ಯಳಬೇರು: ಸಾಲು- ಸಾಲು ಸಮಸ್ಯೆಗಳದ್ದೇ ಊರು
ರಸ್ತೆ, ನೆಟ್ವರ್ಕ್, ಸಾರಿಗೆ ಸಂಪರ್ಕ ವ್ಯವಸ್ಥೆಯಿಲ್ಲ ; ವಿದ್ಯಾರ್ಥಿಗಳು, ಗ್ರಾಮಸ್ಥರಿಂದ ನಿತ್ಯ ಆರೇಳು ಕಿ.ಮೀ. ನಡಿಗೆ
Team Udayavani, Oct 30, 2022, 3:37 PM IST
ಕಮಲಶಿಲೆ: ಆಜ್ರಿ ಗ್ರಾ.ಪಂ.ವ್ಯಾಪ್ತಿಯ ಕಮಲಶಿಲೆ ಗ್ರಾಮದ ಯಳಬೇರು ಎಂಬ ಊರು ರಸ್ತೆ, ನೆಟ್ವರ್ಕ್, ಸಾರಿಗೆ ವ್ಯವಸ್ಥೆ ಇಲ್ಲದಿರುವುದು ಹೀಗೆ ಸಾಲು – ಸಾಲು ಸಮಸ್ಯೆಗಳನ್ನೇ ತನ್ನ ಮೈಮೇಲೆ ಹೊದ್ದು ಮಲಗಿದಂತಿದೆ. ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಡಗರದಲ್ಲಿದ್ದರೂ, ಇಲ್ಲಿನ ಜನರ ಮೂಲ ಸಮಸ್ಯೆಗಳೇ ಇನ್ನೂ ಬಗೆಹರಿಯದಿರುವುದು ಮಾತ್ರ ದುರಂತವೇ ಸರಿ.
75-80 ಮನೆಗಳು, 2,000 ಜನಸಂಖ್ಯೆಯನ್ನು ಹೊಂದಿರುವ ಪಶ್ಚಿಮ ಘಟ್ಟದ ತಪ್ಪಲಿನ ಊರು ಕಮಲಶಿಲೆ ಗ್ರಾಮದ ಯಳಬೇರು.
ನಿತ್ಯವೂ ಸಂಕಷ್ಟ
ಗ್ರಾಮಸ್ಥರು ಪೂರ್ಣಪ್ರಮಾಣದ ರಸ್ತೆಯಿಲ್ಲದೆ, ಜಲ್ಲಿಕಲ್ಲು ಹೊಂಡಮಯ ರಸ್ತೆಯಿಂದ ನಿತ್ಯವೂ ಸಂಕಟ ಪಡುವಂತಾಗಿದೆ. ಯಳಬೇರಿನಿಂದ ಕಮಲಶಿಲೆ – ಹಳ್ಳಿಹೊಳೆ ಮುಖ್ಯ ರಸ್ತೆಗೆ ಬರಬೇಕಾದರೆ 10 ಕಿ.ಮೀ. ದೂರವಿದೆ. ಈ ಪೈಕಿ ಬೈಂದೂರು ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಅವರ ಪ್ರಯತ್ನದಿಂದಾಗಿ 4 ಕಿ.ಮೀ. ರಸ್ತೆಯು ಪಿಎಂಜೈವೈ ಯೋಜನೆಯಡಿ 4 ಕೋ.ರೂ. ವೆಚ್ಚದಲ್ಲಿ ಅಭಿವೃದ್ಧಿಯಾಗಿದೆ. ಆದರೆ ಅಲ್ಲಿಂದ ಮುಂದಕ್ಕೆ ರಸ್ತೆಯುದ್ದಕ್ಕೂ ಕಲ್ಲುಮಯವಾಗಿದೆ. ನಡೆದುಕೊಂಡು ಹೋಗುವುದು ಸಹ ತ್ರಾಸದಾಯಕವಾಗಿದೆ. ಈ ರಸ್ತೆಗೆ ಡಾಮರು ಕಾಮಗಾರಿಯಾಗಿ 15 ವರ್ಷಗಳೇ ಕಳೆದಿದೆ.
ಬೆಳಗ್ಗೆ 6.30ಕ್ಕೆ ಹೊರಟರೆ ರಾತ್ರಿ 7 ವಾಪಾಸು…
ಯಳಬೇರು ಪ್ರದೇಶದ ಹೆಣ್ಣು ಮಕ್ಕಳ ಸಹಿತ ಒಟ್ಟು 40 ಮಂದಿ ಮಕ್ಕಳು ಸಿದ್ದಾಪುರ, ಕುಂದಾಪುರ, ಶಂಕರನಾರಾಯಣ, ಕೋಟೇಶ್ವರ ಸಹಿತ ಬೇರೆ ಕಡೆಗಳಿಗೆ ಶಾಲಾ- ಕಾಲೇಜುಗಳಿಗೆ ವ್ಯಾಸಂಗಕ್ಕೆಂದು ಬರುತ್ತಿದ್ದಾರೆ. ಇವರೆಲ್ಲ ಬಸ್ನ ವ್ಯವಸ್ಥೆಯಿಲ್ಲದ ಕಾರಣ, ಮನೆಯಿಂದ ಬೆಳಗ್ಗೆ 6.30ಕ್ಕೆ ಹೊರಟರೆ, ಮನೆ ಸೇರುವುದು ಸಂಜೆ 7 ಗಂಟೆಯ ನಂತರವೇ. ಮಕ್ಕಳು ಓದುವುದು ಎಷ್ಟೊತ್ತಿಗೂ? ದುರ್ಗಮವಾದ ಕಾಡ ಹಾದಿಯಲ್ಲಿ ಮಕ್ಕಳು ನಡೆದುಕೊಂಡು ಬಂದು ಮನೆ ಸೇರುವುದೇ ಸವಾಲಿನ ಸಂಗತಿ. ಮಕ್ಕಳು ಮನೆಗೆ ಬಂದು ತಲುಪುವವರೆಗೆ ಹೆತ್ತವರಿಗೆ ಆತಂಕ ತಪ್ಪಿದ್ದಲ್ಲ. ಮಳೆಗಾಲದಲ್ಲಂತೂ ಇದು ಇನ್ನೂ ಭೀಕರ. ಬೆಳಗ್ಗೆ ಹಾಗೂ ಸಂಜೆ ವೇಳೆಗೆ ಇಲ್ಲಿಗೆ ಬಸ್ಸಿನ ವ್ಯವಸ್ಥೆ ಕಲ್ಪಿಸಬೇಕು ಎನ್ನುವುದು ಬಹಳ ವರ್ಷಗಳ ಬೇಡಿಕೆಯಾಗಿದೆ.
ಮೊದಲು ಹಳ್ಳಿಹೊಳೆ ಗ್ರಾ.ಪಂ.ನಲ್ಲಿದ್ದ ಕಮಲಶಿಲೆಯನ್ನು ಈಗ ಅಲ್ಲಿಂದ ಪ್ರತ್ಯೇಕಗೊಳಿಸಿ, ಆಜ್ರಿಯೊಂದಿಗೆ ಸೇರಿಸಲಾಗಿದೆ. ಆದರೆ ಈಗಲೂ ಯಳಬೇರು, ಸುತ್ತಮುತ್ತಲಿನ ಭಾಗದ ಜನರು ಮಾತ್ರ ವಿಎ ಕಚೇರಿ, ಪ್ರಾಥಮಿಕ ಆಸ್ಪತ್ರೆಗೆ ಹಳ್ಳಿಹೊಳೆಯನ್ನೇ ಆಶ್ರಯಿಸಿದ್ದಾರೆ. ಆದರೆ ಇಲ್ಲಿಗೆ ತೆರಳಬೇಕಾದರೆ 7-8 ಕಿ.ಮೀ. ದೂರ ಕ್ರಮಿಸಬೇಕಿದೆ. ಬಸ್ನ ವ್ಯವಸ್ಥೆಯಿಲ್ಲ.
ಒಂದು ಕರೆಗೂ ಕಷ್ಟ…
ಈ ಯಳಬೇರು ಪ್ರದೇಶದ ಜನರು ಕರೆ ಮಾಡಬೇಕಾದರೆ ಮನೆಯಿಂದ ಕನಿಷ್ಠ 1-2 ಕಿ.ಮೀ. ದೂರ ಬರಬೇಕಿದೆ. ತುರ್ತಾಗಿ ಯಾರಿಗಾದರೂ ಅನಾರೋಗ್ಯ ಉಂಟಾಗಿ ವಾಹನ ಕರೆಸುವುದು, ಗರ್ಭಿಣಿಯರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವುದು, ಬೇರೆ ಏನಾದರೂ ಸಮಸ್ಯೆಯಾದರೂ ಕರೆ ಮಾಡಲು ಒಂದೆರಡು ಕಿ.ಮೀ. ದೂರ ಬರಬೇಕಾದ ಸ್ಥಿತಿಯಿದೆ.
ಪ್ರಧಾನಿ, ಸಿಎಂಗೂ ದೂರು
ಯಳಬೇರಿನ ಜನರು ಅನುಭವಿಸು ತ್ತಿರುವ ಮೂಲಭೂತ ಸಮಸ್ಯೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಸಿಎಂ ಬಸವರಾಜ ಬೊಮ್ಮಾಯಿ, ಸಚಿವರು, ಸಂಸದರು, ಶಾಸಕರು, ಜಿಲ್ಲಾಧಿಕಾರಿ ಸಹಿತ ಸಂಬಂಧಪಟ್ಟ ಎಲ್ಲ ಅಧಿಕಾರಿಗಳಿಗೂ ಹಲವು ಬಾರಿ ಮನವಿ ಪತ್ರ, ಪೋಸ್ಟ್ ಕಾರ್ಡ್ ಮೂಲಕ ಬೇಡಿಕೆಯನ್ನು ಸಲ್ಲಿಸಲಾಗಿದೆ. ಆದರೆ ಯಾರಿಂದಲೂ ಸೂಕ್ತವಾದ ಸ್ಪಂದನೆ ಮಾತ್ರ ವ್ಯಕ್ತವಾಗಿಲ್ಲ.
ಯಾವುದೇ ಪ್ರಯೋಜನವಿಲ್ಲ: ರಸ್ತೆ ಸರಿಯಿಲ್ಲ, ನೆಟ್ವರ್ಕ್ ಇಲ್ಲ, ಬಸ್ನ ವ್ಯವಸ್ಥೆಯಿಲ್ಲದೆ ಇಲ್ಲಿನ ಜನರು, ವಿದ್ಯಾರ್ಥಿಗಳು ತುಂಬಾ ಸಮಸ್ಯೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಪ್ರಧಾನಿ, ಸಿಎಂ, ಸಂಸದ, ಶಾಸಕರು, ಅಧಿಕಾರಿಗಳೆಲ್ಲರಿಗೂ ಮನವಿ ಮಾಡಿದ್ದೇವೆ. ಯಾವುದೇ ಪ್ರಯೋಜವಾಗಿಲ್ಲ. ಅನೇಕ ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನೇ ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ. ಇನ್ನಾದರೂ ಸಮಸ್ಯೆಗೆ ಪರಿಹಾರ ಸಿಗುವ ನಿರೀಕ್ಷೆ ನಮ್ಮದು. – ಆದರ್ಶ ಶೆಟ್ಟಿ, ಯಳಬೇರು ನಿವಾಸಿ
ನೆಟ್ವರ್ಕ್ಗೆ ಪ್ರಸ್ತಾವನೆ: ಯಳಬೇರಿಗೆ 4 ಕೋ.ರೂ.ವೆಚ್ಚದಲ್ಲಿ 4 ಕಿ.ಮೀ. ರಸ್ತೆ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿ ಉಳಿದ ಭಾಗಕ್ಕೂ ವಿಸ್ತರಿಸಲಾಗುವುದು. ನೆಟ್ವರ್ಕ್ ಬಗ್ಗೆ ಈಗಾಗಲೇ 5 ಕಡೆ ಟವರ್ ಮಂಜೂರಾಗಿದ್ದು, ಹೆಚ್ಚುವರಿಯಾಗಿ 16 ಕಡೆಗಳಿಗೂ ಮನವಿ ಕೊಡಲಾಗಿದ್ದು, ಅದರಲ್ಲಿ ಯಳಬೇರಿಗೆ ಪ್ರಯತ್ನಿಸಲಾಗುವುದು. ಬಸ್ ಬೇಡಿಕೆ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತರಲಾಗುವುದು. – ಬಿ.ಎಂ. ಸುಕುಮಾರ್ ಶೆಟ್ಟಿ, ಶಾಸಕರು
-ಪ್ರಶಾಂತ್ ಪಾದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundapur: ಕುಸಿದು ಬಿದ್ದು ಸಾವು
ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್ ಆಫ್ ಅಟಾರ್ನಿ, ದೂರು ದಾಖಲು
Delhi Police: ಮಾರುತಿ ಸ್ವಿಫ್ಟ್ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!
Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ
ಅಭಿವೃದ್ಧಿ ಎಂದರೆ ಏನೆಂದು ತೋರಿಸಲು ಈ ಬಾರಿ ಅವಕಾಶ ಕೊಡಿ: ಜೆ.ಪಿ. ಹೆಗ್ಡೆ
MUST WATCH
ಹೊಸ ಸೇರ್ಪಡೆ
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್