Kaniyoor Primary Health Center ; 12 ಹುದ್ದೆಗಳಲ್ಲಿ ವೈದ್ಯರ ಸಹಿತ 10 ಹುದ್ದೆ ಖಾಲಿ
Team Udayavani, May 19, 2023, 3:03 PM IST
ಕಾಣಿಯೂರು: ಖಾಯಂ ವೈದ್ಯರ ಮತ್ತು ಸಿಬಂದಿ ಕೊರತೆಯಿಂದ ಸಾರ್ವಜನಿಕರಿಗೆ ಪೂರ್ಣ ಸೌಲಭ್ಯ ಸಿಗದ ಪರಿಸ್ಥಿತಿ ಕಾಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಿರ್ಮಾಣವಾಗಿದೆ.
ಸುಸಜ್ಜಿತ ಆಸ್ಪತ್ರೆಯನ್ನು ಹೊಂದಿರುವ ಕಾಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಖಾಲಿಯಿರುವ ಖಾಯಂ ವೈದ್ಯರನ್ನು ಸಿಬಂದಿಯನ್ನು ಇನ್ನೂ ನಿಯೋಜಿ ಸಿಲ್ಲ. ಸುಸಜ್ಜಿತ ಕಟ್ಟಡ ಹೊಂದಿರುವ ಈ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಒಟ್ಟು 12 ಹುದ್ದೆಗಳಿವೆ. ಇಲ್ಲಿನ ವೈದ್ಯಾಧಿಕಾರಿಗಳು ವರ್ಗಾವಣೆಗೊಂಡ ಬಳಿಕ ವೈದ್ಯರ ಹುದ್ದೆಯೂ ಖಾಲಿ ಇದೆ. ಬಳಿಕ ಗುತ್ತಿಗೆ ಆಧಾರದಲ್ಲಿ ವೈದ್ಯಾಧಿಕಾರಿಯವರು ನೇಮಕಾತಿ ಆಗಿತ್ತು. ಇದೀಗ ಕಾರ್ಯನಿರ್ವಹಿಸುತ್ತಿದ್ದ ವೈದ್ಯಾಧಿಕಾರಿ ಡಾ| ಸಾಜಿದಾ ಅವರ ಅವಧಿ ಮುಗಿದ ಹಿನ್ನೆಲೆ ಯಲ್ಲಿ ವೈದ್ಯಾಧಿಕಾರಿಯವರ ಹುದ್ದೆಯೂ ಖಾಲಿಯಾಗಿದೆ.
ಇಲ್ಲಿ ಒಟ್ಟು ಇರುವ 12 ಹುದ್ದೆಗಳ ಪೈಕಿ 10 ಹುದ್ದೆಗಳೂ ಖಾಲಿ ಯಾಗಿರು ವುದು ಆರೋಗ್ಯ ಸೇವೆಗೆ ಮತ್ತಷ್ಟು ಹಿನ್ನ ಡೆಯಾಗಿ ಪರಿಣ ಮಿಸಿದೆ. ಕೇವಲ 2 ಮಂದಿ ಆರೋಗ್ಯ ಸುರಕ್ಷಾ ಅಧಿಕಾರಿಗಳು ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ದೋಳ್ಪಾಡಿ, ಚಾರ್ವಾಕ, ಬರೆಪ್ಪಾಡಿಯಲ್ಲಿ ಉಪಕೇಂದ್ರಗಳನ್ನು ಹೊಂದಿದೆ.
ಸರಕಾರಿ ಆಸ್ಪತ್ರೆಯಿದ್ದರೂ ಜನರ ಅನುಕೂಲಕ್ಕೆ ಸಿಗುತ್ತಿಲ್ಲ. ಕಾಣಿಯೂರು, ಬೆಳಂದೂರು ಗ್ರಾಮಗಳು ಸೇರಿದಂತೆ ಸುತ್ತಮುತ್ತಲಿನ ಹತ್ತು ಹಲವು ಗ್ರಾಮಗಳಿಗೆ ಈ ಆಸ್ಪತ್ರೆ ಅನಿವಾರ್ಯವಾಗಿದ್ದರೂ ಖಾಯಂ ವೈದ್ಯರಿಲ್ಲ, ಜತೆಗೆ ಸಿಬಂದಿ ಕೊರತೆಯೂ ಸಮಸ್ಯೆಗಳನ್ನು ಸೃಷ್ಟಿಸಿದೆ.
ಕಾಣಿಯೂರು ಸರಕಾರಿ ಆಸ್ಪತ್ರೆಗೆ ಸಾಕಷ್ಟು ಸಂಖ್ಯೆಯಲ್ಲಿ ರೋಗಿಗಳು ಬರುತ್ತಿದ್ದಾರೆ. ಆದರೆ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳ ವರ್ಗಾವಣೆ ಮತ್ತು ಇತರ ಸಿಬಂದಿ ಕೊರತೆಯಿಂದಾಗಿ ಜನರಿಗೆ ಸಮಸ್ಯೆ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ಸಂಬಂಧ ಪಟ್ಟ ಇಲಾಖೆ ಹಾಗೂ ಜನಪ್ರತಿನಿಧಿಗಳು ತತ್ಕ್ಷಣ ಈ ಸಮಸ್ಯೆಯನ್ನು ಪರಿಹರಿಸುವ ವ್ಯವಸ್ಥೆ ಮಾಡಿದಲ್ಲಿ ಬಡರೋಗಿಗಳಿಗೂ ಅನುಕೂಲವಾದೀತು. ಶೀಘ್ರದಲ್ಲಿ ಸರಕಾರಿ ಆಸ್ಪತ್ರೆಗೆ ಖಾಲಿಯಿರುವ ಎಲ್ಲ ಹುದ್ದೆಗಳನ್ನು ಭರ್ತಿಗೊಳಿಸಬೇಕು ಎನ್ನುವುದು ನಾಗರಿಕರ ಆಗ್ರಹ.
ಮೇಲಧಿಕಾರಿಯವರಿಗೆ ತಿಳಿಸಲಾಗಿದೆ
ವೈದ್ಯಾಧಿಕಾರಿ ಮತ್ತು ಸಿಬಂದಿ ಸಮಸ್ಯೆ ಇಲ್ಲಿ ಮಾತ್ರವಲ್ಲ. ಹೆಚ್ಚಿನ ಆರೋಗ್ಯ ಕೇಂದ್ರದಲ್ಲಿಯೂ ಇದೆ. ಕಾಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೈದ್ಯಾಧಿಕಾರಿ ಡಾ| ಸಾಜಿದಾ ಅವರನ್ನೇ ಗುತ್ತಿಗೆ ಆಧಾರದಲ್ಲಿ ಮತ್ತೆ ಮುಂದುವರಿಸಬೇಕು ಎಂದು ಶಿಫಾರಸ್ಸು ಮಾಡುವಂತೆ ಜಿಲ್ಲಾ ಆರೋಗ್ಯಾಧಿಕಾರಿಯವರಿಗೆ ತಿಳಿಸಿದ್ದೇನೆ. ಖಾಲಿಯಿರುವ ಸಿಬಂದಿ ಹುದ್ದೆಯನ್ನೂ ಭರ್ತಿ ಮಾಡುವಂತೆ ಸರಕಾರಕ್ಕೆ ಈಗಾಗಲೇ ಪತ್ರ ಬರೆಯಲಾಗಿದೆ.
-ಡಾ| ದೀಪಕ್ ರೈ, ತಾಲೂಕು ಆರೋಗ್ಯಾಧಿಕಾರಿ ಪುತ್ತೂರು