ಹೆಚ್ಚುವರಿ ಆಯುಷ್ ಕೇಂದ್ರಕ್ಕೆ ಪ್ರಸ್ತಾವ
Team Udayavani, Jul 22, 2022, 11:55 AM IST
ಉಡುಪಿ: ಕೋವಿಡ್ ಅನಂತರ ಆಯುರ್ವೇದ ಚಿಕಿತ್ಸೆಗೆ ಜನರು ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಈ ನಡುವೆ ಜಿಲ್ಲೆಯ ವಂಡ್ಸೆ ಹಾಗೂ ಕೋಟದಲ್ಲಿ ಪ್ರಾಥಮಿಕ ಆರೋಗ್ಯ ಆಯುಷ್ ಕೇಂದ್ರ ಸ್ಥಾಪಿಸುವ ಬಗ್ಗೆ ಸಲ್ಲಿಸಲಾಗಿದ್ದ ಪ್ರಸ್ತಾವನೆ ಇನ್ನೂ ಬಾಕಿ ಉಳಿದಿದೆ.
ಕಾರ್ಕಳದ ಕೆರ್ವಾಶೆ, ಕಾಂತಾವರ, ಹೆಬ್ರಿಯ ಸೋಮೇಶ್ವರ, ಕಾಪುವಿನ ಪಲಿಮಾರು, ಕುರ್ಕಾಲು, ಬೆಳಪು, ಬ್ರಹ್ಮಾವರದ ಕರ್ಜೆ, ಶಿರೂರು, ಬೈಂದೂರಿನ ಕಾಲೊ¤àಡು, ನಾವುಂದ, ಬೆಳ್ಳಾಲ, ಕುಂದಾಪುರದ ಕಾಳಾವರ, ಅಮಾಸೆಬೈಲು, ಗುಲ್ವಾಡಿಯಲ್ಲಿ ಚಿಕಿತ್ಸಾಲಯಗಳಿವೆ. ಇಲ್ಲಿ ದಿನನಿತ್ಯ 20ರಿಂದ 30 ಮಂದಿ ರೋಗಿಗಳು ಚಿಕಿತ್ಸೆ ಪಡೆಯಲು ಆಗಮಿಸುತ್ತಾರೆ.
ಸಿಬಂದಿ ಕೊರತೆ
ಜಿಲ್ಲಾ ಆಯುಷ್ ಆಸ್ಪತ್ರೆಗೆ ನಿತ್ಯ 25ರಿಂದ 40 ಮಂದಿ ರೋಗಿಗಳು ಚಿಕಿತ್ಸೆಗಾಗಿ ಆಗಮಿಸುತ್ತಿದ್ದರೂ ಮೂಲ ಸೌಕರ್ಯಗಳ ಕೊರತೆ ಕಾಡುತ್ತಿದೆ. ಸಿಬಂದಿ, ಭದ್ರತಾ ಸಿಬಂದಿ, ಕ್ಯಾಟರಿಂಗ್ ವ್ಯವಸ್ಥೆ ಇಲ್ಲಿ ಸಮರ್ಪಕವಾಗಿಲ್ಲ. ವೈದ್ಯಕೀಯ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಇಲ್ಲಿ ತರಬೇತಿಯಲ್ಲಿ ನಿರತರಾಗಿದ್ದಾರೆ. ಉಳಿದಂತೆ ಬೆರಳೆಣಿಕೆಯಷ್ಟು ಮಂದಿ ವೈದ್ಯರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಒಳರೋಗಿ ವಿಭಾಗವಿಲ್ಲ
ಜಿಲ್ಲಾ ಆಯುಷ್ ಆಸ್ಪತ್ರೆ ಸ್ಥಾಪನೆಗೊಂಡು 6 ವರ್ಷ ಕಳೆದರೂ ಇನ್ನು ಕೂಡ ಇಲ್ಲಿ ಒಳರೋಗಿ ವಿಭಾಗವೇ ಇಲ್ಲ. ಹೊರರೋಗಿ ವಿಭಾಗಕ್ಕೆ ದಿನನಿತ್ಯ 25ರಿಂದ 40 ಮಂದಿ ಚಿಕಿತ್ಸೆಗಾಗಿ ಆಗಮಿಸುತ್ತಾರೆ. ಒಳರೋಗಿ ವಿಭಾಗಕ್ಕೂ ಅಪಾರ ಬೇಡಿಕೆಯಿದ್ದರೂ ಮೂಲ ಸೌಕರ್ಯದ ಕೊರತೆ ಯಿಂದಾಗಿ ಅದು ಕಾರ್ಯರೂಪಕ್ಕೆ ಬಂದಿಲ್ಲ ಎನ್ನುತ್ತಾರೆ ವೈದ್ಯಾಧಿಕಾರಿಗಳು.
ಯುನಾನಿ ಚಿಕಿತ್ಸೆಗೆ ಅಪಾರ ಬೇಡಿಕೆ
ಜಿಲ್ಲಾ ಆಯುಷ್ ಆಸ್ಪತ್ರೆಯಲ್ಲಿ ಪಂಚಕರ್ಮ ಸಹಿತ ಹಲವಾರು ರೀತಿಯ ಚಿಕಿತ್ಸೆಗಳು ಲಭ್ಯವಿವೆ. ಇದರಲ್ಲೂ ಮುಖ್ಯವಾಗಿ ಯುನಾನಿ ಚಿಕಿತ್ಸೆಗೆ ಹೆಚ್ಚು ಮಂದಿ ಆಗಮಿಸುತ್ತಿದ್ದಾರೆ. ಕುರ್ಕಾಲು ಬಳಿಯ ಮಲ್ಲಾರುವಿನಲ್ಲಿ ಯುನಾನಿ ಚಿಕಿತ್ಸಾಲಯ ಸ್ಥಾಪಿಸುವ ಬಗ್ಗೆ ಪ್ರಸ್ತಾವನೆ ಕಳುಹಿಸಲಾಗಿತ್ತಾದರೂ ಅದು ಕೂಡ ಕಾರ್ಯಗತಗೊಂಡಿಲ್ಲ.
ಮೂಲ ಸೌಕರ್ಯ: ಜಿಲ್ಲಾ ಆಯುಷ್ ಆಸ್ಪತ್ರೆಯಲ್ಲಿ ಎಲ್ಲ ರೀತಿಯ ಸೇವೆಗಳೂ ಲಭ್ಯವಿವೆ. ಸಾಕಷ್ಟು ಮಂದಿ ಇದರ ಪ್ರಯೋಜನವನ್ನೂ ಪಡೆದುಕೊಂಡಿದ್ದಾರೆ. ಸಿಬಂದಿ ಹಾಗೂ ಮೂಲಸೌಕರ್ಯ ಕಲ್ಪಿಸುವ ಬಗ್ಗೆ ಇಲಾಖೆಗೆ ಪ್ರಸ್ತಾವನೆ ಕಳುಹಿಸಲಾಗಿದೆ. –ಡಾ| ಸತೀಶ್ ಆಚಾರ್ಯ, ಜಿಲ್ಲಾ ಆಯುಷ್ ಅಧಿಕಾರಿ