ಆಲಂಕಾರಿನಿಂದ ನಾಪತ್ತೆಯಾದ ವ್ಯಕ್ತಿ ಉಪ್ಪಿನಂಗಡಿ ನದಿಯಲ್ಲಿ ಶವವಾಗಿ ಪತ್ತೆ
Team Udayavani, Feb 23, 2023, 6:44 AM IST
ಆಲಂಕಾರು: ಮಂಗಳವಾರ ಮಧ್ಯಾಹ್ನದ ಬಳಿಕ ಆಲಂಕಾರಿನಿಂದ ನಾಪತ್ತೆಯಾಗಿದ್ದ ವ್ಯಕ್ತಿ ಉಪ್ಪಿನಂಗಡಿ ನದಿ ಕಿನಾರೆಯಲ್ಲಿ ಶವವಾಗಿ ಬುಧವಾರ ಬೆಳಗ್ಗೆ ಪತ್ತೆಯಾಗಿದ್ದಾರೆ.
ಇಲ್ಲಿನ ಕಜೆ ನಿವಾಸಿ ಸೂರಪ್ಪ ಪೂಜಾರಿ (74) ಮಧ್ಯಾಹ್ನ ಆಲಂಕಾರು ಪೇಟೆಗೆ ಹೋಗಿ ಬರುವುದಾಗಿ ತಿಳಿಸಿ ತೆರಳಿದ್ದರು. ಸಂಜೆಯಾದರೂ ಮನೆಗೆ ವಾಪಸಾಗದ ಹಿನ್ನೆಲೆಯಲ್ಲಿ ಹುಡುಕಾಡಿದರಲ್ಲದೇ ಸಂಬಂಧಿಕರ ಮನೆಯಲ್ಲಿ ವಿಚಾರಿಸಿದರೂ ಯಾವುದೇ ಮಾಹಿತಿ ಲಭ್ಯವಾಗಿರಲಿಲ್ಲ. ಬುಧವಾರ ಬೆಳಗ್ಗೆ ಆಲಂಕಾರು ಪೇಟೆಯ ಸಿಸಿ ಕೆಮರಾವನ್ನು ಪರಿಶೀಲಿಸಿದಾಗ ಉಪ್ಪಿನಂಗಡಿ ಕಡೆಗೆ ಹೋಗುವ ಜೀಪಿನಲ್ಲಿ ಸಂಚರಿಸಿದ ಬಗ್ಗೆ ಮಾಹಿತಿ ಲಭ್ಯವಾಗಿತ್ತು.
ಉಪ್ಪಿನಂಗಡಿಯ ಪೇಟೆಯಲ್ಲಿ ಹುಡುಕಾಡಿದಾಗ ಕುಮಾರಧಾರ ನದಿ ತೀರದಲ್ಲಿ ಮಲಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತರು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಹಾಗೂ ಮಾನಸಿಕ ಖನ್ನತೆಗೆ ಒಳಗಾಗಿದ್ದರು ಎಂದು ತಿಳಿದು ಬಂದಿದೆ. ಮೃತರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಎಂಬ ಸಂಶಯ ವ್ಯಕ್ತವಾಗುತ್ತಿದ್ದು ಮರಣೋತ್ತರ ವರದಿಯಿಂದ ಧೃಢ ಪಡಬೇಕಾಗಿದೆ. ಮೃತರು ಪತ್ನಿ, ಪುತ್ರ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ.