ವಿಟ್ಲ: ಅಡಿಕೆ ಕಳ್ಳತನ ಪ್ರಕರಣ; ನಾಲ್ವರು ಅಪ್ರಾಪ್ತ ಬಾಲಕರು ಪೊಲೀಸರ ವಶಕ್ಕೆ
Team Udayavani, Mar 16, 2022, 7:58 PM IST
ವಿಟ್ಲ: ಕೊಳ್ನಾಡು ಗ್ರಾಮದ ನೀರಪಳಿಕೆ ಬಾರೆಬೆಟ್ಟು ಮಹಮ್ಮದ್ ಮುಸ್ತಾಫ್ ಅವರ ಮನೆಯ ಅಂಗಳದಲ್ಲಿ ಒಣಗಿಸಲು ಹಾಕಿದ್ದ ಅಡಿಕೆಯನ್ನು ಫೆ.6 ಮತ್ತು ಫೆ. 7ರ ಮಧ್ಯಾವಧಿಯಲ್ಲಿ ಕದ್ದೊಯ್ಯಲಾಗಿತ್ತು. ಕಳ್ಳರು ಸುಮಾರು 3500 ಅಡಿಕೆಯನ್ನು ಕಳ್ಳತನ ಮಾಡಿದ ಬಗ್ಗೆ ದೂರು ದಾಖಲಾಗಿರುತ್ತದೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಮಂಗಳೂರು ತಾಲೂಕು ಕಣ್ಣೂರು ಗ್ರಾಮದ ಗಾಣದಬೆಟ್ಟು ಎಂಬಲ್ಲಿನ 4 ಮಂದಿ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರು ಈ ಕೃತ್ಯವನ್ನು ಎಸಗಿರುವುದು ಬೆಳಕಿಗೆ ಬಂದಿದೆ.
ಇವರಿಂದ ಕಳ್ಳತನವಾದ ಸುಮಾರು 3500 ಅಡಿಕೆ ಹಾಗೂ ಪ್ರಕರಣದಲ್ಲಿ ಶಾಮೀಲಾದ 2 ಮೋಟಾರು ಸೈಕಲ್ ಗಳನ್ನು ಮಾ.10ರಂದು ವಶಕ್ಕೆ ಪಡೆದು ಕಾನೂನು ಕ್ರಮಕೈಗೊಳ್ಳಲಾಗಿದೆ ಎಂದು ವಿಟ್ಲ ಪೊಲೀಸರು ತಿಳಿಸಿದ್ದಾರೆ.