ ಮೂಲಕ ಪ್ರವಾಸಿಗರಿಗೆ ಇದರ ವೈಶಿಷ್ಟ್ಯವನ್ನು ಪರಿಚಯಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಯವರು ಅಧ್ಯಕ್ಷರಾಗಿರುವ ಜಿಲ್ಲಾ ಪ್ರವಾಸೋದ್ಯಮ ಸಮಿತಿ ಚಿಂತನೆ ನಡೆಸಿದೆ. ಪಿಲಿಕುಳದಲ್ಲಿ 2014ರಲ್ಲಿ ಕೊನೆಯ ಕಂಬಳ ನಡೆದಿತ್ತು. ಆದರೆ ಕಂಬಳದ ವಿರುದ್ಧ ಪೆಟಾ ಸಂಸ್ಥೆ ನ್ಯಾಯಾಲಯದಲ್ಲಿ ಕಾನೂನು ಸಮರ ಆರಂಭಿಸಿದ ಪರಿಣಾಮ ಜಿಲ್ಲಾಡಳಿತ ಪಿಲಿಕುಳದಲ್ಲಿ ಕಂಬಳವನ್ನು ಸ್ಥಗಿತಗೊಳಿಸಿತ್ತು. ಜಿಲ್ಲಾಡಳಿತ ಕಾರ್ಯೋನ್ಮುಖವಾಗಿದೆ ಪಿಲಿಕುಳ ನಿಸರ್ಗಧಾಮದ ಹೆರಿಟೇಜ್ ವಿಲೇಜ್ನಲ್ಲಿ ಪ್ರವಾಸಿಗರಿಗೆ ಕಂಬಳ ಚಟುವಟಿಕೆಗಳನ್ನು ವೀಕ್ಷಿಸಲು ಅವಕಾಶ ಕಲ್ಪಿಸುವ ಯೋಜನೆ ಬಗ್ಗೆ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವಿವರವಾದ ಪ್ರಸ್ತಾವವನ್ನು ಕೋರಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದು ಸಂಬಂಧಪಟ್ಟವರ ಜತೆ ಚರ್ಚೆ ನಡೆಸುತ್ತಿದೆ. -ಡಾ| ಕೆ.ವಿ.ರಾಜೇಂದ್ರ, ಜಿಲ್ಲಾಧಿಕಾರಿ ದಕ್ಷಿಣ ಕನ್ನಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ