ವಾರಾಹಿ ನೀರಿನಿಂದ ನಳನಳಿಸುತ್ತಿದೆ ಶಿರಿಯಾರ ಜೀವಸೆಲೆ ಮದಗ
ಜನವರಿ-ಫೆಬ್ರವರಿ ತನಕ ನೀರಿರುತ್ತಿದ್ದ ಮದಗ ನವೆಂಬರ್ ಮಧ್ಯದಲ್ಲೇ ಬರಿದಾಗುತಿತ್ತು.
Team Udayavani, Jan 31, 2023, 3:30 PM IST
ಕೋಟ: ಶಿರಿಯಾರ ಗ್ರಾಮದ ಜೀವ ಸೆಲೆ ಎಂದು ಕರೆಸಿಕೊಳ್ಳುವ ಎತ್ತಿನಟ್ಟಿ ಮದಗ ನವೆಂಬರ್ನಲ್ಲೇ ಬತ್ತಿ ಹೋದ ಕುರಿತು ಹಾಗೂ ಇಲ್ಲಿನ ತಡೆಗೋಡೆ ವಾಲ್ನಲ್ಲಿನ ದೋಷದ ಬಗ್ಗೆ, ಮದಗದಲ್ಲಿ ನೀರಿಲ್ಲದೆ ಸ್ಥಳೀಯ ಕೃಷಿಕರಿಗಾಗುತ್ತಿರುವ ಸಮಸ್ಯೆಯ ಕುರಿತು ಉದಯವಾಣಿ ಸುದಿನ ನವೆಂಬರ್ನಲ್ಲಿ ವಿಸ್ಕೃತ ವರದಿ ಪ್ರಕಟಿಸಿತ್ತು.
ಇದೀಗ ತಡೆಗೋಡೆ ವಾಲ್ ದುರಸ್ತಿಗೊಳಿಸಿದ್ದು, ವಾರಾಹಿ ನೀರಿನಿಂದ ಶಿರಿಯಾರ ಮದಗ ನಳನಳಿಸುತ್ತಿದೆ ಹಾಗೂ ಕೃಷಿಭೂಮಿಗೆ ನೀರು ಹರಿದು ಸ್ಥಳೀಯ ಕೃಷಿಕರ ಮೊಗದಲ್ಲಿ ನಗು ಉಕ್ಕಿದೆ. ಸಾೖಬ್ರಕಟ್ಟೆಯಿಂದ- ಬಿದ್ಕಲ್ಕಟ್ಟೆ ಸಾಗುವ ಮಾರ್ಗದಲ್ಲಿ ಜಿಲ್ಲಾ ಮುಖ್ಯ ರಸ್ತೆಗೆ ತಾಗಿ ಸುಮಾರು ನಾಲ್ಕೈದು ಎಕ್ರೆ ವಿಸ್ತೀರ್ಣದಲ್ಲಿ ಈ ಮದಗ ಇದೆ. ಇಲ್ಲಿ ನೀರು ತುಂಬಿರುವ ತನಕ ಸುತ್ತಲಿನ ಬಾವಿಗಳಲ್ಲಿ ಹಾಗೂ ಹಳ್ಳಗಳಲ್ಲಿ ಉತ್ತಮ ಅಂತರ್ಜಲವಿರುತ್ತದೆ.
ಇದನ್ನೇ ನಂಬಿಕೊಂಡು ನೂರಾರು ಎಕ್ರೆ ಕೃಷಿ, ತೋಟಗಾರಿಕೆ ಚಟುವಟಿಕೆ ನಡೆಯುತ್ತದೆ. ಗ್ರಾ.ಪಂ. ಬಾವಿಯ ನೀರಿನ ಮಟ್ಟ ಕಾಪಾಡಿಕೊಳ್ಳಲು ಮದಗ ಸಹಕಾರಿಯಾಗಿರುತ್ತದೆ. 2019-20ರಲ್ಲಿ ನೆರೆ ಪರಿಹಾರ ನಿಧಿಯಿಂದ ಸುಮಾರು 45 ಲಕ್ಷ ರೂ. ಅನುದಾನದಲ್ಲಿ ಕಲ್ಲಿನ ತಡೆಗೋಡೆ ನಿರ್ಮಿಸಿ, ಹೂಳೆತ್ತಿ, ಹೊಸ ಗೇಟ್ ಅಳವಡಿಸಲಾಗಿತ್ತು.ಆದರೆ ಕಾಮಗಾರಿಯ ಅನಂತರ ಸಮಸ್ಯೆ ಕಾಣಿಸಿಕೊಂಡಿದ್ದು ವ್ಯಾಪಕ ಪ್ರಮಾಣದಲ್ಲಿ ನೀರು ಪೋಲಾಗುತಿತ್ತು.
ಪ್ರತೀ ವರ್ಷ ಜನವರಿ-ಫೆಬ್ರವರಿ ತನಕ ನೀರಿರುತ್ತಿದ್ದ ಮದಗ ನವೆಂಬರ್ ಮಧ್ಯದಲ್ಲೇ ಬರಿದಾಗುತಿತ್ತು. ವಾರಾಹಿ ಕಾಲುವೆಯ ನೀರು ಹರಿಸಿದರೂ ಶೀಘ್ರದಲ್ಲೇ ಬರಿದಾಗುತ್ತಿತ್ತು. ಈ ಬಗ್ಗೆ ಉದಯವಾಣಿ ವರದಿ ಮೂಲಕ ಗಮನಸೆಳೆದಿತ್ತು. ಇದೀಗ ಸಮಸ್ಯೆ ಬಗೆಹರಿದಿದ್ದು, ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ.