ಬೆಂಗಳೂರು: ನಗರದಲ್ಲಿ ಧಾರಾಕಾರ ಮಳೆ ; ಮರಗಳು ಧರೆಗೆ ; ವಿದ್ಯುತ್ ವ್ಯತ್ಯಯ
Team Udayavani, May 1, 2022, 8:39 PM IST
ಬೆಂಗಳೂರು: ನಗರದಲ್ಲಿ ಭಾನುವಾರ ಸುರಿದ ಧಾರಾಕಾರ ಮಳೆಯಿಂದಾಗಿ ಬಹುತೇಕ ಪ್ರದೇಶಗಳಲ್ಲಿ ಮರಗಳು ಉರುಳಿದ್ದು ವಿದ್ಯುತ್ ವ್ಯತ್ಯಯ ಉಂಟಾಗಿದೆ. ಈ ಸಂಬಂಧ ಬೆಸ್ಕಾಂ ಸಿಬ್ಬಂದಿ ಸಮರೋಪಾದಿಯಲ್ಲಿ ತುರ್ತು ದುರಸ್ತಿ ಕಾರ್ಯ ಕೈ ಗೊಂಡಿದ್ದು ವಿದ್ಯುತ್ ವ್ಯತ್ಯಯವನ್ನು ಸರಿಪಡಿಸಿದ್ದಾರೆ.
ಸಿಡಿಲು ಗುಡುಗು ಸಹಿತ ಮಳೆಯಾಗಿದ್ದು ಹಲವು ಬಡಾವಣೆಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದ್ದು ಬಹುತೇಕ ಎಲ್ಲಾ ಕಡೆ ವಿದ್ಯುತ್ ಮರುಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
ಚಂದಾಪುರ ವಿಭಾಗದಲ್ಲಿ 32 ಕಂಬಗಳು ಧರೆಗುರುಳಿದ್ದು ಸರಿಪಡಿಸುವ ಕಾರ್ಯ ನಡೆಯುತ್ತಿದೆ. ಕೆಂಗೇರಿ ವಿಭಾಗದಲ್ಲಿ ಟ್ರಾನ್ಸ್ ಫಾ ರ್ಮರ್ ಹಾನಿಗೊಂಡಿದ್ದು ರಿಪೇರಿ ಕೆಲಸ ಭರದಿಂದ ಸಾಗಿದೆ.
ಬಿ ಟಿ ಎಂ ಬಡಾವಣೆಯಲ್ಲಿ ಎರಡು ವಿದ್ಯುತ್ ಕಂಬಗಳು ಹಾನಿಯಾಗಿವೆ. ಕೆ ಆರ್. ಪುರಂ. ನಲ್ಲಿ 12 ಕಂಬಗಳು ನೆಲಕ್ಕುರುಳಿವೆ. ಖೇಲೋ ಇಂಡಿಯಾ ನಡೆಯುತ್ತಿರುವ ಸ್ಥಳದ ಸುತ್ತ ಮುತ್ತ ವಿದ್ಯುತ್ ವ್ಯತ್ಯಯವಾಗಿದ್ದು ಸೂಕ್ತ ಕ್ರಮ ಕೈಗೊಂಡಿದ್ದು ವಿದ್ಯುತ್ ಮರುಸ್ಥಾಪನೆ ಆಗಿದೆ.