ಉಪ್ಪಿನಕುದ್ರು: ಗೋವಿನ ರುಂಡ ಪತ್ತೆ; ಆರೋಪಿಗಳ ಪತ್ತೆಗೆ ಆಗ್ರಹ
Team Udayavani, Nov 14, 2022, 6:15 AM IST
ಕುಂದಾಪುರ: ಗಂಗೊಳ್ಳಿ ಗ್ರಾಮದ ಉಪ್ಪಿನಕುದ್ರು ಕಳವಿನಬಾಗಿಲು ಶ್ರೀ ರಾಮನಾಥ ಸುಹಾಸಿನಿ ಕುಲ ದೇವಸ್ಥಾನದ ಎದುರು ಪಂಚಗಂಗಾವಳಿ ನದಿತೀರದಲ್ಲಿ ಗೋವಿನ ತಲೆ ಪತ್ತೆಯಾಗಿದೆ.
ಅಕ್ರಮವಾಗಿ ಗೋವಧೆ ಮಾಡಿ ರುಂಡವನ್ನು ನದಿಗೆ ಎಸೆದಿರುವ ಸಾಧ್ಯತೆ ಇದೆ. ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಭೇಟಿ ನೀಡಿ ಆರೋಪಿಗಳನ್ನು ಪತ್ತೆ ಹಚ್ಚಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಗಂಗೊಳ್ಳಿ ಪೊಲೀಸರು ಗೋವಿನ ತಲೆಯನ್ನು ಠಾಣೆಗೆ ತೆಗೆದುಕೊಂಡು ಹೋಗಿ, ಪರಿಸ್ಥಿತಿ ಕೈಮೀರದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡರು. ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ ಹಾಗೂ ಶಾಂತಿ ಸುವ್ಯವಸ್ಥೆಯನ್ನು ಹಾಳು ಮಾಡುವ ಉದ್ದೇಶದಿಂದ ಗೋವನ್ನು ಕದ್ದು, ಹತ್ಯೆ ಮಾಡಿ ಅದರ ತಲೆಯನ್ನು ನದಿಯ ನೀರಿಗೆ ಎಸೆದು ವಿಕೃತಿ ಮೆರೆಯಲಾಗಿದ್ದು, ಈ ದುಷ್ಕೃತ್ಯ ನಡೆಸಿದ ಆರೋಪಿಗಳನ್ನು ಪತ್ತೆ ಹಚ್ಚಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ನವೀನ್ ಗಂಗೊಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದೆ. ಪ್ರಕರಣವನ್ನು ಹಿಂಜಾವೇ ಖಂಡಿಸಿದೆ.