6 ತಿಂಗಳಿಗೆ Cancer, 2 ವರ್ಷಕ್ಕೆ ಎರಡೂ ಕಣ್ಣು ನಷ್ಟ: Cancer ಗೆದ್ದ ಧೀರೆಯ ದಿಟ್ಟ ಸಾಧನೆ
Team Udayavani, Apr 23, 2023, 7:20 AM IST
ಕುಂದಾಪುರ: “ನಾನಿನ್ನೂ ಬದುಕಿ ಬಹಳ ಸಾಧಿಸಲಿಕ್ಕಿದೆ, ಈಗ ನಿನ್ನ ಜತೆಗೆ ಬರುವುದಿಲ್ಲ’ ಎಂದು ಜವರಾಯನನ್ನು ಬರಿಗೈಯಲ್ಲಿ ಕಳುಹಿಸಿಕೊಟ್ಟ ಬಾಲಕಿ ದ್ವಿತೀಯ ಪಿಯು ಪರೀಕ್ಷೆಯಲ್ಲಿ 539 (ಶೇ. 89.83) ಅಂಕ ಗಳಿಸಿದ್ದಾಳೆ. ರೆಟಿನೊ ಬ್ಲಾಸ್ಟೊಮಾ ಎಂಬ ಕ್ಯಾನ್ಸರ್ನಿಂದ ಎರಡೂ ಕಣ್ಣು ಕಳೆದುಕೊಂಡಿರುವ ಈ ಅಪೂರ್ವ ಸಾಧಕಿ ಸಿದ್ದಾಪುರದ ಕೀರ್ತನಾ ಭಂಡಾರಿ.
ಕೆರಾಡಿಯ ವರಸಿದ್ಧಿ ವಿನಾಯಕ ಪ.ಪೂ. ಕಾಲೇಜಿನ ವಿದ್ಯಾರ್ಥಿನಿ, ಸಿದ್ದಾಪುರದ ಮಹಾಬಲ ಭಂಡಾರಿ – ಜಯಶ್ರೀ ದಂಪತಿಯ ಹಿರಿಯ ಪುತ್ರಿ ಕೀರ್ತನಾ ಅವರದು ಎಂಥವರಿಗೂ ಪ್ರೇರಣೆಯಾಗಬಲ್ಲ ಯಶೋಗಾಥೆ.
28 ಬಾರಿ ಆಸ್ಪತ್ರೆಗೆ ದಾಖಲು
ಕೀರ್ತನಾ 10 ತಿಂಗಳ ಶಿಶುವಾಗಿದ್ದಾಗ ಕಣ್ಣಿನ ಕ್ಯಾನ್ಸರ್ ಅಂಟಿಕೊಂಡಿತು. ಆಗ ಒಂದು ಕಣ್ಣು ನಷ್ಟವಾಯಿತು. ಕೆಲವೇ ವರ್ಷಗಳಲ್ಲಿ ಕ್ಯಾನ್ಸರ್ ಇನ್ನೊಂದು ಕಣ್ಣಿಗೂ ಹಬ್ಬಿ ತೆಂಗಿನ
ಕಾಯಿಯಷ್ಟು ದೊಡ್ಡ ಗೆಡ್ಡೆಯಾಯಿತು. ಅದನ್ನೂ ತೆಗೆಯಬೇಕಾಗಿ ಬಂತು. ಈ ನಡುವೆ ಮಣಿಪಾಲ ಸಹಿತ ಬೇರೆ ಬೇರೆ ಕಡೆ 20 ಬಾರಿ ಆಸ್ಪತ್ರೆ ವಾಸ. ಆಕೆ ಬದುಕುತ್ತಾಳೆ ಅನ್ನುವ
ಭರವಸೆ ನಮಗೂ ಇರಲಿಲ್ಲ, ವೈದ್ಯರೂ ಅದನ್ನೇ ಹೇಳಿದ್ದರು ಎನ್ನುತ್ತಾರೆ ಕೀರ್ತನಾಳ ಹೆತ್ತವರು. ಆದರೆ ಬದುಕಿದಳು. 6 ವರ್ಷ ವಯಸ್ಸಿನೊಳಗೆ ಮತ್ತೆ 8 ಬಾರಿ ಆಸ್ಪತ್ರೆಗೆ ದಾಖಲಾಗಿ ಕೊನೆಗೂ ಕ್ಯಾನ್ಸರ್ನಿಂದ ಸಂಪೂರ್ಣ ಗುಣಮುಖಳಾದಳು.
ಆಗ ಕೀರ್ತನಾಗೆ ಎಲ್ಲರಂತೆ ತಾನೂ
ಶಾಲೆಗೆ ಹೋಗಬೇಕು ಎಂಬ ಹಂಬಲ. ಮಂಗಳೂರಿನಲ್ಲಿ ಆರೆಸ್ಸೆಸ್ ಅಧೀನದ ವಿಶೇಷ ಶಾಲೆಗೆ ಸೇರಿಸಿದೆವು. ಅಲ್ಲಿಯೇ 10ನೇ ತರಗತಿ ವರೆಗೆ ಶಿಕ್ಷಣ ಪಡೆದು ಎಸೆಸೆಲ್ಸಿಯಲ್ಲಿ ಶೇ. 70 ಕ್ಕಿಂತಲೂ ಅಧಿಕ ಅಂಕ ಪಡೆದಿದ್ದಳು ಎನ್ನುತ್ತಾರೆ ತಂದೆ, ಸಿದ್ದಾಪುರದಲ್ಲಿ 30 ವರ್ಷಗಳಿಂದ ಸೆಲೂನ್ ನಡೆಸುತ್ತಿರುವ ಮಹಾಬಲ ಭಂಡಾರಿ.
ಕೀರ್ತನಾ ಸ್ಮಾರ್ಟ್ ಫೋನನ್ನು ಸ್ವತಃ ಬಳಕೆ ಮಾಡಬಲ್ಲಳು. ಅಂಧರ ಆ್ಯಪ್ ಮೂಲಕ ಅನೇಕ ವಿಷಯಗಳನ್ನು ತಿಳಿದುಕೊಳ್ಳುತ್ತಾಳೆ.
ಶೇ. 75 ಅಂಕದ ನಿರೀಕ್ಷೆಯಿತ್ತು. ಇಷ್ಟು ಸಿಗುತ್ತದೆ ಎಂದು ಗೊತ್ತಿರಲಿಲ್ಲ. ತುಂಬಾ ಖುಷಿಯಾಗಿದೆ. ಹೆತ್ತವರು, ಮನೆಯವರು, ಎಲ್ಲ ಉಪನ್ಯಾಸಕರು, ಸ್ನೇಹಿತರು ಎಲ್ಲರ ಸಹಕಾರವನ್ನೂ ಸ್ಮರಿಸುತ್ತೇನೆ. ಮುಂದೆ ಬಿಎ ಓದಿ ಸರಕಾರಿ ಅಧಿಕಾರಿಯಾಗಿ, ಉತ್ತಮ ಸೇವೆ ಮಾಡಬೇಕು ಎನ್ನುವ ಆಸೆಯಿದೆ.
– ಕೀರ್ತನಾ ಭಂಡಾರಿ, ವಿದ್ಯಾರ್ಥಿನಿ
ನಾವು ನಿಮಗೆ ಮೂವರು ಹೆಣ್ಮಕ್ಕಳು, ನಿಮಗೆ ಕಷ್ಟ ಆಗದ ಹಾಗೆ ನಾವೇ ಓದಿ, ಏನಾದರೂ ಮಾಡಬೇಕು ಅನ್ನುತ್ತಿರುತ್ತಾಳೆ. ಹೇಳಿದ್ದನ್ನು ಮಾಡಿ ತೋರಿಸಿದ್ದಾಳೆ. ಅವಳನ್ನು ಮನೆ ಮಗಳಂತೆ ನೋಡಿಕೊಂಡ ಕೆರಾಡಿ ಕಾಲೇಜಿನ ಉಪನ್ಯಾಸಕರು, ವೈದ್ಯರು, ಸಂಘ-ಸಂಸ್ಥೆಗಳೆಲ್ಲರಿಗೂ ನಾವು ಋಣಿ.
– ಮಹಾಬಲ ಭಂಡಾರಿ ಸಿದ್ದಾಪುರ, ಕೀರ್ತನಾ ತಂದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…