ಉದಯವಾಣಿ ಫಾಲೋಅಪ್ : ಆಶ್ರಮ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗದಂತೆ ಕ್ರಮ
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಿರ್ದೇಶಕ ಸಂಗಪ್ಪ ಭರವಸೆ
Team Udayavani, Aug 19, 2020, 6:10 AM IST
ಸಾಂದರ್ಭಿಕ ಚಿತ್ರ
ಕಾರ್ಕಳ: ರಾಜ್ಯದ ಪರಿಶಿಷ್ಟ ವರ್ಗದ ಆಶ್ರಮ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿ ಜಿಲ್ಲಾವಾರು ಮಾಹಿತಿ ಸಂಗ್ರಹಿಸಿ, 15 ದಿನಗಳೊಳಗೆ ಶಿಕ್ಷಣಕ್ಕೆ ತೊಂದರೆಯಾಗದಂತೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಿರ್ದೇಶಕ ಸಂಗಪ್ಪ (ಕೆಎಎಸ್) ತಿಳಿಸಿದ್ದಾರೆ.
ಕೋವಿಡ್-19 ವೈರಾಣು ಹರಡುವಿಕೆಯಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿ ಪರಿಶಿಷ್ಟ ವರ್ಗದ ಅಶ್ರಮ ಶಾಲೆಗಳ ಮಕ್ಕಳ ಶಿಕ್ಷಣ ವ್ಯವಸ್ಥೆಯಲ್ಲಿ ತೊಂದರೆಯಾಗಿರುವುದು ನಿಜ. ಗುಡ್ಡ ಪ್ರದೇಶಗಳು, ಮಲೆನಾಡು ಮುಂತಾದ ಕಡೆಗಳಲ್ಲಿ ಆಶ್ರಮ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರದೇಶವಾರು ಪ್ರಾಕೃತಿಕ ವಾತಾವರಣ, ಮೂಲಸೌಕರ್ಯ ಇತ್ಯಾದಿಗಳಿಗೆ ಸಂಬಂದಿಸಿ ಪ್ರತ್ಯೇಕ ಸಮಸ್ಯೆಗಳು ಇರುವುದರಿಂದ ಹೀಗಾಗಿದೆ. ಕೆಲವು ಜಿಲ್ಲೆಗಳ ಆಶ್ರಮ ಶಾಲೆಗಳಲ್ಲಿರುವ ಮಕ್ಕಳು ಅದೇ ಊರಿನವರಾಗಿರುವುದಿಲ್ಲ.
ಅಂತಹ ಜಿಲ್ಲೆಗಳಲ್ಲಿ ಶಿಕ್ಷಕರು ಮಕ್ಕಳ ಮನೆಗಳಿರುವಲ್ಲಿಗೆ ಹೋಗಿ ಅಕ್ಕಪಕ್ಕದ ಮಕ್ಕಳನ್ನು ಒಂದೆಡೆ ಸೇರಿಸಿ ಪಾಠ ಹೇಳಿಕೊಡುತ್ತಿದ್ದಾರೆ. ಚಾಮರಾಜನಗರ, ಕೊಡಗು ಭಾಗದಲ್ಲಿ ಅಲ್ಪ ಯಶಸ್ಸು ಕಂಡಿದೆ. ಕಾಡು-ಗುಡ್ಡ ಪ್ರದೇಶಗಳಿರುವಲ್ಲಿ ಇಂಟರ್ನೆಟ್ ಇತ್ಯಾದಿ ಸಮಸ್ಯೆಗಳಿರುವುದರಿಂದ ಪೂರ್ಣ ಯಶಸ್ಸು ಸಾಧ್ಯವಾಗಿಲ್ಲ ಎಂದರು.
ಶಿಕ್ಷಣ ಇಲಾಖೆಯ ಮಾರ್ಗಸೂಚಿಯಂತೆ ಕ್ರಮ ತೆಗೆದುಕೊಳ್ಳಲಾಗುವುದು. ಜತೆಗೆ ಮಕ್ಕಳ ಆರೋಗ್ಯ ದೃಷ್ಟಿಯಿಂದ, ಸಾಮಾಜಿಕ ಅಂತರ ಕಾಪಾಡುವುದರ ಜತೆಗೆ ಎಲ್ಲ ರೀತಿಯಲ್ಲೂ ಮುನ್ನೆಚ್ಚರಿಕೆ ವಹಿಸಿ, ಶಿಕ್ಷಣವನ್ನು ಪರಿಣಾಮಕಾರಿಯಾಗಿ ಹೇಗೆ ನೀಡಬಹುದು ಮತ್ತು ಅದಕ್ಕೆ ಬೇಕಿರುವ ಅಗತ್ಯ ಸೌಕರ್ಯಗಳನ್ನು ಕಲ್ಪಿಸಲು ಯತ್ನಿಸಲಾಗುವುದು ಎಂದು ತಿಳಿಸಿದ್ದಾರೆ.
ರಾಜ್ಯದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಆಶ್ರಮ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳು ಶಿಕ್ಷಣದಿಂದ ವಂಚಿತರಾದ ಕುರಿತು ಆ. 18ರಂದು ಉದಯವಾಣಿಯಲ್ಲಿ ಸಚಿತ್ರ ವರದಿ ಪ್ರಕಟಗೊಂಡಿತ್ತು.