ಧರ್ಮಸ್ಥಳ ಪ್ರಾಚ್ಯವಿದ್ಯಾ ಸಂಸ್ಥೆಗೆ ಶಿಕ್ಷಣ ಸಚಿವ ಸುರೇಶ್ಕುಮಾರ್ ಭೇಟಿ
Team Udayavani, Nov 11, 2020, 9:59 PM IST
ಧರ್ಮಸ್ಥಳ: ಮಾಹಿತಿ ಪಡೆಯುತ್ತಿರುವ ಸಚಿವ ಸುರೇಶ್ ಕುಮಾರ್ ದಂಪತಿ.
ಬೆಳ್ತಂಗಡಿ: ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಧರ್ಮಸ್ಥಳಕ್ಕೆ ಭೇಟಿ ನೀಡಿದ ಸಂದರ್ಭ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ನಡೆಸಲ್ಪಡುವ ಶ್ರೀ ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನ ಪ್ರತಿಷ್ಠಾನದ ಪ್ರಾಚ್ಯ ವಿದ್ಯಾ ಸಂಸ್ಥೆಗೆ ತೆರಳಿದರು.
ಪ್ರಾಚ್ಯ ವಿದ್ಯಾಸಂಸ್ಥೆಯ ನಿರ್ದೇಶಕ ಡಾ| ವಿಘ್ನರಾಜ್ ಹಸ್ತಪ್ರತಿ ಸಂಗ್ರಹ, ಸಂರಕ್ಷಣೆ, ಸಂಪಾದನೆ ಇತ್ಯಾದಿ ವಿಷಯಗಳ ಬಗ್ಗೆ ಮಾಹಿತಿ ನೀಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳದ ಹಸ್ತಪ್ರತಿ ಸಂಗ್ರಹಾಲಯಕ್ಕೆ ಪ್ರಥಮ ಬಾರಿಗೆ ಭೇಟಿ ನೀಡುವ ಅವಕಾಶ ದೊರಕಿತು. ತಾಳೆಗರಿ ಗ್ರಂಥಗಳ ಕುರಿತು ಈವರೆಗೆ ಕೇಳಿದ್ದು, ಮೊದಲ ಬಾರಿಗೆ ನೋಡಿದ ಅನುಭವ ನನ್ನದು. ರಾಮಾಯಣ, ಮಹಾ ಭಾರತ, ಭಾಗವತ, ಬಸವ ಪುರಾಣ ಇತ್ಯಾದಿಗಳೆಲ್ಲವೂ ಈ ತಾಳೆಗರಿ ಗ್ರಂಥಗಳ ಮೂಲಕ ಪ್ರಕಟನೆ ಆಗುತ್ತಿದ್ದ ಕಾಲ ನೆನಪಿಗೆ ಬಂತು. ಇಂತಹ ಅಮೂಲ್ಯ ನಿಧಿಗಳನ್ನು ಸಂಗ್ರಹಿಸಿ ಜತನವಾಗಿ ಕಾಪಾಡುವ ಕೆಲಸ ಈ ಪ್ರಾಚ್ಯ ವಿದ್ಯಾ ಸಂಸ್ಥೆಯಿಂದ ಆಗುತ್ತಿರುವುದಕ್ಕೆ ಸುರೇಶ್ ಕುಮಾರ್ ಹರ್ಷ ವ್ಯಕ್ತಪಡಿಸಿದರು.
ದೇಗುಲ ಕಚೇರಿಯ ಮುಖ್ಯಸ್ಥ ದೀಕ್ಷಿತ್ ಹಾಗೂ ಪ್ರತಿಷ್ಠಾನದ ಸಹಾಯಕ ಸಂಶೋಧಕರಾದ ಪವನ್ಕುಮಾರ್, ಮಂಜುಳಾ, ಮಮತಾ ಉಪಸ್ಥಿತರಿದ್ದರು.