ಪುತ್ತೂರು ತಾಲೂಕು; ಕೊಳವೆ, ತೆರೆದ ಬಾವಿಯಲ್ಲಿ ಅಂತರ್ಜಲ ಮಟ್ಟ ಇಳಿಕೆ
ಆವಶ್ಯಕತೆ ಇದ್ದಷ್ಟೇ ನೀರನ್ನು ಮಿತವಾಗಿ ಬಳಸಿ
Team Udayavani, Mar 9, 2023, 10:32 AM IST
ಪುತ್ತೂರು: ಕಳೆದ ಕೆಲವು ವರ್ಷಗಳಿಂದ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದರೂ ಪುತ್ತೂರು ತಾಲೂಕಿನಲ್ಲಿ ಕಳೆದ ವರ್ಷದ ಫೆಬ್ರವರಿಗೆ ಹೋಲಿಸಿದರೆ ಈ ಫೆಬ್ರವರಿಯಲ್ಲಿ ಕೊಳವೆಬಾವಿ, ತೆರೆದ ಬಾವಿಯ ಅಂತರ್ಜಲ ಮಟ್ಟ ಕುಸಿದಿದೆ..!
ಕೆಲವು ದಿನಗಳಿಂದ ಕರಾವಳಿಯಲ್ಲಿ ಬಿಸಿಲಿನ ತೀವ್ರತೆ ದಾಖಲೆಯ ಪ್ರಮಾಣದಲ್ಲಿ ಏರಿಕೆ ಕಂಡಿದ್ದು ಪರಿಣಾಮ ನೀರಿನ ಮೂಲಗಳು ಬರಿದಾಗುತ್ತಿವೆ. ಅದರಲ್ಲೂ ಅಂತರ್ಜಲದ ಪ್ರಮಾಣ ದಿನೇ ದಿನೆ ಕುಸಿಯುತ್ತಿರುವುದು ಆತಂಕಕಾರಿ ಸಂಗತಿ.
ಪುತ್ತೂರಿನಲ್ಲಿ ಕುಸಿತ
ದ.ಕ. ಜಿಲ್ಲೆಯಲ್ಲಿ ಕೊಳವೆ ಬಾವಿ ಕೊರೆತದ ನಿಷೇಧದ ಪಟ್ಟಿಯಲ್ಲಿರುವ ಪುತ್ತೂರು ತಾಲೂಕಿನ ಅಂತರ್ಜಲ ಮಟ್ಟದ ಅಂಕಿ ಅಂಶ ಇಲ್ಲಿನ ನೀರಿನ ಮೂಲ ಸುರಕ್ಷಿತವಾಗಿಲ್ಲ ಅನ್ನುವುದನ್ನು ದೃಢೀಕರಿಸಿದೆ. ತಾಲೂಕಿನ ತೆರೆದ ಬಾವಿಯಲ್ಲಿನ ನೀರಿನ ಮಟ್ಟ 2022ರ ಫೆಬ್ರವರಿಯಲ್ಲಿ ಸರಾಸರಿ 5.75 ಮೀಟರ್ನಲ್ಲಿತ್ತು. ಅದೀಗ 7.20 ಮೀಟರ್ ಕೆಳಗೆ ಜಾರಿದೆ. ಕೊಳವೆ ಬಾವಿಯ ಅಂತರ್ಜಲ ಮಟ್ಟ 2022ರ ಫೆಬ್ರವರಿಯಲ್ಲಿ 15.07 ಮೀ. ನಲ್ಲಿದ್ದ ನೀರಿನ ಮಟ್ಟ 2023ರ ಫೆಬ್ರವರಿಯಲ್ಲಿ 19.30 ಮೀ. ನಷ್ಟು ಕೆಳಭಾಗಕ್ಕೆ ಇಳಿದಿದೆ. ಅಂದರೆ ತೆರೆದ ಬಾವಿಯಲ್ಲಿ 1.45 ಮೀ., ಕೊಳವೆಬಾವಿಯಲ್ಲಿ 4.23 ಮೀ.ನಷ್ಟು ಕೆಳಗೆ ಇಳಿದಿದೆ.
ಪ್ರಕೃತಿ ವಿರೋಧಿ ಕೃತ್ಯ
ವರ್ಷದಿಂದ ವರ್ಷಕ್ಕೆ ಭೂಮಿಯಲ್ಲಿ ಇಂಗುವ ನೀರಿನ ಪ್ರಮಾಣ, ಅಂತರ್ಜಲ ಮಟ್ಟ ತಗ್ಗುತ್ತಿದೆ. ಅರಣ್ಯ ನಾಶ, ಪ್ರಕೃತಿ ವಿರೋಧಿ ಕೃತ್ಯ, ನೀರಿಂಗಿಸಲು ಪೂರಕ ಕ್ರಮಗಳು ಇಲ್ಲದಿರುವುದು ಅಂತರ್ಜಲ ಕುಸಿತಕ್ಕೆ ಕಾರಣ ಎಂದು ಅಧ್ಯಯನಗಳು ತಿಳಿಸಿವೆ. ಭೂಮಿಯಲ್ಲಿ ದೊರಕುವ ನೀರಿನಲ್ಲಿ ಶೇ. 97 ಭಾಗ ಸಮುದ್ರ ಪಾಲಾಗಿದೆ(ಉಪ್ಪು ನೀರು) ಉಳಿದ ಕೇವಲ ಶೇ. 3 ಸಿಹಿ ನೀರು ಧ್ರುವ ಪ್ರದೇಶದಲ್ಲಿ ಹಿಮಗಡ್ಡೆಯಾಗಿ, ಭೂಮಿಯೊಳಗೆ ಅಂತರ್ಜಲವಾಗಿ, ಭೂ ಮೇಲ್ಭಾಗದ ಕೆರೆ, ಕೊಳ, ತೊರೆ, ನದಿ, ಸರೋವರಗಳಲ್ಲಿ ದ್ರವ ರೂಪದಲ್ಲಿದೆ. ಮಣ್ಣಿನ ರಂಧ್ರಗಳ ಮೂಲಕ ನಿಧಾನವಾಗಿ ಕೆಳಗಿಳಿಯುವ ನೀರು ತಳದಲ್ಲಿರುವ ಶಿಲಾ ರಂಧ್ರಗಳಲ್ಲಿ,
ಬಿರುಕುಗಳಲ್ಲಿ ಸಂಗ್ರಹವಾಗುವುದೇ ಅಂತ ರ್ಜಲ. ಆ ಅಂತರ್ಜಲ ಮಟ್ಟವೇ ಈಗ ಸುರಕ್ಷಿತವಾಗಿಲ್ಲ.
ಸಂರಕ್ಷಣೆಯ ಜವಾಬ್ದಾರಿ
ನೀರು ಪ್ರಕೃತಿ ನಮಗಿತ್ತ ವರ. ಓಡುವ ಮಳೆ ನೀರನ್ನು ನಿಲ್ಲಿಸಿ, ಇಂಗಿಸಿ, ಅಂತರ್ಜಲ ಹೆಚ್ಚಿಸುವ ಅಗತ್ಯವಿದೆ. ಕೊಳವೆ ಬಾವಿಗಳ ನಡುವಿನ ಅಂತರ ಕಾಯ್ದುಕೊಂಡು ಹೆಚ್ಚಿನ ಅಶ್ವಶಕ್ತಿಯ ಪಂಪು ಬಳಸದೆ, ಸಮಯದ ಮಿತಿ ಇಟ್ಟು, ಆವಶ್ಯಕತೆ ಇದ್ದಷ್ಟೇ ನೀರನ್ನು ಮಿತವಾಗಿ ಬಳಸಿ. ನೀರಿನ ಮರುಬಳಕೆ ಹಾಗೂ ಅಂತರ್ಜಲ ಮರುಪೂರಣಕ್ಕೆ ಒತ್ತು ನೀಡುವ ಅಗತ್ಯ ಇದೆ.
ಜಿಲ್ಲೆಯ ಉಳಿದ ತಾಲೂಕಿನ ಸ್ಥಿತಿ..!
2022 ಮತ್ತು 2023ರ ಫೆಬ್ರವರಿಯಲ್ಲಿ ತೆರೆದ ಬಾವಿ ಹಾಗೂ ಕೊಳವೆಬಾವಿಯ ಅಂತರ್ಜಲ ಮಟ್ಟ ಪುತ್ತೂರಿಗಿಂತ ಉತ್ತಮ ಎಂದರೂ ಭವಿಷ್ಯದಲ್ಲಿ ಸುರಕ್ಷಿತ ಅಲ್ಲ. ಬೆಳ್ತಂಗಡಿಯಲ್ಲಿ ಕೊಳವೆ ಬಾವಿ ನೀರಿನ ಮಟ್ಟ 20 ಮೀ.ನಿಂದ 20.91ಕ್ಕೆ ಇಳಿದಿದೆ. ಮೂಡುಬಿದಿರೆಯಲ್ಲಿ 28.15 ಮೀ.ನಿಂದ 31.90 ಮೀ.ಗೆ ಇಳಿಕೆ ಕಂಡಿದೆ. ತೆರೆದ ಬಾವಿ ಅಂತರ್ಜಲ ಮಟ್ಟದ ಗಮನಿಸಿದರೆ ಮಂಗಳೂರು ತಾಲೂಕಿನಲ್ಲಿ 7.52 ಮೀ.ನಿಂದ 7.58 ಮೀ.ಗೆ ಇಳಿಕೆ ಕಂಡಿದೆ.
ನೀರಿನ ಮಟ್ಟ ಕುಸಿತ
ದ.ಕ. ಜಿಲ್ಲೆಯಲ್ಲಿ 2022 ಜನವರಿಯಲ್ಲಿ 12.90 ಮೀ.ನಲ್ಲಿದ್ದ ಅಂತರ್ಜಲ ಮಟ್ಟ 2023 ಜನವರಿಯಲ್ಲಿ 12.01ರಷ್ಟಿತ್ತು. 2022 ಫೆಬ್ರವರಿಯಲ್ಲಿ 13.79ರಲ್ಲಿದ್ದ ಅಂತರ್ಜಲ ಮಟ್ಟ 2023 ಫೆಬ್ರವರಿಯಲ್ಲಿ 13.71 ಮೀ.ನಷ್ಟಿದೆ.
-ದಾವೂದ್, ಭೂ ವಿಜ್ಞಾನಿ,
ಅಂತರ್ಜಲ ವಿಭಾಗ ಮಂಗಳೂರು
1.45 ಮೀ.;ಒಂದು ವರ್ಷದಲ್ಲಿ ತೆರೆದ ಬಾವಿಯಲ್ಲಿ ನೀರು ಕೆಳಕ್ಕೆ ಇಳಿದಿರುವುದು .
4.23 ಮೀ.; ವರ್ಷದಲ್ಲಿ ಕೊಳವೆ ಬಾವಿಯಲ್ಲಿ ನೀರು ಕೆಳಕ್ಕೆ ಇಳಿದಿರುವುದು
*ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು
Road Mishap;ಅರಂತೋಡು: ಕಾರು – ಬೈಕ್ ಢಿಕ್ಕಿ: ಸವಾರ ಸಾವು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು