ಪೈದ್ವಯರು ಸದಾ ಸ್ಮರಣೀಯರು: ಅಶೋಕ್ ಪೈ
ಮಣಿಪಾಲ:ಡಾ| ಟಿ.ಎಂ.ಎ ಪೈ ,ಟಿ.ಎ.ಪೈ ಸ್ಮತಿ ದಿನ ಆಚರಣೆ
Team Udayavani, May 30, 2020, 5:24 AM IST
ಉಡುಪಿ: ಭಾರತೀಯ ವಿಕಾಸ ಟ್ರಸ್ಟಿನ ಸಭಾಂಗಣದಲ್ಲಿ ಶುಕ್ರವಾರ ಡಾ| ಟಿ.ಎಂ.ಎ. ಪೈ ಮತ್ತು ಟಿ.ಎ.ಪೈ ಅವರ ಸ್ಮತಿ ದಿನದ ಆಚರಣೆ ನಡೆಯಿತು.
ಬಿವಿಟಿ ಆಡಳಿತ ಟ್ರಸ್ಟಿ ಟಿ.ಅಶೋಕ್ ಪೈ ಪುಷ್ಪಾರ್ಚನೆಗೈದು ಮಾತನಾಡಿ ಡಾ| ಟಿ.ಎಂ.ಎ. ಪೈ ಮತ್ತು ಟಿ.ಎ.ಪೈಯವರು ಸಮಾಜದ ಎಲ್ಲ ವರ್ಗಗಳ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಅವರ ಅಭಿವೃದ್ಧಿಗೆ ಬೇಕಾದ ಒಂದು ಅಪೂರ್ವ ಮಾದರಿಯನ್ನು ರೂಪಿಸಿದರು. ಇಂದು ಇಬ್ಬರೂ ಮಹನೀಯರ ಜೀವನ ಮತ್ತು ಸಾಧನೆಯನ್ನು ಪುನರಪಿ ಸ್ಮರಿಸುತ್ತ ಮುಂದಿನ ಜನಾಂಗವೂ ಇವರಿಂದ ಸ್ಪೂರ್ತಿ ಪಡೆದು ದೇಶ ಕಟ್ಟುವ ಕಾರ್ಯ ನಡೆಸಲಿ ಎಂದು ಕರೆಯಿತ್ತರು. ಇದೇ ಸಂದರ್ಭದಲ್ಲಿ ಟಿ. ಅಶೋಕ್ ಪೈ ಅವರು ಸ್ಮತಿ ದಿನದಂದು ವಿತರಿಸಲ್ಪಡುವ ತರಕಾರಿ ಬೀಜಗಳ ಪ್ಯಾಕೆಟ್ಗಳನ್ನು ಸಾಂಕೇತಿಕವಾಗಿ ಬಿಡುಗಡೆಗೊಳಿಸಿದರು.
ಸೆಲ್ಕೋ ಮಹಾ ಪ್ರಬಂಧಕರಾದ ಜಗದೀಶ್ ಪೈ, ಬಿವಿಟಿ ಹಿರಿಯ ಸಲಹೆಗಾರ ಬಿ. ಸೀತಾರಾಮ ಶೆಟ್ಟಿ ನುಡಿ ನಮನ ಸಲ್ಲಿಸಿದರು.
ಬಿವಿಟಿ ಮುಖ್ಯ ಕಾರ್ಯಕ್ರಮ ಸಂಯೋಜಕಿ ಲಕ್ಷ್ಮೀ ಬಾಯಿ ಸ್ವಾಗತಿಸಿ ಮುಖ್ಯ ವ್ಯವಸ್ಥಾಪಕ ಮನೋಹರ ಕಟ್ಗೇರಿ ವಂದಿಸಿದರು. ಆಡಳಿತಾಧಿಕಾರಿ ಐ. ಜಿ. ಕಿಣಿ ಉಪಸ್ಥಿತರಿದ್ದರು. ಬಿವಿಟಿ ಮತ್ತು ಸೆಲ್ಕೋ ಸಂಸ್ಥೆಯ ಸಿಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.