ತೊಡಿಕಾನ: ಅಂಗನವಾಡಿ ಕಟ್ಟಡ ಕಾಮಗಾರಿ ಆಮೆಗತಿ
ಶಿಥಿಲ ಕಟ್ಟಡದಲ್ಲೇ ದಿನ ಕಳೆಯುತ್ತಿರುವ ಮಕ್ಕಳು; ಸೂಕ್ತ ನೀರಿನ ವ್ಯವಸ್ಥೆಯಿಲ್ಲ
Team Udayavani, May 15, 2019, 6:00 AM IST
ಅರಂತೋಡು: ಸುಳ್ಯ ತಾಲೂಕಿನ ತೊಡಿಕಾನ ಗ್ರಾಮದ ಶಾಲಾ ಬಳಿಯ ಅಂಗನವಾಡಿ ಕಟ್ಟಡ ಕಾಮಗಾರಿ ಸ್ಥಗಿತಗೊಂಡು ಮೂರು ವರ್ಷದ ಬಳಿಕ ಮತ್ತೆ ಕಾಮಗಾರಿ ಆರಂಭಗೊಂಡು ಮತ್ತೆ ನಿಧಾನಗತಿಯಲ್ಲಿ ಸಾಗುತ್ತಿದೆ.
2015ನೇ ಇಸವಿಯ ಜನವರಿ ತಿಂಗಳಿನಲ್ಲಿ ನೂತನ ಅಂಗವಾಡಿ ಕಟ್ಟಡಕ್ಕೆ ಹಳೆಯ ಅಂಗವಾಡಿ ಕಟ್ಟಡದ ಪಕ್ಕದಲ್ಲಿಯೇ ಗುದ್ದಲಿ ಪೂಜೆ ನೆರವೇರಿಸಿ ಇಲಾಖೆ ಅನುದಾನ 4.18 ಲಕ್ಷ ರೂ. ಇಲಾಖೆ ಅನುದಾನದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಬಳಿಕ ಅನುದಾನದ ಕೊರತೆಯಿಂದ ಕಾಮಗಾರಿ ಸ್ಥಗಿತಗೊಂಡಿತ್ತು. ಬಳಿಕ ಸ್ಥಳೀಯ ಗ್ರಾ.ಪಂ. ವತಿಯಿಂದ 14ನೇ ಹಣಕಾಸು ಯೋಜನೆಯಲ್ಲಿ ಅನು ದಾನ ಮೀಸಲಿರಿಸಿ ಕಾಮಗಾರಿ ಮತ್ತೆ ಕೈಗೆತ್ತಿಕೊಳ್ಳಲಾಗಿದೆ.
ಅಪೂರ್ಣ ಕಾಮಗಾರಿ
ಇದೀಗ ಸ್ಲಾಬ್ ಕೆಲಸ ಪೂರ್ಣಗೊಂಡು ಗೋಡೆಯ ಗಾರೆ ಕೆಲಸವನ್ನು ಮುಗಿಸಲಾಗಿದೆ. ಶೌಚಾಲಯದ ಕೆಲಸ ನಡೆಯುತ್ತಿದೆ. ಅಡುಗೆ ಕೊಠಡಿಯ ಕೆಲಸ, ಕಿಟಕಿ, ಬಾಗಿಲು ನಿರ್ಮಾಣ ಆಗಬೇಕು. ವಿದ್ಯುತ್ ಸಂಪರ್ಕಕ್ಕೆ ವೈರಿಂಗ್ ಕೆಲಸ ನಡೆದಿದೆ. ಕಟ್ಟಡದ ಛಾವಣಿ ಮಳೆಗಾಲದಲ್ಲಿ ಸೋರುತ್ತಿದೆ. ಒಳಗಿನ ಎರಡು ಕೊಣೆಗಳಿಗೆ ಟೈಲ್ಸ್ ಹಾಕಲು ಬಾಕಿ ಉಳಿದಿದೆ. ಬಣ್ಣ ಬಳಿಯುವುದು ಸಹಿತ ಇತರ ಕೆಲಸ ಬಾಕಿ ಉಳಿದುಕೊಂಡಿವೆ.
ಶಿಥಿಲಗೊಂಡ ಕಟ್ಟಡ
ತೊಡಿಕಾನ ಅಂಗವಾಡಿ ಹಳೆಯ ಕಟ್ಟಡ ಶಿಥಿಲಗೊಂಡಿದ್ದು, ಇದರಲ್ಲಿಯೇ ಅಂಗವಾಡಿಯ ಮಕ್ಕಳು ಕಾಲ ಕಳೆಯುವಂತಾಗಿದೆ. ಸದ್ಯದಲ್ಲೇ ಮತ್ತೆ ಮಳೆಗಾಲ ಪ್ರಾರಂಭವಾಗುವುದರಿಂದ ನೂತನ ಕಟ್ಟಡ ಕಾಮಗಾರಿ ಪೂರ್ಣಗೊಳ್ಳದಿದ್ದರೆ ಮಕ್ಕಳು ಈ ಮಳೆಗಾಲದಲ್ಲಿ ಹಳೆಯ ಕಟ್ಟಡದಲ್ಲಿ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಅಂಗನವಾಡಿಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಪಕ್ಕದ ಪ್ರಾಥಮಿಕ ಶಾಲೆಯ ನೀರನ್ನು ಬಳಸುತ್ತಿದ್ದು, ಪ್ರಾಥಮಿಕ ಶಾಲೆಗೆ ಪ್ರತಿ ತಿಂಗಳು ಬರುವ ವಿದ್ಯುತ್ ಬಿಲ್ನ ಮೂರನೇ ಒಂದು ಭಾಗವನ್ನು ಅಂಗವಾಡಿ ಮಕ್ಕಳ ಹೆತ್ತವರಿಂದ ಸಂಗ್ರಹಿಸಿ ಪಾವತಿಸಲಾಗುತ್ತಿದೆ. ಜತೆಗೆ ಅಂಗನವಾಡಿಗೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಅಗತ್ಯವಾಗಿ ಕಾಡುತ್ತಿದೆ.
ಶೀಘ್ರ ಕೆಲಸ ಮುಗಿಸಲು ಸೂಚನೆ
ತೊಡಿಕಾನ ಅಂಗವಾಡಿಗೆ ನಾವು ಗ್ರಾ.ಪಂ.ನ 14ನೇ ಹಣಕಾಸು ಯೋಜನೆಯಲ್ಲಿ ಹಣವನ್ನು ಮೀಸಲಿರಿಸಿ ಕಾಮಗಾರಿ ನಡೆಯುತ್ತಿದೆ. ಮುಂದಿನ ಕೆಲವು ದಿನಗಳಲ್ಲಿ ಮಳೆಗಾಲ ಪ್ರಾರಂಭವಾಗುವುದರಿಂದ ಗುತ್ತಿಗೆದಾರರಿಗೆ ತತ್ಕ್ಷಣ ಕಾಮಗಾರಿ ಮುಗಿಸಿ ಕೊಡುವಂತೆ ಸೂಚನೆ ನೀಡುತ್ತೇವೆ.
– ನೀಲಾವತಿ ಕೊಡಂಕೇರಿ, ಅಧ್ಯಕ್ಷರು, ಅರಂತೋಡು ಗ್ರಾ.ಪಂ.