Kundapura: ವಾರದಿಂದ ಕುಡಿಯಲು ಉಪ್ಪುನೀರು
Team Udayavani, Jun 7, 2023, 2:35 PM IST
ಕುಂದಾಪುರ: ಇಲ್ಲಿನ ಪುರಸಭಾ ವ್ಯಾಪ್ತಿಯಲ್ಲಿ ಹಾಗೂ ಅದೇ ಪೈಪ್ಲೈನ್ ಮೂಲಕ ಸರಬರಾಜಾಗುತ್ತಿರುವ ಸುತ್ತಲಿನ 7 ಪಂಚಾಯತ್ಗಳಲ್ಲಿ ಕಳೆದ 1 ವಾರದಿಂದ ಕುಡಿಯಲು ಉಪ್ಪುನೀರು ಸರಬರಾಜಾಗುತ್ತಿದೆ.
ನಿರಂತರ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ ಪುರಸಭಾ ವ್ಯಾಪ್ತಿಯಲ್ಲಿ 8 ದಿನಗಳಿಂದ ಕಲುಷಿತ ನೀರು ಸರಬರಾಜು ಆಗುತ್ತಿದೆ. ನೀರಿನ ಶುದ್ಧೀಕರಣ ಘಟಕದಲ್ಲಿ ನೀರಿನ ಗುಣಮಟ್ಟ ಪರೀಕ್ಷೆ ಮಾಡದೇ ಬೇಜವಾಬ್ದಾರಿಯಿಂದ ಸರಬರಾಜು ಮಾಡಿದ ಕಾರಣ ಈ ದುರಂತ ಸಂಭವಿಸಿದೆ. ಗುಲ್ವಾಡಿಯಲ್ಲಿ ಪೂರ್ವ ಮಾಹಿತಿಯಿಲ್ಲದೇ ಅಣೆಕಟ್ಟಿನ ಗೇಟು ತೆರೆದ ಕಾರಣ ಜಪ್ತಿಯಲ್ಲಿರುವ ವಾರಾಹಿ ಕುಡಿಯುವ ನೀರಿಗೆ ಮಿಶ್ರವಾಗಿದೆ. ಇದರಿಂದ ಸಮಸ್ಯೆಯಾಗಿದೆ. ಮಳೆ ಬಂದು ಹೊಸದಾಗಿ ನೀರು ಹರಿದು ನದಿಯ ನೀರಿಗೆ ಸೇರಿದ ಬಳಿಕವೇ ಈ ಸಮಸ್ಯೆ ನಿವಾರಣೆಯಾಗ ಬೇಕಿದೆ. ಅಲ್ಲಿವರೆಗೂ ಇದನ್ನು ತಾಳಿಕೊಳ್ಳಬೇಕಾದ ಅನಿವಾರ್ಯ ಇಲ್ಲಿನ ಜನರದ್ದು. ನದಿಯಲ್ಲಿ ಸಂಗ್ರಹವಾದ ನೀರಿಗೆ ಉಪ್ಪುನೀರು ಸೇರ್ಪಡೆಯಾದ ಕಾರಣ ಬೇರ್ಪಡಿಸಲು ಅನ್ಯಮಾರ್ಗವೇ ಇಲ್ಲದಾಗಿದೆ. 4 ದಿನ ಇಂತಹ ನೀರು ಸರಬರಾಜು ಆದರೂ ಗುತ್ತಿಗೆದಾರ ಸಂಸ್ಥೆಗೂ, ಪುರಸಭೆಗೂ ಮಾಹಿತಿಯೇ ಇರಲಿಲ್ಲ. ಜನರೂ ಏನೋ ಸಣ್ಣ ಸಮಸ್ಯೆ ಆಗಿರಬಹುದು ಎಂದು ಸುಮ್ಮನಿದ್ದರು. ಏಕಾಏಕಿ ದೂರುಗಳ ಸರಮಾಲೆ ಕಂಡು ಬಂದಾಗಲೇ ಏಜೆನ್ಸಿ ಎಚ್ಚೆತ್ತುಕೊಂಡದ್ದು. ಈಗ ವಾರ ಕಳೆಯಿತು. ಇನ್ನು ಮಳೆ ಸರಿಯಾಗಿ ಬರುವವರೆಗೆ ಕಾಯಬೇಕು.
ದೂರು
ಗುತ್ತಿಗೆದಾರರಾದ ಲಕ್ಷ್ಮಿ ಸಿವಿಲ್ ಎಂಜಿನಿಯರಿಂಗ್ ಸಂಸ್ಥೆಯವರು ಕುಂದಾಪುರದ ಜನರಿಗೆ ಕಲುಷಿತ ನೀರು ಸೇವಿಸಲು ಕಾರರಾಗಿದ್ದಾರೆ. ಈ ಸಂಸ್ಥೆಯವರು ಹಾಗೂ ಒಪ್ಪಂದದ ಪ್ರಕಾರ ಶುದ್ಧ ನೀರಿನ ಘಟಕದಲ್ಲಿ ಯಾವುದೇ ಪ್ರಯೋಗಾಲಯ, ತಾಂತ್ರಿಕ ಸಿಬಂದಿ ನಿಯೋಜನೆ ಮಾಡದೇ ನಿರ್ಲಕ್ಷ್ಯ ಮಾಡಿದ್ದಾರೆ. ಇವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸದಸ್ಯರು ದೂರು ನೀಡಿದ್ದಾರೆ.
ಸಾರ್ವಜನಿಕರ ಆರೋಗ್ಯ ವಿಷಯದಲ್ಲಿ ಬೇಜವಾಬ್ದಾರಿ ತೋರಿರುವುದರಿಂದ ಇವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸ ಬೇಕು. ಸಂಸ್ಥೆಗೆ ನೀಡಿದ ಗುತ್ತಿಗೆಯನ್ನು ರದ್ದು ಪಡಿಸಿ ಪುರಸಭೆಯಿಂದ ನೀರು ಸರಬರಾಜು ನಿರ್ವಹಣೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ಸಂತೋಷ್ ಕುಮಾರ್ ಶೆಟ್ಟಿ ಒತ್ತಾಯಿಸಿದ್ದಾರೆ.
ಉಲ್ಲಂಘನೆ
ಜಲಸಿರಿ ಯೋಜನೆ ಅಡಿಯಲ್ಲಿ ಕೈಗೊಂಡಿರುವ 24×7 ನಿರಂತರ ನೀರು ಸರಬರಾಜು ಯೋಜನೆಯಲ್ಲಿ ಗುತ್ತಿಗೆದಾರ ಸಂಸ್ಥೆಗೆ ಕೆಯುಐಡಿಎಫ್ಸಿ ವತಿಯಿಂದ ಕಾರ್ಯಾಚರಣೆ ಮತ್ತು ನಿರ್ವಹಣೆಗೆ 2022 ಜೂನ್ನಲ್ಲಿ ಆದೇಶ ನೀಡಲಾಗಿತ್ತು, ಪುರಸಭೆಯ ಸದಸ್ಯರ ಸರ್ವಾನುಮತ ಇರಲಿಲ್ಲ. ಕೆಯುಐಡಿಎಫ್ ನೀಡಿದ ಆದೇಶದಲ್ಲಿ ಗುತ್ತಿಗೆದಾರರಿಂದ ಕಾಮಗಾರಿ ಕೆಲಸಗಳು ಇನ್ನೂ ಬಾಕಿ ಇರುವುದು ಕಂಡುಬಂದಿದೆ. ಕಳೆದ ವರ್ಷ ಸೆ.12ರ ಪುರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಬಾಕಿ ಇರುವ ಕೆಲಸಗಳನ್ನು 15 ದಿನಗಳ ಒಳಗಡೆ ಪೂರ್ಣಗೊಳಿಸಿ ಕಾರ್ಯಾಚರಣೆ ಮತ್ತು ನಿರ್ವಹಣೆ ಪ್ರಾರಂಭಿಸಲು ಸೂಚನೆ ನೀಡಲಾಗಿತ್ತು . ಮನೆ ಮನೆ ಸಂಪರ್ಕ ನೀಡುವ ಕೆಲವಸೇ ಇನ್ನೂ ಪೂರ್ಣವಾಗಿಲ್ಲ. 6,450 ನಳ್ಳಿಗಳಿಗೆ ಸಂಪರ್ಕ ನೀಡಲು ಕರಾರು ಒಪ್ಪಂದದಲ್ಲಿ ಇದ್ದು ಕರಾರು ಪತ್ರದಲ್ಲಿ ನಿಗದಿ ಪಡಿಸಿದ ಸಮಯದೊಳಗೆ 6,450 ನಳ್ಳಿ ಸಂಪರ್ಕ ಕಲ್ಪಿಸದೇ ಹೋದಲ್ಲಿ ಆದೇಶ ರದ್ದು ಪಡಿಸಿ ಗುತ್ತಿಗೆದಾರರು ಕಾರ್ಯಾಚರಣೆ ಮತ್ತು ನಿರ್ವಹಣೆ 8 ವರ್ಷ ಅವಧಿಯನ್ನು ರದ್ದುಪಡಿಸಬೇಕೆಂದು ಸರ್ವಾನುಮತದಿಂದ ತೀರ್ಮಾನಿಸಲಾಗಿತ್ತು.ಗುತ್ತಿಗೆದಾರರು ಆದೇಶವನ್ನು ಉಲ್ಲಂಘಿಸಿ ಬಾಕಿ ಇರುವ ಕಾಮಗಾರಿ ಇಲ್ಲಿಯವರೆಗೆ ಪೂರ್ಣಗೊಳಿಸಿಲ್ಲ ಎಂದು ಸದಸ್ಯರು ದೂರಿದ್ದಾರೆ.
ದೂರು ಬರುತ್ತಿದೆ
ಲಕ್ಷ್ಮಿ ಎಂಜಿನಿಯರಿಂಗ್ ಸಂಸ್ಥೆಯವರಿಗೆ ಕ್ರಮಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಆದರೆ ಇನ್ನೂ ಸಾರ್ವಜನಿಕರಿಂದ ದೂರು ಬರುತ್ತಿದೆ. ಸರಿಪಡಿಸಲಾಗಿದೆ ಎಂದು ಮಾಹಿತಿ ನೀಡಿದ್ದರೂ ನದಿಯಲ್ಲಿ ಮೊದಲೇ ಹರಿದುಬಂದ ಉಳಿದುಕೊಂಡ ನೀರಿನಿಂದ ತೊಂದರೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.
-ಮಂಜುನಾಥ ಆರ್. ಮುಖ್ಯಾಧಿಕಾರಿ
ಪುರಸಭೆ ಕುಂದಾಪುರ
ಆರೋಗ್ಯಕ್ಕೆ ಅಂಜಿಕೆ ಇಲ್ಲ
ಗುಲ್ವಾಡಿ ಅಣೆಕಟ್ಟು ಗೇಟು ತೆರೆಯುವಾಗ ಮಾಹಿತಿ ನೀಡದ ಕಾರಣ ಸಮಸ್ಯೆಯಾಗಿದೆ. ಉಪ್ಪುನೀರು ಬೇರ್ಪಡಿಸುವ ಆಧುನಿಕ ಯಂತ್ರಗಳು ನಮ್ಮಲ್ಲಿಲ್ಲ. ಟಿಡಿಎಸ್ ಪರೀಕ್ಷೆ ಪ್ರತಿದಿನ ಮಾಡಲಾಗುತ್ತಿದೆ. ಜನರ ಆರೋಗ್ಯಕ್ಕೆ ಸಮಸ್ಯೆ ಆಗುವುದಿಲ್ಲ. ಮಳೆ ಬಂದಾಗ ಹೊಸ ನೀರು ಹರಿದು ಸರಿಯಾಗುತ್ತದೆ. ನದಿಯಲ್ಲಿ ನಿಂತ ನೀರು ಸರಿಯಾಗುವವರೆಗೆ ಸಮಸ್ಯೆ ಇರಲಿದೆ. ಅಲ್ಲಿವರೆಗೆ ಸಾರ್ವಜನಿಕರು ಸುಧಾರಿಸಿಕೊಳ್ಳಬೇಕಿದೆ.
-ಗುರುಪಾದಪ್ಪ, ಮೇಲ್ವಿಚಾರಕ
ಲಕ್ಷ್ಮಿ ಸಿವಿಲ್ ಎಂಜನಿಯರಿಂಗ್ ಸಂಸ್ಥೆೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ
Udupi; ಮಸ್ಟರಿಂಗ್ ಕೇಂದ್ರದಲ್ಲಿ ಸಕಲ ತಯಾರಿ
ಅಭಿವೃದ್ಧಿ ಎಂದರೆ ಏನೆಂದು ತೋರಿಸಲು ಈ ಬಾರಿ ಅವಕಾಶ ಕೊಡಿ: ಜೆ.ಪಿ. ಹೆಗ್ಡೆ
ಉಡುಪಿ-ಚಿಕ್ಕಮಗಳೂರು; ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿಯ ಸ್ಪಷ್ಟತೆಯಿದೆ: ಜೆ.ಪಿ.
ಉಡುಪಿ- ಚಿಕ್ಕಮಗಳೂರು: ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳು ಇವೆ: ಕೋಟ
MUST WATCH
ಹೊಸ ಸೇರ್ಪಡೆ
Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ