ಸುಳ್ಯ ನಗರದಲ್ಲಿ ಪಾರ್ಕಿಂಗ್ ಗೊಂದಲ
ವಾಹನ ಸವಾರರು, ಪಾದಚಾರಿಗಳ ಪರದಾಟ
Team Udayavani, Dec 29, 2020, 5:11 AM IST
ಸುಳ್ಯ: ಮುಖ್ಯ ರಸ್ತೆಯಲ್ಲಿ ಪಾರ್ಕಿಂಗ್ಗೆ ನಿಗದಿತ ನಿಯಮವಿನ್ನೂ ಜಾರಿಯಾಗದ ಕಾರಣ ವಾಹನ ಸವಾರರು ಸೇರಿದಂತೆ ಸಾರ್ವಜನಿಕರು ಪರದಾಡುವಂತಾಗಿದೆ.
ಈಗಿನ ನಿಯಮದಂತೆ ಒಂದು ದಿನ ರಸ್ತೆಯ ಬಲ ಬದಿಯಲ್ಲಿ ಹಾಗೂ ಮತ್ತೂಂದು ದಿನ ಎಡಬದಿಯಲ್ಲಿ ಪಾರ್ಕ್ ಮಾಡಬೇಕೆಂಬ ನಿಯಮವಿದೆ. ಯಾವ ವಾಹನ ಎಲ್ಲಿ ನಿಲ್ಲಿಸಬೇಕೆಂಬ ನಿರ್ದಿಷ್ಟ ನಿಯಮವಿಲ್ಲದಿರುವುದರಿಂದ ಘನ ವಾಹನಗಳು ದ್ವಿಚಕ್ರವಿರುವಲ್ಲಿ ಪಾರ್ಕಿಂಗ್ ಮಾಡಿ ಸಮಸ್ಯೆಗಳನ್ನು ನಿರ್ಮಿಸುತ್ತಿದ್ದಾರೆ. ಸರಿಯಾದ ನಿಯಮವಿಲ್ಲದ್ದರಿಂದ ಆಟೋ ರಿಕ್ಷಾ, ಮಿನಿಟೆಂಪೋ, ಪ್ರವಾಸಿ ವಾಹನಗಳ ಚಾಲಕರು ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡುತ್ತಿದ್ದಾರೆ.
ಪಾದಾಚಾರಿಗಳ ಪಾರಾದಾಟ
ರಸ್ತೆಯ ಹಲವು ಇಕ್ಕೆಡೆಗಳಲ್ಲಿ ಬೀದಿಬದಿ ವ್ಯಾಪಾರಿಗಳು ಹಾಗೂ ಸಾಲು ಸಾಲು ವಾಹನಗಳು ರಸ್ತೆಯುದ್ದಕ್ಕೂ ನಿಂತಿದ್ದು ಪಾದಾಚಾರಿಗಳು ಎಲ್ಲಿ ನಡೆದಾಡಬೇಕು ಎಂಬ ಪ್ರಶ್ನೆಯೂ ಉದ್ಭವವಾಗಿದೆ. ಜ್ಯೋತಿ ಸರ್ಕಲ್ ನಿಂದ ಗಾಂಧಿನಗರದವರೆಗಿನ ರಸ್ತೆ ಬದಿ ಈ ಸಮಸ್ಯೆ ತಲೆದೋರಿದೆ. ವಾಹನಗಳು ಜಾಸ್ತಿ ಓಡಾಡುವ ಸಮಯದಲ್ಲೇ ಸರಕು ವಾಹನಗಳು ರಸ್ತೆ ಬದಿ ನಿಲ್ಲಿಸಿ ಅನ್ಲೋಡ್ ಮಾಡುವುದರಿಂದ ಇತರ ಚಾಲಕರ ತಾಳ್ಮೆ ಕೆಡುವ ಪರಿಸ್ಥಿತಿ ನಿರ್ಮಾಣವಾಗಿದೆ. ವಾಹನ ದಟ್ಟಣೆ ಇರುವ ಸಮಯ ರಸ್ತೆ ಬದಿ ವಾಹನ ನಿಲ್ಲಿಸಿ ಸರಕುಗಳನ್ನು ಅನ್ಲೋಡ್ ಮಾಡು ವುದರಿಂದ ಉಂಟಾಗುತ್ತಿರುವ ಸಮಸ್ಯೆಯ ಬಗ್ಗೆ ಸಂಬಂಧಿತರು ಕ್ರಮಕೈಗೊಳ್ಳಬೇಕು ಎಂದು ಜನರು ಆಗ್ರಹಿಸುತ್ತಿದ್ದಾರೆ.
ಮನವಿ ಮಾಡಿದ್ದೇವೆ
ಕಳೆದ ಹಲವು ವರ್ಷಗಳಿಂದ ಒಂದೊಂದು ದಿನ ಒಂದೊಂದು ಸಾಲಿನಲ್ಲಿ ಪಾರ್ಕಿಂಗ್ ಮಾಡುವ ವ್ಯವಸ್ಥೆಯಿದೆ. ತಪ್ಪಿದಲ್ಲಿ ದಂಡ ಹಾಕುತ್ತಿದ್ದೇವೆ. ನಗರದ ಪ್ರಮುಖ ಕಡೆಗಳಲ್ಲಿ ಸಿಸಿ ಕೆಮರಾಗಳಿದ್ದು, ನಿಯಮ ಉಲ್ಲಂಘನೆಯಾದರೆ ತಿಳಿಯುತ್ತದೆ. ಜ್ಯೋತಿ ಸರ್ಕಲ್, ವಿವೇಕಾನಂದ ಸರ್ಕಲ್ ಹಾಗೂ ಎಪಿಎಂಸಿ ರಸ್ತೆಗಳಿಗೆ ಸಿಸಿ ಕೆಮರಾದ ಆವಶ್ಯಕತೆಯಿದೆ.ನ.ಪಂ. ಗೆ ಪಾರ್ಕಿಂಗ್ ಲೈನ್ ಹಾಕಿಸಲು ಮನವಿ ಮಾಡಿದ್ದೇವೆ.
-ಹರೀಶ್ ಎಂ. ಆರ್., ಸುಳ್ಯ ಎಸ್ ಐ
ಕ್ರಮಬದ್ಧ ವ್ಯವಸ್ಥೆ
ಪಾರ್ಕಿಂಗ್ ನ ಸಮಸ್ಯೆ ನಮ್ಮ ಗಮನಕ್ಕೆ ಬಂದಿದೆ. ಪೋಲಿಸ್ ಇಲಾಖೆಯೊಂದಿಗೆ ಸಭೆ ನಡೆಸಿ, ಶೀಘ್ರವೇ ಲೈನ್ಗಳನ್ನು ಹಾಕಿಸುವ ವ್ಯವಸ್ಥೆ ಮಾಡಲಾಗುವುದು. ದ್ವಿ ಚಕ್ರ ಹಾಗೂ ಇತರ ವಾಹನ ನಿಲುಗಡೆಗೆ ಕ್ರಮಬದ್ಧ ವ್ಯವಸ್ಥೆ ಮಾಡಲಾಗುವುದು.
– ವಿನಯ್ ಕುಮಾರ್ ಕಂದಡ್ಕ ಅಧ್ಯಕ್ಷರು, ನ.ಪಂ. ಸುಳ್ಯ