ಮುಂಡಾಜೆ: ಲಾಕ್ಡೌನ್ ನಡುವೆಯೇ ಎಗ್ಗಿಲ್ಲದೆ ಅಕ್ರಮ ಮರಳುಗಾರಿಕೆ ?
Team Udayavani, May 2, 2020, 5:59 AM IST
ಮುಂಡಾಜೆ: ಬೆಳ್ತಂಗಡಿ ತಾ| ಮುಂಡಾಜೆ ಗ್ರಾ.ಪಂ. ವ್ಯಾಪ್ತಿಯ ಹೊಸಕಾಪು ಪ್ರದೇಶದಲ್ಲಿ ಕಳೆದ 3 ದಿನಗಳಿಂದ ರಾತ್ರಿ 11 ಗಂಟೆ ಬಳಿಕ ಬೆಳಗಿನ ಜಾವದವರೆಗೆ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಜಿಲ್ಲೆಯಾದ್ಯಂತ ಸಾಕಷ್ಟು ಬಿಗಿ ಬಂದೋಬಸ್ತ್ ಇದ್ದರೂ ಮೃತ್ಯುಂಜಯ ನದಿ ಪ್ರದೇಶದ ಹೊಸಕಾಪು ಪ್ರದೇಶಕ್ಕೆ ರಾತ್ರಿ ವೇಳೆ ಆಗಮಿಸುವ ಟಿಪ್ಪರ್ ಹಾಗೂ ಹಿಟಾಚಿಗಳು ಬೆಳಗಿನ ತನಕ ಮರಳು ಸಾಗಾಟ ಕೆಲಸ ನಡೆಸಿವೆ ಎಂದು ಆರೋಪಿಸಲಾಗಿದೆ.
ಸ್ಥಳೀಯರಲ್ಲಿ ಆತಂಕ
ಹೊಸಕಾಪು ಆಸುಪಾಸಿನಲ್ಲಿ ಕಲ್ಮಂಜ ಹಾಗೂ ಮುಂಡಾಜೆ ಗ್ರಾಮ ವ್ಯಾಪ್ತಿಗೆ ಬರುವ ನೂರಾರು ಮನೆಗಳಿವೆ. ಕೇರಳ ಮತ್ತು ಮಂಗಳೂರು ನೋಂದಣಿಯ ಟಿಪ್ಪರ್, ಹಿಟಾಚಿ ಹಾಗೂ ಇತರ ವಾಹನಗಳಲ್ಲಿ ಬರುವ ಅಪರಿಚಿತ ಚಾಲಕರು ಮತ್ತು ವ್ಯಕ್ತಿಗಳು, ಕೋವಿಡ್- 19 ಮುನ್ನೆಚ್ಚರಿಕೆ ಅನುಸರಿಸುತ್ತಿರುವ ಈ ಪ್ರದೇಶದ ಜನರಲ್ಲಿ ಭಯದ ವಾತಾವರಣ ಉಂಟಾಗಲು ಕಾರಣರಾಗಿದ್ದಾರೆ. ನೂರಾರು ಮನೆಗಳಿಗೆ ದಿನಬಳಕೆ ಮತ್ತು ಕೃಷಿ ಬಳಕೆಗೆ ಉಪಯೋಗಿಸುತ್ತಿರುವ ಮೃತ್ಯುಂಜಯ ನದಿ ನೀರು ಕಲುಷಿತಗೊಂಡಿದೆ. ನದಿಯಲ್ಲಿ ನೀರು ಇಳಿಮುಖವಾಗುತ್ತಿದ್ದು, ಇನ್ನಷ್ಟು ಕಲುಷಿತಗೊಳ್ಳುವ ಸಾಧ್ಯತೆ ಇದೆ ಎಂದು ಆರೋಪಿಸಲಾಗಿದೆ.. ಮರಳುಗಾರಿಕೆ ಕುರಿತು ಸ್ಥಳೀಯ ಗ್ರಾಮಕರಣಿಕರ ಕಚೇರಿಯಲ್ಲಿ ವಿಚಾರಿಸಿದಾಗ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ.