Kukke: ಹೃದಯಾಘಾತದಿಂದ ಬೆಂಗಳೂರಿನ ಮಹಿಳೆ ಸಾವು
Team Udayavani, Nov 28, 2023, 9:36 PM IST
ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಬಂದಿದ್ದ ಬೆಂಗಳೂರಿನ ಮಹಿಳೆಯೋರ್ವರು ಹೃದಯಾಘಾತದಿಂದ ಮೃತಪಟ್ಟ ಘಟನೆ ಸೋಮವಾರ ರಾತ್ರಿ ಸಂಭವಿಸಿದೆ.
ಬೆಂಗಳೂರಿನ ಎಂವಿ ಗಾರ್ಡನ್ ನಿವಾಸಿ ಶಿವಕುಮಾರ್ ಅವರ ಪತ್ನಿ ಲಕ್ಷ್ಮೀ (32) ಮೃತರು. ಶಿವಕುಮಾರ್ ಅವರು ಪತ್ನಿ, ಮಕ್ಕಳೊಂದಿಗೆ ಸಕಲೇಶಪುರದಲ್ಲಿ ನಡೆದ ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದರು. ಈ ವೇಳೆ ಲಕ್ಷ್ಮೀ ಹಾಗೂ ಮಕ್ಕಳು ಸಂಬಂಧಿಕರ ಜತೆ ಧರ್ಮಸ್ಥಳಕ್ಕೆ ತೆರಳಿ ರವಿವಾರ ಸುಬ್ರಹ್ಮಣ್ಯಕ್ಕೆ ಬಂದಿದ್ದರು. ರಾತ್ರಿ ಲಕ್ಷ್ಮೀ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು, ಕೂಡಲೇ ಚಿಕಿತ್ಸೆಗೆ ಕಡಬ ಸರಕಾರಿ ಆಸ್ಪತ್ರೆಗೆ ಕರೆತಂದು, ಬಳಿಕ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರದೊಯ್ದಿದ್ದು ಅಲ್ಲಿನ ವೈದ್ಯರು ಪರೀಕ್ಷಿಸಿ ಮಹಿಳೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಡೆಕೋಲು: ನೇಣು ಬಿಗಿದು ಆತ್ಮಹತ್ಯೆ
ಸುಳ್ಯ: ಮನೆ ಸಮೀಪದ ಮರಕ್ಕೆ ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ರಾತ್ರಿ ಮಂಡೆಕೋಲಿನಲ್ಲಿ ಬೆಳಕಿಗೆ ಬಂದಿದೆ.
ಮಂಡೆಕೋಲು ಗ್ರಾಮದ ಕುಟ್ಟಣಮೂಲೆ ಶಿವಪ್ಪ ನಾಯ್ಕ (65) ಮೃತರು. ಮನೆಯವರು ಸಂಜೆ ಸುಳ್ಯಕ್ಕೆ ಬಂದಿದ್ದರು. ವಾಪಸ್ ಮನೆಗೆ ಹೋಗುವಾಗ ಶಿವಪ್ಪ ನಾಯ್ಕ ಅವರು ಮನೆಯಲ್ಲಿ ಕಾಣಿಸದೇ ಇದ್ದಿದ್ದು, ಬಳಿಕ ಮನೆ ಮಂದಿ ಹುಡುಕಾಟ ನಡೆಸಿದ ವೇಳೆ ಮನೆ ಸಮೀಪ ನೇಣು ಹಾಕಿ ಮೃತಪಟ್ಟಿರುವುದು ಕಂಡು ಬಂದಿದೆ. ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.