Belthangady ಹೆದ್ದಾರಿಯಲ್ಲಿ ಎದುರಾದ ಕಾರನ್ನು ಎತ್ತಿ ನೆಲಕ್ಕೊಗೆದ ಕಾಡಾನೆ!
ಕಕ್ಕಿಂಜೆಯ ಬಸ್ತಿಯಲ್ಲಿ ಘಟನೆ ; ಕಾರಿನಲ್ಲಿದ್ದ ಇಬ್ಬರಿಗೆ ಗಾಯ ; ಇತರರು ಅಪಾಯದಿಂದ ಪಾರು
Team Udayavani, Nov 28, 2023, 12:00 AM IST
ಬೆಳ್ತಂಗಡಿ: ತಾಲೂಕಿನ ನೆರಿಯದ ಅಣಿಯೂರಿನಲ್ಲಿ ಒಂಟಿ ಸಲಗವು ಕಾರಿಗೆ ಹಾನಿ ಮಾಡಿ ಇಬ್ಬರನ್ನು ಗಾಯಗೊಳಿಸಿದ ಘಟನೆ ಸೋಮವಾರ ರಾತ್ರಿ ಸಂಭವಿಸಿದೆ.
ಪುತ್ತೂರು ಮೂಲದ ಅಬ್ದುಲ್ ರೆಹಮಾನ್ (40) ಮತ್ತು ನಾಸಿಯಾ (30) ಗಾಯಾಳುಗಳು. ರೆಹಮಾನ್ ಅವರ ತಲೆ ಮತ್ತು ಕಾಲಿಗೆ ಹಾಗೂ ನಾಸಿಯಾ ಅವರ ಕಾಲಿಗೆ ಗಾಯವಾಗಿದೆ. ಇವರಿಗೆ ಕಕ್ಕಿಂಜೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಕಾರಿನಲ್ಲಿ ಮಗು ಸಹಿತ ಏಳು ಮಂದಿ ನೆರಿಯದ ಸಂಬಂಧಿಕರ ಮನೆಗೆ ಪ್ರಯಾ ಣಿಸುತ್ತಿದ್ದರು. ಆನೆಯು ರಸ್ತೆಯಲ್ಲಿ ಸಂಚರಿ ಸುತ್ತಿರುವುದನ್ನು ತಿಳಿದಿದ್ದ ಸ್ಥಳೀಯರು ಆಗ ಆ ದಾರಿಯಾಗಿ ಬಂದ ಕಾರನ್ನು ಮುನ್ನೆಚ್ಚರಿಕೆ ದೃಷ್ಟಿಯಿಂದ ನಿಲ್ಲಿಸುವಂತೆ ಸೂಚಿಸಿದರು. ಕಾರನ್ನು ಕಟ್ಟಡವೊಂದರ ಬದಿ ನಿಲ್ಲಿಸುವಷ್ಟರಲ್ಲಿ ಆನೆ ಅದೇ ಪರಿಸರಕ್ಕೆ ಆಗಮಿಸಿತ್ತು. ಕಾರಿನಲ್ಲಿದ್ದ ಕೆಲವರು ಅಷ್ಟರಲ್ಲಿ ಕೆಳಗೆ ಇಳಿದು ಪಕ್ಕದ ಮನೆಯಲ್ಲಿ ರಕ್ಷಣೆ ಪಡೆದರು.
ಆನೆಯು ದಾಡೆಯ ಮೂಲಕ ಕಾರನ್ನು ಕಟ್ಟಡದ ಗೋಡೆಗೆ ಗುದ್ದಿ ಜಖಂಗೊಳಿಸಿ ಅನಂತರ ಅಲ್ಲಿಂದ ಮನೆಯ ಕಾಂಪೌಂಡ್ಗೆ ನುಗ್ಗಿ ಅಲ್ಲಿಂದ ತೋಟಕ್ಕೆ ಹೋಗಿದೆ. ಬಳಿಕ ನದಿಯ ಪರಿಸರದಲ್ಲಿ ಕಂಡಿದ್ದಾಗಿ ಸ್ಥಳೀಯರು ತಿಳಿಸಿದ್ದಾರೆ.
ಸ್ಥಳೀಯರು ಹಾಗೂ ಅರಣ್ಯ ಇಲಾಖೆ ಸಿಬಂದಿ ಪಟಾಕಿ ಸಿಡಿಸುವ ಮೂಲಕ ಆನೆಯನ್ನು ಕಾಡಿನತ್ತ ಅಟ್ಟಲು ಕ್ರಮ ಕೈಗೊಂಡಿದ್ದಾರೆ.
ಈ ಘಟನೆಗೆ ಪೂರ್ವದಲ್ಲಿ ಆನೆಯು ಪರಿಸರದ ಜನನಿಬಿಡ ಪ್ರದೇಶಗಳಲ್ಲಿ ಓಡಾಟ ನಡೆಸಿದ್ದು ಒಬ್ಬರ ಮನೆಯಂಗಳಕ್ಕೂ ಹೋಗಿತ್ತು ಹಾಗೂ ರಸ್ತೆ ಬದಿ ಇರುವ ಮನೆಯೊಂದರ ಗೇಟನ್ನು ಮುರಿಯಲು ಯತ್ನಿಸಿತ್ತು. ಆಗ ಸುತ್ತಮುತ್ತಲ ಮನೆಯವರು ಬೊಬ್ಬೆ ಹೊಡೆದ ಕಾರಣ ಮತ್ತೆ ರಸ್ತೆಗೆ ಬಂದಿತ್ತು.
ತಾಲೂಕಿನ ಹಲವು ಗ್ರಾಮಗಳಲ್ಲಿ ಕಾಡಾನೆಗಳಿಂದ ನಿರಂತರ ಕೃಷಿ ಹಾನಿ ಉಂಟಾಗುತ್ತಿದ್ದು, ಇದೇ ಮೊದಲ ಬಾರಿಗೆ ವಾಹನದ ಮೇಲೆ ದಾಳಿ ನಡೆದಿದೆ.
ಬೆಳಗ್ಗೆ ಶಾಂತ, ರಾತ್ರಿ ರೌದ್ರ!
ಚಾರ್ಮಾಡಿ ಗ್ರಾ.ಪಂ. ವ್ಯಾಪ್ತಿಯ ತೋಟತ್ತಾಡಿ ಪರಿಸರದಲ್ಲಿ ಸೋಮವಾರ ಬೆಳಗ್ಗೆ ಇದೇ ಕಾಡಾನೆ ಕಂಡುಬಂದಿತ್ತು. ಆಗ ಆನೆ ಶಾಂತವಾಗಿತ್ತು. ಆ ಪರಿಸರದಲ್ಲಿ ಓಡಾಡಿ ಯಾವುದೇ ಹಾನಿ ಎಸಗದೆ ಕಾಡಿಗೆ ತೆರಳಿತ್ತು.
ರಾತ್ರಿಯ ವೇಳೆ ನೆರಿಯದ ಬಯಲು ಶಾಲೆಯ ಬಳಿ ಕಾಣಿಸಿಕೊಂಡ ರಸ್ತೆಗೆ ಇಳಿಯುವ ವೇಳೆ ಜೀಪ್ ಒಂದು ಸಾಗಿದ್ದು, ಅದರ ಬೆಳಕು ಕಂಡ ಬಳಿಕ ರೌದ್ರವಾತಾರ ತಾಳಿತು. ಈ ನಡುವೆ ಜನರು ಕೂಡ ಗೊಬ್ಬೆ ಹಾಕಿ, ಪಟಾಗಿ ಸಿಡಿಸಿದ್ದು ಆನೆಯ ಸಿಟ್ಟಿಗೆ ಕಾರಣವಾಯಿತು. ಆನೆ ಬರುವ ವೇಳೆ ಯಾವುದೇ ವಾಹನ ಎದುರಾಗದಿದ್ದರೆ ಅದು ತನ್ನಷ್ಟಕ್ಕೆ ಹೋಗುವ ಸಾಧ್ಯತೆ ಇತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.