ಅಜ್ಜರಕಾಡು ಜಿಲ್ಲಾಸ್ಪತ್ರೆ ಮೇಲ್ದರ್ಜೆಗೆ; ಸಚಿವ ಸಂಪುಟದಲ್ಲಿ ಇಂದು ಅನುಮೋದನೆ ಸಾಧ್ಯತೆ
Team Udayavani, Oct 22, 2020, 5:21 AM IST
ಅಜ್ಜರಕಾಡು ಜಿಲ್ಲಾಸ್ಪತ್ರೆ.
ಉಡುಪಿ: ಉಡುಪಿ ಜಿಲ್ಲೆಯಾಗಿ ಘೋಷಣೆಯಾದ 23 ವರ್ಷಗಳ ಬಳಿಕ ಅಜ್ಜರಕಾಡು ಜಿಲ್ಲಾಸ್ಪತ್ರೆ ಯನ್ನು ಅಧಿಕೃತವಾಗಿ ಮೇಲ್ದರ್ಜೆಗೇರಿಸುವ ಯೋಜನೆಗೆ ಸಚಿವ ಸಂಪುಟ ಸಭೆಯಲ್ಲಿ ಅ. 22ರಂದು ಅನುಮೋದನೆ ಸಿಗುವ ಸಾಧ್ಯತೆಗಳಿವೆ. ಜಿಲ್ಲಾಸ್ಪತ್ರೆಯ ಕಟ್ಟಡವನ್ನು 115 ಕೋ.ರೂ. ವೆಚ್ಚದಲ್ಲಿ ನಿರ್ಮಿಸಲು, 35 ಕೋ.ರೂ. ವೆಚ್ಚದಲ್ಲಿ ಪೀಠೊಪಕರಣ ಸೇರಿದಂತೆ 250 ಬೆಡ್ ಆಸ್ಪತ್ರೆಗೆ ಅಗತ್ಯವಿರುವ ವೈದ್ಯರು ಹಾಗೂ ಸಿಬಂದಿ ನೇಮಕಾತಿ, ಕಟ್ಟಡ ಕಾಮಗಾರಿ ಟೆಂಡರ್ ಪ್ರಕ್ರಿಯೆಗಳು ನಡೆಯಲಿವೆ.
ಪ್ರಸ್ತಾವನೆಗೆ ಎರಡು ವರ್ಷ
ಜಿಲ್ಲಾಸ್ಪತ್ರೆಯ ಸುಸಜ್ಜಿತ ಬಹುಮಹಡಿ ಕಟ್ಟಡ ನಿರ್ಮಾಣಕ್ಕೆ ಎರಡು ವರ್ಷದ ಹಿಂದೆಯೇ ಜಿಲ್ಲಾಸ್ಪತ್ರೆಯಿಂದ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಆರೋಗ್ಯ ಇಲಾಖೆಯ ಎಂಜಿನಿಯರಿಂಗ್ ವಿಭಾಗದವರು ಹೊಸ ಕಟ್ಟಡ ರೂಪರೇಖೆ ಗಳನ್ನು ತಯಾರಿಸಿದ್ದರು. ಜಿಲ್ಲಾಸ್ಪತ್ರೆಯಾಗಿ ಮೇಲ್ದರ್ಜೆಗೇರಿದರೆ ಮಂಜೂರಾದ ತಜ್ಞ ವೈದ್ಯರ ಹುದ್ದೆಯೊಂದಿಗೆ ಹೆಚ್ಚುವರಿ ಯಾಗಿ 4, ಶಸ್ತ್ರ ಚಿಕಿತ್ಸಕರ 2, ಅರಿವಳಿಕೆ ತಜ್ಞ 1, ಎಲುಬು ಕೀಲು ತಜ್ಞ 2, ಚರ್ಮ ರೋಗ, ಇಎನ್ಟಿ, ಮಾನಸಿಕ ರೋಗ ತಜ್ಞ, ರೇಡಿಯಾಲಜಿಸ್ಟ್ ತಲಾ 2, ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ 6, ಶುಶ್ರೂಷಕಿ ಯರು 25, ಕಿರಿಯ ಪ್ರಯೋಗಶಾಲಾ ತಂತ್ರಜ್ಞರ ಹುದ್ದೆ ಸೇರಿದಂತೆ ಒಟ್ಟು 60 ಮಂದಿಯ ನೇಮಕವಾಗಬೇಕಿದೆ. ಇನ್ನು ಈಗಾಗಲೇ ವಿವಿಧ ವಾರ್ಡ್, ಶವಾಗಾರ, ಐಸಿಯು ಘಟಕ ನಿರ್ಮಿಸಲಾಗಿದೆ. ರಕ್ತನಿಧಿ ಕೇಂದ್ರವೂ ಇದೆ.
ಯೋಜನೆಗೆ ಅನುಮೋದನೆ
2 ದಶಕಗಳ ಬೇಡಿಕೆಗೆ ಸಿಎಂ ಯಡಿಯೂರಪ್ಪ, ಆರೋಗ್ಯಸಚಿವ ಡಾ| ಸುಧಾಕರ್ ಹಾಗೂ ಹಿಂದಿನ ಆರೋಗ್ಯ ಸಚಿವ ಬಿ. ರಾಮುಲು ಅವರು ಸ್ಪಂದಿಸಿದ್ದಾರೆ. ಜಿಲ್ಲಾ ಸ್ಪತ್ರೆಯನ್ನು 250 ಬೆಡ್ಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವ ಯೋಜನೆಗೆ ಇಂದು ಸಚಿವ ಸಂಪುಟದಲ್ಲಿ ಅನುಮೋದನೆ ಸಿಗುವ ಸಾಧ್ಯತೆ ಇವೆ.
-ರಘುಪತಿ ಭಟ್, ಶಾಸಕರು, ಉಡುಪಿ