Kundapur:ಕಲ್ಲಾಗರ ಕೆರೆಯಲ್ಲಿ ನೂರಾರು ಮೀನುಗಳ ಸಾವು
Team Udayavani, May 27, 2023, 4:16 PM IST
ಕುಂದಾಪುರ: ಇಲ್ಲಿನ ಪುರಸಭೆ ವ್ಯಾಪ್ತಿಯ ಕಲ್ಲಾಗರ ವಾರ್ಡ್ನ ಕಲ್ಲಾಗರ ಕೆರೆಯಲ್ಲಿ ನೂರಾರು ಮೀನುಗಳು ಶುಕ್ರವಾರ ಸತ್ತು ಬಿದ್ದಿದ್ದವು.
ಏಕಾಏಕಿ ಮೀನುಗಳ ಸಾವಿನಿಂದ ಕಂಗಾಲಾದ ಜನತೆ ಪುರಸಭೆಗೆ ಮಾಹಿತಿ ನೀಡಿದ್ದರು. ಅವುಗಳ ತೆರವು ಕಾರ್ಯಾಚರಣೆ ದೋಣಿ ತಂದು ಇಳಿಸಿ ಪೌರಕಾರ್ಮಿಕರ ಮೂಲಕ ನಡೆಸಲಾಯಿತು. ಒಮ್ಮಿಂದೊಮ್ಮೆಲೆ ಮೀನುಗಳ ಸಾವಿಗೆ ಬೇರೆ ಬೇರೆ ಕಾರಣಗಳನ್ನು ಪಟ್ಟಿ ಮಾಡಲಾಗುತ್ತಿದೆ.
ನೀರು ಕಡಿಮೆಯಾದಾಗ ಆಮ್ಲಜನಕ ಪ್ರಮಾಣದಲ್ಲಿ ಇಳಿಕೆಯಾಗುವುದು, ವಿಷ ಪ್ರಾಶನ ಆಗುವುದು, ಪಾಚಿ ಅಧಿಕ ಪ್ರಮಾಣದಲ್ಲಿ ಬೆಳೆಯುವುದು ಮೊದಲಾದ ಕಾರಣಗಳಿಂದ ಮೀನುಗಳು ಸಾವನ್ನಪ್ಪುವ ಸಾಧ್ಯತೆಯಿದೆ ಎಂದು ಪುರಸಭೆ ಪರಿಸರ ಎಂಜಿನಿಯರ್ ಗುರುಪ್ರಸಾದ ಶೆಟ್ಟಿ ಹೇಳಿದ್ದಾರೆ. ನಿಖರ ಕಾರಣ ಪತ್ತೆ ಮಾಡಲು ಶನಿವಾರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಆಗಮಿಸಿ ಪರೀಕ್ಷೆ ನಡೆಸಲಿದ್ದಾರೆ. ವರದಿ ಬರಲು ಕೆಲವು ದಿನಗಳೇ ಬೇಕಾಗಬಹುದು. ಈ ಭಾಗದಲ್ಲಿ ಈ ಪ್ರಮಾಣದಲ್ಲಿ ಮೀನುಗಳ ಸಾವು ಸಂಭವಿಸಿದ್ದು ಸದ್ಯದ ವರ್ಷಗಳಲ್ಲಿ ಇಲ್ಲ ಎನ್ನುತ್ತಾರೆ ಸ್ಥಳೀಯರು.