ಶೀಘ್ರ ತೆರವಾಗಬೇಕಿದೆ ಹೂಳು, ಪೊದೆ
Team Udayavani, Apr 4, 2022, 10:01 AM IST
ವೇಣೂರು: ಇಲ್ಲಿಯ ಮುಖ್ಯಪೇಟೆಯ ಹೆದ್ದಾರಿ ಬದಿಯ ಚರಂಡಿಯಲ್ಲಿ ಹೂಳು ತುಂಬಿರುವುದು ಮಾತ್ರವಲ್ಲದೆ ಪೊದೆಗಳು ಬೆಳೆದು ಮಳೆಗಾಲಕ್ಕೆ ಕೃತಕ ನೆರೆ ಭೀತಿ ಎದುರಾಗಿದೆ.
ಬೇಸಗೆಯಲ್ಲಿ ಕಸಕಡ್ಡಿ, ತ್ಯಾಜ್ಯ ಸೇರಿಕೊಂಡು ಮಳೆ ಗಾಲದಲ್ಲಿ ಮಳೆ ನೀರಿನ ಹರಿವಿಗೆ ಅಡ್ಡಿಯುಂಟಾಗುತ್ತಿದ್ದು, ಕೆಲವೆಡೆ ಚರಂಡಿ, ಮೋರಿಗಳು ಪೂರ್ಣ ಬಂದ್ ಆಗಿರುವ ಸ್ಥಿತಿಯಲ್ಲಿದೆ.
ಕೆಲವೆಡೆ ಚರಂಡಿಯೇ ಇಲ್ಲ
ವೇಣೂರು ಮುಖ್ಯಪೇಟೆಯಲ್ಲಿ ಕೆಲವೆಡೆ ಚರಂಡಿಯೇ ಇಲ್ಲ, ಕೆಲವೆಡೆ ಚರಂಡಿಗೆ ಜಾಗವೂ ಇಲ್ಲ. ಹೀಗಾಗಿ ಮಳೆನೀರು ರಸ್ತೆಯಲ್ಲೇ ಹರಿಯುತ್ತಿರುವ ದೃಶ್ಯ ಮಾಮೂಲು ಎಂಬಂತಾಗಿದೆ. ವೇಣೂರು ಹಾಲು ಉತ್ಪಾದಕರ ಸಂಘದ ಬಳಿಯಿರುವ ಹೆದ್ದಾರಿಯ ಮೋರಿ ಹೂಳು ತುಂಬಿ ಬ್ಲಾಕ್ ಆಗಿದೆ. ಕಳೆದ ಬಾರಿಯ ಮಳೆಗಾಲದ ಮುನ್ನ ಸ್ಥಳೀಯ ಗ್ರಾ.ಪಂ. ದುರಸ್ತಿಗೊಳಿಸುವ ಪ್ರಯತ್ನ ಮಾಡಿತ್ತು. ಆದರೆ ಫಲ ನೀಡಿಲ್ಲ. ಇಲ್ಲಿ ಚರಂಡಿಯ ನೀರು ಹೆದ್ದಾರಿಯಲ್ಲೇ ಹರಿಯುತ್ತದೆ.
ಕೃತಕ ನೆರೆ ಸೃಷ್ಟಿ
ವೇಣೂರು ಕಾಲೇಜು ತಂಗುದಾಣದ ಬಳಿಯ ಚರಂಡಿಯ ನಿರ್ವಹಣೆ ಅಗತ್ಯವಾಗಿ ಆಗಬೇಕಿದೆ. ಕಳೆದ ಬಾರಿ ಹೆದ್ದಾರಿ ಬದಿಯ ವಾಣಿಜ್ಯ ಸಂಕೀರ್ಣದೊಳಗೆ ನೀರು ನುಗ್ಗಿತ್ತು. ದುರಸ್ತಿಗೆ ಉದಾಸೀನ ತೋರಿದರೆ ಕೃತಕ ನೆರೆ ಸೃಷ್ಟಿ ಯಾಗುವ ಆತಂಕವನ್ನು ಜನ ವ್ಯಕ್ತ ಪಡಿಸಿದ್ದಾರೆ.
ಹೆದ್ದಾರಿಯಲ್ಲೇ ಚರಂಡಿ ನೀರು
ವೇಣೂರು ಜೆ.ಪಿ. ಟವರ್ ಮುಂಭಾಗದ ರಸ್ತೆಯಲ್ಲಿ ಪ್ರತೀ ಮಳೆಗಾಲದಲ್ಲಿ ನೆರೆ ಸೃಷ್ಟಿಯಾಗುತ್ತದೆ. ಇಲ್ಲಿದ್ದ ಚರಂಡಿ ಸಂಪೂರ್ಣ ಮುಚ್ಚಲ್ಪಟ್ಟಿದ್ದು, ಹೆದ್ದಾರಿಯಲ್ಲೇ ಚರಂಡಿ ನೀರು ಹರಿಯುವಂತಾಗಿದೆ. ಹೆದ್ದಾರಿಯುದ್ದಕ್ಕೂ ಬದಿಯಲ್ಲಿ ಹರಿಯುವ ನದಿ ಇದ್ದರೂ ಚರಂಡಿ ನೀರನ್ನು ಸಮರ್ಪಕವಾಗಿ ನದಿಗೆ ಬಿಡಲು ಸಾಧ್ಯವಾಗಿಲ್ಲ ಎಂಬ ಮಾತುಗಳು ಕೇಳಿ ಬಂದಿದೆ. ಪೇಟೆಯಲ್ಲಿ ಕೆಲವೆಡೆ ಚರಂಡಿಯ ಮೇಲ್ಭಾಗಕ್ಕೆ ಅಳವಡಿಸಿರುವ ಸ್ಲಾéಬ್ಗಳು ಮುರಿದು ಬಿದ್ದಿವೆ. ಇನ್ನು ಕೆಲವು ಮುರಿಯುವ ಸ್ಥಿತಿಯಲ್ಲಿದೆ. ಸ್ಲ್ಯಾಬ್ಗಳನ್ನು ತೆಗೆದು ಚರಂಡಿ ಸ್ವತ್ಛಗೊಳಿಸುವ ಕಾರ್ಯಕ್ಕೆ ಸಂಬಂಧಿತ ಇಲಾಖೆಗಳು, ಸ್ಥಳೀಯಾಡಳಿತಗಳು ಮುಂದಾಗಬೇಕಿದೆ.