ನ್ಯಾಯಾಲಯದಲ್ಲಿ ಕಲಾಪ ಪುನರಾರಂಭ
Team Udayavani, Jun 2, 2020, 8:24 AM IST
ಸಾಂದರ್ಭಿಕ ಚಿತ್ರ
ಮಂಗಳೂರು/ಉಡುಪಿ: ಮಂಗಳೂರು ಮತ್ತು ಉಡುಪಿ ಜಿಲ್ಲಾ ನ್ಯಾಯಾಲಯಗಳಲ್ಲಿ ಎರಡೂವರೆ ತಿಂಗಳ ಬಳಿಕ ಸೋಮವಾರ ಕಾರ್ಯ ಕಲಾಪಗಳು ಪುನರಾರಂಭಗೊಂಡಿವೆ.
ಕೋವಿಡ್ ಸೋಂಕು ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಜಿಲ್ಲಾ ನ್ಯಾಯಾಲಯ ಕಟ್ಟಡ ಸಂಕೀರ್ಣದ ಆವರಣವನ್ನು ರವಿವಾರ ಸ್ಯಾನಿಟೈಸೇಶನ್ ಮಾಡಿಸಲಾಗಿತ್ತು. ನ್ಯಾಯಾಲಯ ಕಟ್ಟಡದ ಆವರಣಕ್ಕೆ ನ್ಯಾಯಾಧೀಶರಿಗೆ, ವಕೀಲರಿಗೆ ಮತ್ತು ನ್ಯಾಯಾಲಯದ ಸಿಬಂದಿಗೆ ಮಾತ್ರ ಪ್ರವೇಶಾವಕಾಶವಿತ್ತು.
ಶೇ. 50ರಷ್ಟು ನ್ಯಾಯಾಲಯಗಳು ದಿನ ಬಿಟ್ಟು ದಿನ ಕಾರ್ಯ ನಿರ್ವಹಿಸುವಂತೆ ಹೈಕೋರ್ಟ್ ನಿರ್ದೇಶನ ನೀಡಿದ್ದರಿಂದ ಅರ್ಧದಷ್ಟು ನ್ಯಾಯಾಲಯಗಳಲ್ಲಿ ಮಾತ್ರ ಕಲಾಪಗಳು ನಡೆದವು. ಅಲ್ಲದೆ ಹೈಕೋರ್ಟ್ ಸೂಚನೆಯಂತೆ ಬೆಳಗ್ಗಿನ ಅವಧಿಯಲ್ಲಿ 10 ಹಾಗೂ ಮಧ್ಯಾಹ್ನ ಬಳಿಕದ ಅವಧಿಯಲ್ಲಿ 10 ಕೇಸುಗಳನ್ನು ಮಾತ್ರ ತೆಗೆದುಕೊಳ್ಳಲಾಯಿತು. ಕಕ್ಷಿಗಾರರ ಪ್ರತಿನಿಧಿಗಳಾಗಿ ವಕೀಲರು ಮಾತ್ರ ವಿಚಾರಣೆಗೆ ಹಾಜರಾದರು. ಥರ್ಮಲ್ ಸ್ಕ್ರೀನಿಂಗ್ ಮತ್ತು ದೇಹ ಪೂರ್ತಿ ಸ್ಯಾನಿಟೈಸೇಶನ್ ಮಾಡಿ ವಕೀಲರನ್ನು ಮತ್ತು ಸಿಬಂದಿಯನ್ನು ಒಳಗೆ ಬಿಡಲಾಯಿತು. ವಕೀಲರಿಗೆ ಡ್ರೆಸ್ ಕೋಡ್ ಮಾಡಿದ್ದರಿಂದ ಅವರು ಶ್ವೇತ ವಸ್ತ್ರ ಧಾರಿಗಳಾಗಿದ್ದರು.