Kota ಸಾಲ ವಸೂಲಿಗೆ ಬಂದ ಬ್ಯಾಂಕಿನವರಿಗೆ ಕಲ್ಲೇಟು; ಪ್ರಕರಣ ದಾಖಲು
Team Udayavani, Dec 9, 2023, 12:07 AM IST
ಕೋಟ: ಸಾಲ ವಸೂಲಿಯ ನೋಟಿಸು ನೀಡಲು ಬಂದ ಬ್ಯಾಂಕ್ನ ಸಿಬಂದಿಗೆ ಸಾಲಗಾರ ಕಲ್ಲೇಟು ನೀಡಿ ಹಲ್ಲೆ ನಡೆಸಿದ ಘಟನೆ ಕೋಟ ಸಮೀಪದ ಬೇಳೂರಿನಲ್ಲಿ ಡಿ. 7ರಂದು ಸಂಭವಿಸಿದ್ದು, ಹಲ್ಲೆಯಿಂದ ಗಾಯಕ್ಕೊಳಗಾದ ಸಿಬಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಬೇಳೂರು ನಿವಾಸಿ ಆನಂದ ಶೆಟ್ಟಿ ಪ್ರಕರಣದ ಆರೋಪಿಯಾಗಿದ್ದು, ಕೋಟ ಸಹಕಾರಿ ವ್ಯಾವಸಾಯಿಕ ಸಂಘದಲ್ಲಿ ಮಾರಾಟ ವಿಭಾಗದ ಸಿಬಂದಿ ಸುರೇಶ (47) ಹಲ್ಲೆಗೊಳಗಾದವರು.
ಸಾಲಕ್ಕೆ ಸಂಬಂಧಿಸಿದ ನೋಟಿಸ್ ಜಾರಿ ಮಾಡಲು ಬೇಳೂರು ನಿವಾಸಿ ಆನಂದ ಶೆಟ್ಟಿ ಅವರ ಮನೆಗೆ ಸುರೇಶ ಅವರು ತೆರಳಿದ್ದರು. ನಿಮಗೆ ನೊಟೀಸು ಇದೆ ಅದನ್ನು ತೆಗೆದುಕೊಳ್ಳಿ ಎಂದು ಹೇಳಿದಾಗ ಆರೋಪಿ ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿದ್ದಲ್ಲದೆ ಚೀಲದಲ್ಲಿ ಸಂಗ್ರಹಿಸಿಟ್ಟುಕೊಂಡಿದ್ದ ಶಿಲೆ ಕಲ್ಲಿನಿಂದ ಹಲ್ಲೆ ನಡೆಸಿದ್ದು, ಇದರಿಂದ ಬಲಗೈಯ ಮೊಣಗಂಟಿಗೆ ಗಾಯವಾಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.