ಹೇನ್ಬೇರು ಕಾರು ಸುಟ್ಟ ಪ್ರಕರಣ: ಕೊಲೆ ಬಳಿಕ ಆತ್ಮಹತ್ಯೆಗೆ ಚಿಂತಿಸಿದ್ದ ಆರೋಪಿ ಸದಾನಂದ?
Team Udayavani, Jul 16, 2022, 6:20 AM IST
ಕುಂದಾಪುರ/ಬೈಂದೂರು: ಒತ್ತಿನೆಣೆ ಸಮೀಪದ ಹೇನ್ಬೇರು ನಿರ್ಜನ ಪ್ರದೇಶದಲ್ಲಿ ಅಮಾಯಕ ವ್ಯಕ್ತಿಯೊಬ್ಬರನ್ನು ಜೀವಂತ ಸುಟ್ಟು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೊಂದೇ ಸ್ಫೋಟಕ ಸಂಗತಿಗಳು ಬೆಳಕಿಗೆ ಬರುತ್ತಿವೆ. ಕೊಲೆ ನಡೆದ ಬಳಿಕ ಪಶ್ಚಾತ್ತಾಪದಿಂದ ಪ್ರಮುಖ ಆರೋಪಿ ಸದಾನಂದ ಆತ್ಮಹತ್ಯೆಗೆ ಚಿಂತನೆ ನಡೆಸಿದ್ದ ಎನ್ನುವ ಮಾಹಿತಿ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಘಟನೆ ನಡೆದ ಬಳಿಕ ಆರೋಪಿಗಳಾದ ಸದಾನಂದ ಹಾಗೂ ಶಿಲ್ಪಾ ತಲೆಮರೆಸಿಕೊಳ್ಳಲೆಂದು ಬೆಂಗಳೂರಿಗೆ ತೆರಳುವ ಬಸ್ ಹತ್ತಿದ್ದು, ಆದರೆ ಮತ್ತೆ ನಿರ್ಧಾರ ಬದಲಿಸಿದ ಸದಾನಂದ, ಶಿಲ್ಪಾಳನ್ನು ಮನೆಗೆ ಬಿಟ್ಟು, ತಾನು ಪಶ್ಚಾತ್ತಾಪದಿಂದ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಕೈಗೊಂಡಿದ್ದನಂತೆ. ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ಟೈಲರಿಂಗ್ ವೃತ್ತಿ ನಡೆಸುತ್ತಿದ್ದ ಸತೀಶ್ ದೇವಾಡಿಗನ ಅಂಗಡಿಯಲ್ಲಿ ಕುಳಿತು ಈ ಕೊಲೆಗೆ ಯೋಜನೆ ರೂಪಿಸಿದ್ದಾರೆ ಎನ್ನುವ ಮಾಹಿತಿಯೂ ಬೆಳಕಿಗೆ ಬಂದಿದೆ.
ಮೊದಲೇ ಆತ್ಮಹತ್ಯೆಗೆ ನಿರ್ಧರಿಸಿದ್ದ ಸದಾನಂದ ಶೇರೆಗಾರ್!
ಪ್ರಕರಣದ ಪ್ರಮುಖ ಆರೋಪಿ ಸದಾನಂದ ಶೇರೆಗಾರ್ ಖಾಸಗಿ ಸರ್ವೆಯರ್ ಆಗಿದ್ದು, ಜಾಗ ಹಾಗೂ ಹಣದ ವಿಚಾರಕ್ಕೆ ಸಂಬಂಧಿಸಿ ಪ್ರಕರಣವೊಂದರ ಆರೋಪಿಯಾಗಿದ್ದು, ಬಂಧನ ಭೀತಿ ಎದುರಿಸುತ್ತಿದ್ದ. ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದೆ, ಗೆಳತಿ ಶಿಲ್ಪಾ, ಸಂಬಂಧಿಗಳಾದ ಸತೀಶ್ ದೇವಾಡಿಗ ಹಾಗೂ ನಿತಿನ್ ದೇವಾಡಿಗರಲ್ಲಿ ಹೇಳಿಕೊಂಡಿದ್ದು, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದ. ಈ ವೇಳೆ ಆತನಿಗೆ ಧೈರ್ಯ ತುಂಬಿದ ಅವರು,
ಮಲಯಾಳ ಸಿನೆಮಾ “ಕುರುಪ್’ ದುಪ್ರೇರಣೆ ಪಡೆದು, ಅದರಂತೆ ಕೊಲೆಗೈಯುವ ಯೋಜನೆ ರೂಪಿಸಿದ್ದರು. ಅದರಲ್ಲಿ ಬೇರೊಬ್ಬ ವ್ಯಕ್ತಿಯನ್ನು ಕಾರಿನಲ್ಲಿ ಸುಟ್ಟು ಹಾಕಿ, ತಾನು ಸತ್ತಿರುವಂತೆ ಬಿಂಬಿಸುವುದಾಗಿತ್ತು. ಅದರಂತೆ ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದ ಆನಂದ ದೇವಾಡಿಗರನ್ನು ಕೊಲೆ ಮಾಡಿ, ಅದು ಸದಾನಂದನೇ ಸತ್ತಿರುವುದಾಗಿ ಬಿಂಬಿಸಲು ನಿರ್ಧರಿಸಿದ್ದರು.
ಮತ್ತಿಬ್ಬರಿಗೆ ಕಸ್ಟಡಿ;
ಇಂದು ಸ್ಥಳ ಮಹಜರು
ಪ್ರಕರಣಕ್ಕೆ ಸಂಬಂಧಿಸಿ ಸಾಕ್ಷ್ಯ ನಾಶಕ್ಕೆ ಸಹಕರಿಸಿದ ಆರೋಪಿಗಳಾದ ಕಾರ್ಕಳ ಪಚ್ಚನಾಡಿ ಸೂಡ ನಿವಾಸಿ ಸತೀಶ್ ದೇವಾಡಿಗ (50) ಹಾಗೂ ನಿತಿನ್ ದೇವಾಡಿಗ (40) ನನ್ನು ಶುಕ್ರವಾರ ಮಧ್ಯಾಹ್ನ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಗುರುವಾರ ಬಂಧಿತರಾದ ಪ್ರಮುಖ ಆರೋಪಿಗಳಾದ ಕಾರ್ಕಳದ ಮಾಳ ಪೇರಡ್ಕ ನಿವಾಸಿ ಸದಾನಂದ ಶೇರಿಗಾರ್ (52) ಹಾಗೂ ಹಿರ್ಗಾನ ಶಿವನಗರದ ಶಿಲ್ಪಾ ಸಾಲ್ಯಾನ್ (30) ಳನ್ನು ಗುರುವಾರವೇ ನ್ಯಾಯಾಲಯಕ್ಕೆ ಹಾಜುರಪಡಿಸಿದ್ದು, 5 ದಿನಗಳವರೆಗೆ ಕಸ್ಟಡಿ ವಿಧಿಸಲಾಗಿದೆ. ಶನಿವಾರ ಸ್ಥಳ ಮಹಜರು ನಡೆಸುವ ಸಾಧ್ಯತೆ ಇದ್ದು, ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.
ಒಬ್ಬರೇ ಇರುತ್ತಿದ್ದರು
ಕೊಲೆಗೀಡಾದ ಆನಂದ ದೇವಾಡಿಗ (60) ಅವರು ಕಾರ್ಕಳದ ಅತ್ತೂರು ಚರ್ಚ್ ರಸ್ತೆಯ ಕಾಬೆಟ್ಟು ನಿವಾಸಿಯಾಗಿದ್ದು, ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದರು. ಅವರ ಪತ್ನಿಯು ಪುತ್ರಿಯೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಪುತ್ರನೂ ಇದ್ದು, ಅವರೂ ಸಹ ಬೇರೆ ಊರಿನಲ್ಲಿ ಕೆಲಸದಲ್ಲಿದ್ದಾರೆ. ಮನೆಯಲ್ಲಿ ಆನಂದ ಅವರೊಬ್ಬರೇ ನೆಲೆಸಿದ್ದು, ಆಗಾಗ್ಗೆ ಕೆಲವು ದಿನಗಳ ಮಟ್ಟಿಗೆ ಪತ್ನಿ, ಮಕ್ಕಳು ಬಂದು ಹೋಗುತ್ತಿದ್ದರು. ಆನಂದ ಅವರು ಅಕ್ಕ-ಪಕ್ಕದ ನಿವಾಸಿಗಳೊಂದಿಗೆ ಅನ್ಯೋನ್ಯವಾಗಿದ್ದರು.
ಐಜಿಪಿ ಬೈಂದೂರು ಭೇಟಿ; ಪೊಲೀಸ್ ತಂಡಕ್ಕೆ 50 ಸಾವಿರ ರೂ. ಬಹುಮಾನ
ಈ ಪ್ರಕರಣವನ್ನು 24 ಗಂಟೆಯೊಳಗೆ ಭೇದಿಸಿದ ಬೈಂದೂರು ಪೊಲೀಸರ ತಂಡಕ್ಕೆ ಶ್ಲಾಘನೆ ವ್ಯಕ್ತಪಡಿಸಿದ ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ ಅವರು ಶುಕ್ರವಾರ ಬೈಂದೂರು ಪೊಲೀಸ್ ಠಾಣೆಗೆ ಭೇಟಿ ನೀಡಿ, ಇಲಾಖೆ ವತಿಯಿಂದ 50 ಸಾವಿರ ರೂ. ನಗದು ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್ ಪತ್ರಕರ್ತರೊಂದಿಗೆ ಮಾತನಾಡಿ, ಸತತ ಮೂರು ಪ್ರಕರಣ ಭೇದಿಸಿ ಅಪರಾಧಿಗಳನ್ನು ಬಂಧಿಸಿ, ಕಾನೂನು ಕ್ರಮ ಕೈಗೊಂಡಿರುವುದು ಇಲ್ಲಿನ ಪೊಲೀಸ್ ತಂಡದ ಯಶಸ್ಸಾಗಿದೆ. 2 ದಿನದ ಹಿಂದೆ ಹೇನ್ಬೇರು ಬಳಿ ಕಾರಿನಲ್ಲಿ ವ್ಯಕ್ತಿಯೊಬ್ಬನನ್ನು ಸುಟ್ಟು ಪರಾರಿಯಾದ ಪ್ರಕರಣ ಭೇದಿಸಿ ಅಪರಾಧಿಗಳನ್ನು ಬಂಧಿಸಿದ ಬೈಂದೂರು ಪೊಲೀಸ್ ತಂಡಕ್ಕೆ ಪಶ್ಚಿಮ ವಲಯ ಪೊಲೀಸ್ ಮಹಾನಿರ್ದೇಶಕ ದೇವಜ್ಯೋತಿ ರೇ ಅವರ ನಿರ್ದೇಶನದಲ್ಲಿ ಬಹುಮಾನ ಘೋಷಿಸಲಾಗಿದೆ ಎಂದರು. ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ., ಬೈಂದೂರು ವೃತ್ತ ನಿರೀಕ್ಷಕ ಸಂತೋಷ ಕಾಯ್ಕಿಣಿ, ಠಾಣಾಧಿಕಾರಿ ಪವನ್ ನಾಯಕ್, ಗಂಗೊಳ್ಳಿ ಠಾಣಾಧಿಕಾರಿ ವಿನಯ್ ಕೊರ್ಲಹಳ್ಳಿ ಹಾಗೂ ಸಿಬಂದಿ ಉಪಸ್ಥಿತರಿದ್ದರು.
ನಾಪತ್ತೆ ದೂರು ನೀಡಲು ಸಹೋದರನಿಗೆ ಸೂಚಿಸಿದ್ದ ಆರೋಪಿ ಸದಾನಂದ
ಸದಾನಂದ ಶೇರಿಗಾರ್ ಹಾಗೂ ಶಿಲ್ಪಾ ಜತೆಗೆ ಕಾರ್ಕಳದ ಆನಂದ ದೇವಾಡಿಗ (60) ಅವರಿಗೆ ಮದ್ಯ ಕುಡಿಸಿ, ನಿದ್ದೆ ಮಾತ್ರೆಯನ್ನು ಉಪಾಯವಾಗಿ ಕೊಟ್ಟು ಪ್ರಜ್ಞೆ ತಪ್ಪಿಸಿ, ಕಾರ್ಕಳದಿಂದ ಕಾರಿನಲ್ಲಿ ಕರೆದುಕೊಂಡು ಬಂದು ಬೈಂದೂರು ಸಮೀಪದ ಹೇನ್ಬೇರು ನಿರ್ಜನ ಪ್ರದೇಶದಲ್ಲಿ ಜೀವಂತವಾಗಿ ಕಾರು ಸಹಿತ ಸುಟ್ಟಿದ್ದರು. ಇವರಿಗೆ ಪರಾರಿಯಾಗಲು ಸತೀಶ್ ದೇವಾಡಿಗ ಹಾಗೂ ನಿತಿನ್ ದೇವಾಡಿಗ ಸಹಕರಿಸಿದ್ದರು. ಕೃತ್ಯ ನಡೆದ ಬಳಿಕ ಸದಾನಂದ ತನ್ನ ಸಹೋದರನಿಗೆ ಕರೆ ಮಾಡಿ, ತಾನು ನಾಪತ್ತೆಯಾಗಿರುವುದಾಗಿ ಪೊಲೀಸರಿಗೆ ದೂರು ನೀಡಲು ತಿಳಿಸಿದ್ದಾನೆ. ಆದರೆ ಸಹೋದರ ದೂರು ನೀಡಿರಲಿಲ್ಲ.
ಮೊದಲೇ ಜಾಗ ನಿಗದಿ
ಕೊಲೆಗೂ ಮುನ್ನ ಆರೋಪಿಗಳು ವ್ಯವಸ್ಥಿತ ಯೋಜನೆ ರೂಪಿಸಿದ್ದು, ಕೃತ್ಯ ನಡೆಯುವ 3 ದಿನದ ಮೊದಲೇ ಬೈಂದೂರು ಸಮೀಪದ ನಿರ್ಜನ ಪ್ರದೇಶ ಹೇನ್ಬೇರುವಿಗೆ ಬಂದಿದ್ದರು. ಅಲ್ಲಿಯೇ ಕೃತ್ಯ ನಡೆಸಲು ನಿರ್ಧರಿಸಿ ಮರಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು
Neha Case: ನೇಹಾ ಅಮಾನುಷ ಹತ್ಯೆಗೆ ಜೆ.ಪಿ.ಹೆಗ್ಡೆ ಖಂಡನೆ
Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ
Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ
Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ
MUST WATCH
ಹೊಸ ಸೇರ್ಪಡೆ
Dharwad; ಚುನಾವಣೆ ಕರ್ತವ್ಯದಲ್ಲಿದ್ದ ಸೆಕ್ಟರ್ ಅಧಿಕಾರಿ ಹೃದಯಾಘಾತದಿಂದ ಸಾವು
PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು
Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ