Subrahmanya: ಆರೋಗ್ಯಕ್ಕೆ ಅಡಿಕೆ: ಅಧ್ಯಯನಕ್ಕೆ 10 ಕೋ.ರೂ.
ಕಿದು ಸಿಪಿಸಿಆರ್ಐಯಲ್ಲಿ ಕೃಷಿ ಸಮ್ಮೇಳನಕ್ಕೆ ಚಾಲನೆ
Team Udayavani, Mar 12, 2024, 10:12 AM IST
ಸುಬ್ರಹ್ಮಣ್ಯ: ಅಡಿಕೆ ಆರೋಗ್ಯಕ್ಕೆ ಹಾನಿಕಾರ ಎಂಬ ಬಗ್ಗೆ ಈ ಹಿಂದಿನ ಸರಕಾರ ವರದಿ ನೀಡಿದ್ದರಿಂದ ಅದು ಸುಪ್ರೀಂ ಕೋರ್ಟ್ನಲ್ಲಿದ್ದು, ಅದೇ ಕಾರಣಕ್ಕೆ ದರ ಇಳಿಕೆಯಾಗಿತ್ತು. ಆದರೆ ಕೇಂದ್ರ ಸರಕಾರವು ಅಡಿಕೆ ಹಾನಿಕಾರಕ ಅಲ್ಲ ಎಂಬುದನ್ನು ಸಾಬೀತು ಪಡಿಸಲು ನಮ್ಮ ಭಾಗದ ಅಡಿಕೆಯ ಬಗ್ಗೆ ದೇಶದ ಪ್ರತಿಷ್ಠಿತ ಸಂಸ್ಥೆಗಳನ್ನು ಸೇರಿಸಿಕೊಂಡು ವೈಜ್ಞಾನಿಕವಾಗಿ ಅಧ್ಯಯನ ನಡೆಸಲು 10 ಕೋಟಿ ರೂ. ಮೀಸಲಿಟ್ಟು ಮುಂದನ ಕ್ರಮಕ್ಕೆ ತೀರ್ಮಾನ ಕೈಗೊಂಡಿದೆ ಎಂದು ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಅವರು ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ನೆಟ್ಟಣದ ಕಿದು ಸಿಪಿಸಿಆರ್ ಯಲ್ಲಿ ಸೋಮವಾರ ಕೃಷಿ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಅಡಿಕೆ ಆರೋಗ್ಯಕ್ಕೆ ಹಾನಿಕಾರವಲ್ಲ ಎಂಬ ಬಗ್ಗೆ ಕೇಂದ್ರದ ಆರೋಗ್ಯ ಸಚಿವರ ಗಮನಕ್ಕೆ ತಂದಿದ್ದೆವು. ಅಡಿಕೆ ಪರವಾಗಿ ನರೇಂದ್ರ ಮೋದಿ ನಿಂತಿದ್ದರು. ಅಡಿಕೆ ಹಾನಿಕಾರ ಅಲ್ಲ ಎಂಬ ವೈಜ್ಞಾನಿಕ ವರದಿ ಬೇಕು. ಈ ಬಗ್ಗೆ ಕಾನೂನಾತ್ಮಕ ಕ್ರಮಕ್ಕೆ ಅವರು ಬೆಂಬಲ ಸೂಚಿಸಿದ್ದರು ಎಂದರು.
ಆಮದು ಇಲ್ಲ
ಮತ್ತೆ ಅಡಿಕೆ ಆಮದು ಮಾಡ ಲಾಗುತ್ತಿದೆ ಎಂಬುದು ಸತ್ಯಕ್ಕೆ ದೂರವಾದುದು. 2020-21ರಲ್ಲಿ ಭೂತನ್ನಿಂದ ಅಡಿಕೆ ಆಮದಿಗೆ ಯಾವುದೇ ಸಮಸ್ಯೆ ಆಗದಂತೆ ಅನುಮತಿ ನೀಡಲಾಗಿತ್ತು. ಈ ವರ್ಷ ಭೂತನ್ ಸಹಿತ ಯಾವುದೇ ದೇಶದಿಂದ ಅಡಿಕೆ ಆಮದು ಮಾಡಲು ಅನುಮತಿ ನೀಡಿಲ್ಲ, ಈ ಬಗ್ಗೆ ಸರಕಾರದಲ್ಲಿ ಯಾವುದೇ ಆದೇಶವಾಗಿಲ್ಲ. ಈ ವಿದೇಶದಿಂದ ಅಡಿಕೆ ಆಮದು ಎಂಬ ಸುದ್ದಿ ಹಬ್ಬಿಸಿ ದರ ಕುಸಿತ ಮಾಡಿ ಅನಾವಶ್ಯಕವಾಗಿ ಗೊಂದಲ ಸೃಷ್ಟಿಸುವ ವ್ಯವಸ್ಥಿತ ಸಂಚು ನಡೆಯುತ್ತಿದೆ ಎಂದು ಆರೋಪಿಸಿದರು.
ಅಡಿಕೆ ಎಲೆಚುಕ್ಕಿ, ಹಳದಿ ಎಲೆ ರೋಗ ನಿರ್ವಹಣೆಗೆ 225 ಕೋಟಿ ರೂ. ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಬಗ್ಗೆ ಪೂರಕ್ಕೆ ಕ್ರಮಕ್ಕೆ ರಾಜ್ಯಕ್ಕೆ ಸೂಚನೆ ನೀಡಿದ್ದೇವೆ ಎಂದರು. ತೆಂಗಿನಲ್ಲಿ ಕಂಡುಬಂದ ರೋಗ ಪರಿಹಾರ ಹಾಗೂ ಅಧ್ಯಯನಕ್ಕೂ ಕೇಂದ್ರದಿಂದ ಕೋಟ್ಯಂತರ ರೂ. ನೀಡಲಾಗಿದೆ ಎಂದರು.
ರೈತರ ಜತೆಗಿದೆ ಕೇಂದ್ರ ಸರಕಾರ
ಕೃಷಿಕರು, ರೈತರ ಹಿತ ಕಾಯುವಲ್ಲಿ ನರೇಂದ್ರ ಮೋದಿ ಸರಕಾರ ಸದಾ ಜತೆಯಾಗಿದೆ. ರೈತರು ಒಂದೇ ಬೆಳೆಯನ್ನು ಹೊಂದಿಕೊಳ್ಳದೇ ಮಿಶ್ರ ಬೆಳೆಯನ್ನು ಬೆಳೆದು ಆದಾಯ ಗಳಿಸಲು ಮುಂದಾಗಬೇಕು. ಮಿಶ್ರ ಬೆಳೆ ಬೆಳೆಯುವಲ್ಲಿ ರೈತರ ಆತ್ಮಹತ್ಯೆ ಆಗಿಲ್ಲ ಎಂದ ಅವರು ಸರಕಾರದ ಸಹಕಾರ ಪಡೆದು ಕೃಷಿಯಲ್ಲೂ ಉದ್ಯಮ ಆರಂಭಿಸಿ ಯಶಸ್ಸು ಸಾ ಧಿಸಬಹುದು ಎಂದರು.
ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ಕೃಷಿಯೇ ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ಅವರಿಗೆ ಪರಿಹಾರ ಸೂಚಿಸಬೇಕು ಎಂಬ ನಿಟ್ಟಿನಲ್ಲಿ ಸಿಪಿಸಿಆರ್ಐ ಸಂಸ್ಥೆ ಕೃಷಿ ಮೇಳ ನಡೆಸುತ್ತಿರುವುದು ಶ್ಲಾಘನೀಯ ಎಂದರು.
ಕೇಂದ್ರದ ತೋಟಗಾರಿಕೆ ಡಿಡಿಜಿ ಡಾ| ಸಂಜೀವ್ ಕುಮಾರ್ ಸಿಂಗ್ ಅಧ್ಯಕ್ಷತೆ ವಹಿಸಿದ್ದರು. ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೋಡ್ಗಿ, ಕೇಂದ್ರ ಸರಕಾರದ ತೋಟಗಾರಿಕೆ ಇಲಾಖೆ ಆಯುಕ್ತ ಡಾ| ಪ್ರಭಾತ್ ಕುಮಾರ್, ಕೋಯಿಕ್ಕೋಡ್ ಡಿಎಎಸ್ಡಿ ನಿರ್ದೇಶಕ ಹೋಮಿ ಚೆರಿಯನ್, ಕೊಚ್ಚಿ ಸಿಡಿಬಿ ಸಿಸಿಡಿಒ ಡಾ| ಬಿ. ಹನುಮಂತೇ ಗೌಡ, ಬಿಳಿನೆಲೆ ಗ್ರಾ.ಪಂ. ಸದಸ್ಯ ಸತೀಶ್ ಕಳಿಗೆ, ಕಿದು ಸಿಪಿಸಿಆರ್ಐ ವಿಜ್ಞಾನಿ ದಿವಾಕರ ವೈ. ಮತ್ತಿತರರು ಉಪಸ್ಥಿತರಿದ್ದರು.
ಕಾಸರಗೋಡು ಸಿಪಿಸಿಆರ್ಐ ನಿರ್ದೇಶಕ ಡಾ| ಕೆ.ಬಿ. ಹೆಬ್ಟಾರ್ ಪ್ರಸ್ತಾವನೆಗೈದು, ಸ್ವಾಗತಿಸಿದರು. ಡಾ| ವಿ. ನಿರಲ್ ವಂದಿಸಿದರು. ವಿಟ್ಲ ಸಿಪಿಸಿಆರ್ಐ ಹಿರಿಯ ವಿಜ್ಞಾನಿ ಡಾ| ನಾಗರಾಜ್ ಎನ್. ಆರ್. ಕಾರ್ಯಕ್ರಮ ನಿರೂಪಿಸಿದರು.
ಕಲ್ಪ ಸುವರ್ಣ ತಳಿ ಬಿಡುಗಡೆ
ಸಿಪಿಸಿಆರ್ಐ ಅಭಿವೃದ್ಧಿಗೊಳಿಸಿದ “ಕಲ್ಪ ಸುವರ್ಣ’ ಗಿಡ್ಡ ತಳಿಯ ಬಿಡುಗಡೆಯನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನೆರವೇರಿಸಿದರು. ಬಳಿಕದಲ್ಲಿ ಕೊಕ್ಕೋ ಸಂಕರಣ ವಿಟ್ಲ ಕೊಕ್ಕೋ ಹೈಬ್ರಿàಡ್ 1, ವಿಟ್ಲ ಕೊಕ್ಕೋ ಹೈಬ್ರಿàಡ್ 2 ತಳಿಯನ್ನು ಅತಿಥಿಗಳು ಬಿಡುಗಡೆ ಗೊಳಿಸಿದರು. ಕೃಷಿಕರಿಗೆ ವಿತರಣೆ ಮಾಡಲಾಯಿತು. ತರಬೇತುದಾರರಿಗೆ ಪ್ರಮಾಣಪತ್ರ ಹಾಗೂ ಉಪಕರಣ, ಸುಧಾರಿತ ತೆಂಗಿನ ತಳಿಗಳ ಪ್ರಕಟಣೆ ಬಿಡುಗಡೆ ಮಾಡಲಾಯಿತು.