ಯಡ್ತರೆ: ಅನ್ನಭಾಗ್ಯದ ಅಕ್ಕಿ ಅಕ್ರಮ ಸಾಗಾಟ; 16 ಟನ್ ಅಕ್ಕಿ ವಶ
ಕುಂದಾಪುರ ಪೊಲೀಸರ ತಂಡದಿಂದ ಕಾರ್ಯಾಚರಣೆ
Team Udayavani, Jun 24, 2022, 5:29 PM IST
ಬೈಂದೂರು: ಅನ್ನಭಾಗ್ಯದ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಲಾರಿಯನ್ನು ಕುಂದಾಪುರ ಉಪವಿಭಾಗ ಪೊಲೀಸ್ ಉಪಾಧೀಕ್ಷಕ ಶ್ರೀಕಾಂತ.ಕೆ ನೇತ್ರತ್ವದ ತಂಡ ಬೈಂದೂರು ಸಮೀಪದ ಯಡ್ತರೆ ಬಳಿ ವಶಕ್ಕೆ ಪಡೆದಿದೆ.
ಡಿವೈಎಸ್ಪಿ ಶ್ರೀಕಾಂತ. ಕೆ ಅವರು ಗಸ್ತಿನಲ್ಲಿದ್ದಾಗ ಶಿರೂರು ಕಡೆಯಿಂದ ಲಾರಿಯಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಸಾಗಾಟ ಮಾಡುತ್ತಿರುವ ಮಾಹಿತಿ ಮೇರೆಗೆ ಯಡ್ತರೆ ಹೊಸ ಬಸ್ ನಿಲ್ದಾಣದ ಬಳಿ ಕಾರ್ಯಾಚರಣೆ ನಡೆಸಿ ಲಾರಿ ಹಾಗೂ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.
ಲಾರಿಯಲ್ಲಿ 50 ಕೆ.ಜಿ ತೂಕದ 320 ಅಕ್ಕಿ ಚೀಲಗಳಲ್ಲಿ ಒಟ್ಟು 16 ಟನ್ ಅಕ್ಕಿ ಪತ್ತೆಯಾಗಿದೆ.ಚಾಲಕನ ಸೀಟಿನ ಬದಿಯಲ್ಲಿ 3 ಗೋಣಿ ಚೀಲಗಳು ಹಾಗೂ ಚೀಲ ಹೊಲಿಯುವ ಯಂತ್ರವನ್ನು ವಶಪಡಿಸಿಕೊಳ್ಳಲಾಗಿದೆ.
ಬೈಂದೂರು ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ನಿರೀಕ್ಷಿತ ಮುಂಗಾರು ಆರಂಭವಾಗಿಲ್ಲವಾದರೂ ವಿದ್ಯುತ್ ಗೆ ತೊಂದರೆ ಇಲ್ಲ: ಸಚಿವ ಸುನೀಲ್
ಕಿರಿಮಂಜೇಶ್ವರ ಬಳಿ 4.420 ಕ್ವಿಂಟಲ್ ಅಕ್ಕಿ ವಶ
ಕಿರಿಮಂಜೇಶ್ವರ ಬಳಿ ಅನ್ನಭಾಗ್ಯ ಅಕ್ಕಿ ಆಕ್ರಮ ಸಾಗಾಟ ಮಾಡುತ್ತಿದ ಖಚಿತ ಮಾಹಿತಿ ಮೇರೆಗೆ ಕಿರಿಮಂಜೇಶ್ವರ ಕಾರಂತ ಹೋಟೆಲ್ ಬಳಿ ಬೈಂದೂರು ತಹಶೀಲ್ದಾರ ಶೋಭಾಲಕ್ಷ್ಮಿ ನಿರ್ದೇಶನದಂತೆ ಆಹಾರ ನಿರೀಕ್ಷಕ ವಿನಯ ಕುಮಾರ್ ಹಾಗೂ ಕಿರಿಮಂಜೇಶ್ವರ ಗ್ರಾಮಲೆಕ್ಕಿಗ ಗಣೇಶ ಬುಧವಾರ ದಾಳಿ ನಡೆಸಿದ್ದಾರೆ.
ಈ ಸಂದರ್ಭ ಅಕ್ಕಿ ಮಾರಾಟಮಾಡುತ್ತಿರುವವರು ಪರಾರಿಯಾಗಿದ್ದಾರೆ.ಟಾಟಾ ಎಸ್ ಗೂಡ್ಸ್ ವಾಹನ ಹಾಗೂ ಅದರಲ್ಲಿದ್ದ 4.20 ಕ್ವಿಂಟಲ್ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ. ಬೈಂದೂರು ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.