Paddy ಕೆಂಪಕ್ಕಿ ಬೆಲೆ ಭಾರೀ ಹೆಚ್ಚಳ; ಭತ್ತ ಯಥಾಸ್ಥಿತಿ!
Team Udayavani, Oct 27, 2023, 11:56 PM IST
ಕೋಟ: ಒಂದು ವರ್ಷದಲ್ಲಿ ಕುಚ್ಚಲಕ್ಕಿ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಆದರೆ ಭತ್ತದ ಖರೀದಿ ಬೆಲೆ ಮಾತ್ರ ಕೊಂಚವೂ ಏರಿಕೆಯಾಗಿಲ್ಲ. ಇದರಿಂದ ರೈತರಿಗೆ ಅನ್ಯಾಯವಾಗಲಿದ್ದು, ಭತತದ ಧಾರಣೆಯೂ ಹೆಚ್ಚಬೇಕೆಂಬ ಒತ್ತಾಯ ರೈತ ವಲಯದ್ದು.
ಕುಚ್ಚಲಕ್ಕಿಗೆ ಕೆ.ಜಿ.ಗೆ 15ರಿಂದ 20 ರೂ. ಹೆಚ್ಚಳವಾಗಿ 48 ರಿಂದ 50 ರೂ. ನಲ್ಲಿ ಮಾರಾಟವಾಗುತ್ತಿದೆ. ಆದರೆ ಭತ್ತದ ಬೆಲೆ ಕೆ.ಜಿ.ಗೆ 2-3 ರೂ. ಮಾತ್ರ ಏರಿಕೆಯಾಗಿದೆ. ಖಾಸಗಿ ಮಿಲ್ಗಳಲ್ಲಿ ಸ್ಥಳೀಯ ಭತ್ತಕ್ಕೆ ಕ್ವಿಂಟಾಲ್ಗೆ 2,500-2,600 ರೂ. ಇದೆ. ಕಟಾವು ಚುರುಕುಗೊಂಡ ತತ್ಕ್ಷಣ ಇಳಿಮುಖವಾಗುವ ಭೀತಿಯೂ ಇದೆ.
ಕರಾವಳಿ ಸೇರಿದಂತೆ ಮಲೆನಾಡು, ಬಯಲುಸೀಮೆ ಭಾಗದಲ್ಲೂ ಕಾರ್ಮಿಕರ ಕೊರತೆ, ಬೆಲೆಯ ಅಸ್ಥಿರತೆ ಇತ್ಯಾದಿ ಕಾರಣಕ್ಕೆ ಭತ್ತದ ಬೇಸಾಯ ಕುಸಿದಿದೆ. ಈ ಹಿನ್ನೆಲೆಯಲ್ಲಿ ಕುಚ್ಚಲಕ್ಕಿ ಬೆಲೆ ಏರಿಕೆಯಾಗಿದೆ. ಆದರೆ ಮಧ್ಯವರ್ತಿಗಳು
ಭತ್ತದ ಬೆಳೆಯನ್ನು ಏರದಂತೆ ತಡೆಯುತ್ತಿದ್ದಾರೆ ಎಂಬ ಆಪಾದನೆ ರೈತ ವಲಯದ್ದು.
ಸರಕಾರ ಮಧ್ಯ ಪ್ರವೇಶಿಸಲಿ
ಭತ್ತ ಹಾಗೂ ಅಕ್ಕಿ ನಡುವಿನ ಬೆಲೆ ವ್ಯತ್ಯಾಸವನ್ನು ಸರಿಪಡಿಸಿ ರೈತರಿಗೆ ನ್ಯಾಯ ಒದಗಿಸಲು ಸರಕಾರ ಮಧ್ಯಪ್ರವೇಶಿಸಿ ಕೂಡಲೇ ಭತ್ತಕ್ಕೆ ಹೆಚ್ಚಿನ ಬೆಂಬಲ ಬೆಲೆ ನಿಗದಿಪಡಿಸಬೇಕು. ಅದಕ್ಕಿಂತ ಕಡಿಮೆ ಬೆಲೆಯಲ್ಲಿ ಭತ್ತ ಖರೀದಿಸದಂತೆ ಖಾಸಗಿಯವರಿಗೆ ಕಡಿವಾಣ ಹಾಕುವ ವ್ಯವಸ್ಥೆ ಜಾರಿಯಾಗಬೇಕು ಎಂಬುದು ರೈತರ ಆಗ್ರಹ.
ಕರಾವಳಿಯ ಭತ್ತಕ್ಕೆ ಸಿಗುತ್ತಿರುವ ಬೆಲೆ ತೀರಾ ಕಡಿಮೆ. ಮಾರುಕಟ್ಟೆಯನ್ನು ಖಾಸಗಿ ವ್ಯವಸ್ಥೆ ನಿಯಂತ್ರಿಸುತ್ತಿರುವುದು ಮತ್ತು ಹೊರ ಜಿಲ್ಲೆಗಳಿಂದ ಕಡಿಮೆ ಬೆಲೆಗೆ ಭತ್ತ ಪೂರೈಕೆಯಾಗುತ್ತಿರುವುದೇ ಇದಕ್ಕೆ ಕಾರಣ. ಕಳೆದ ವರ್ಷ ರಾಜ್ಯ ಸರಕಾರ ಕುಚ್ಚಲಕ್ಕಿಗೆ 500 ರೂ. ಹೆಚ್ಚುವರಿ ಬೆಂಬಲ ಬೆಲೆ ನಿಗದಿಪಡಿಸಿತ್ತು. ಈ ಬಾರಿಯೂ ಅದೇ ಮಾದರಿಯನ್ನು ಅನುಸರಿಸುವಂತೆ ಸರಕಾರದ ಗಮನ ಸೆಳೆಯಲಾಗುವುದು.
– ಕಿರಣ್ ಕುಮಾರ್ ಕೊಡ್ಗಿ, ಶಾಸಕರು, ಕುಂದಾಪುರ ಕ್ಷೇತ್ರ
-ರಾಜೇಶ್ ಗಾಣಿಗ ಅಚ್ಲಾಡಿ