ಪೊಲೀಸರೆಂದರೆ ದೂರುದಾರರು ಮಾರುದೂರ!
Team Udayavani, Jun 18, 2020, 5:53 AM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ಈ ಮೊದಲು ಪೊಲೀಸರು ಮತ್ತು ಠಾಣೆಗಳನ್ನು ಕಂಡರೆ ಆರೋಪಿಗಳು ದೂರ ಓಡುತ್ತಿದ್ದರು. ಆದರೆ, ಈಗ ಆ ಆರೋಪಿಗಳ ವಿರುದ್ಧ ದೂರು ನೀಡುವವರೇ ಪೊಲೀಸರಿಂದ ಮಾರುದೂರ ಜಿಗಿಯುತ್ತಿದ್ದಾರೆ! ಇದು ಕೋವಿಡ್ 19 ವೈರಸ್ ಚಮತ್ಕಾರ.
ಹೌದು, ಕೋವಿಡ್ 19 ವಾರಿಯರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿ ರುವ ಪೊಲೀಸರಿಗೇ ದಿನೇ ದಿನೇ ಮಹಾಮಾರಿ ಸೋಂಕು ತಗುಲುತ್ತಿದ್ದು, ಅಕ್ಷರಶಃ ಇಡೀ ಇಲಾಖೆ ಆತಂಕದಲ್ಲಿದೆ. ಅದರ ಬೆನ್ನಲ್ಲೇ ಸೋಂಕಿತ ಅಧಿಕಾರಿ-ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಠಾಣೆ, ಕಚೇರಿಗಳನ್ನು ತಾತ್ಕಾಲಿಕವಾಗಿ ಸೀಲ್ಡೌನ್ ಮಾಡಲಾಗುತ್ತಿದೆ. ಅದರ ಪರಿಣಾಮ ನೇರವಾಗಿ ಸಾರ್ವಜನಿಕರ ಮೇಲೆ ಆಗುತ್ತಿದೆ. ಪ್ರತಿ ಠಾಣೆಯಲ್ಲಿ ಪ್ರಸ್ತುತ ಕೇವಲ ಬೆರಳೆಣಿಕೆಯಷ್ಟು ಪ್ರಕರಣ ದಾಖಲಾಗುತ್ತಿದ್ದು, ಆದರೂ ಅವುಗಳ ಇತ್ಯರ್ಥ ಆಮೆಗತಿಯಲ್ಲಿದೆ.
ಇದಕ್ಕೆ ಕಾರಣ, ಒಂದೆಡೆ ಠಾಣೆಗಳ ಸೀಲ್ಡೌನ್, ಅಧಿಕಾರಿ-ಸಿಬ್ಬಂದಿ ಹತ್ತಾರು ದಿನಗಳ ಕ್ವಾರಂಟೈನ್, ಮತ್ತೂಂದೆಡೆ ಆರೋಪಿಗಳಿಂದಲೇ ಪೊಲೀಸರಿಗೆ ಸೋಂಕು ತಗುಲುತ್ತಿರುವುದರಿಂದ ಪ್ರಕರಣಗಳ ಇತ್ಯರ್ಥಕ್ಕೆ ಪೊಲೀಸರೂ ಹಿಂದೇಟು ಹಾಕುತ್ತಿದ್ದಾರೆ. ಆದರೂ ಕೊಲೆ, ದರೋಡೆ ಸೇರಿ ಗಂಭೀರ ಪ್ರಕರಣಗಳ ತನಿಖೆ ತ್ವರಿತಗತಿಯಲ್ಲಿ ನಡೆಯುತ್ತಿದೆ. ಇನ್ನು ಕಾನೂನು ಸುವ್ಯವಸ್ಥೆ ಮಾತ್ರವಲ್ಲ; ಸಂಚಾರ ನಿರ್ವಹಣೆಯನ್ನೂ ಸಮರ್ಥವಾಗಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎನ್ನುತ್ತವೆ ಪೊಲೀಸ್ ಮೂಲಗಳು.
13 ಠಾಣೆ ಸೀಲ್ಡೌನ್; 470 ಮಂದಿ ಕ್ವಾರಂಟೈನ್: ಕಳೆದ ಒಂದೂವರೆ ತಿಂಗಳಲ್ಲಿ 2ಸಂಚಾರ ಠಾಣೆಗಳು ಸೇರಿ 13 ಪೊಲೀಸ್ ಠಾಣೆಗಳನ್ನು ಸೀಲ್ಡೌನ್ ಮಾಡಲಾಗಿದೆ. ಜೀವನ್ ಭೀಮಾನಗರ, ಜೆ.ಜೆ.ನಗರ, ಹೆಣ್ಣೂರು, ಜಯನಗರ, ಚಾಮರಾಜಪೇಟೆ, ಕೇಂದ್ರ ಅಪರಾಧ ವಿಭಾಗ (ಸಿಸಿಬಿ), ಸೋಲದೇವನಹಳ್ಳಿ, ಕೆ. ಆರ್. ಮಾರುಕಟ್ಟೆ, ಬೈಯಪ್ಪನಹಳ್ಳಿ, ಪುಲಕೇಶಿನಗರ ಸಂಚಾರ, ಕೆ.ಆರ್.ಮಾರುಕಟ್ಟೆ ಸಂಚಾರ, ವಿ.ವಿ.ಪುರಂ ಸಂಚಾರ ಠಾಣೆ ಹಾಗೂ ಬೆಂಗಳೂರು ಗ್ರಾಮಾಂತರ ಹೆಬ್ಬಗೋಡಿ ಠಾಣೆಗಳನ್ನು 4-5 ದಿನ ಸೀಲ್ಡೌನ್ ಮಾಡಲಾಗಿತ್ತು.
(ಈ ಪೈಕಿ ಜೆ.ಜೆ.ನಗರ, ಹೆಬ್ಬಗೋಡಿ, ಜೆ.ಬಿ.ನಗರ, ಬೈಯಪ್ಪನ ಹಳ್ಳಿ ಸೀಲ್ಡೌನ್ ತೆರವು ಗೊಳಿಸಲಾಗಿ ದೆ). ಈ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿ ಸುತ್ತಿದ್ದ 18 ಮಂದಿಗೆ ಕೋವಿಡ್ 19 ದೃಢಪಟ್ಟಿದ್ದು, ಮೂವರು ಗುಣಮುಖರಾಗಿದ್ದಾರೆ. ಒಬ್ಬರು ಮೃತಪಟ್ಟಿದ್ದಾರೆ. ಇನ್ನುಳಿದವರಿಗೆ ಚಿಕಿತ್ಸೆ ಮುಂದುವರಿಸಲಾಗಿ ದೆ. ಈ ಹಿನ್ನೆಲೆಯಲ್ಲಿ 470 ಮಂದಿ ಅಧಿಕಾರಿ- ಸಿಬ್ಬಂದಿ ಕ್ವಾರಂಟೈನ್ನಲ್ಲಿದ್ದಾರೆ.
ಇತ್ಯರ್ಥವಾದ ಪ್ರಕರಣ: ಪ್ರತಿ ಠಾಣೆಯಲ್ಲಿ ಕಾನೂನು ಸುವ್ಯವಸ್ಥೆ, ಅಪರಾಧ ವಿಭಾಗ, ಕೋರ್ಟ್ ವಿಭಾಗ ಹೀಗೆ ಆರೇಳು ವಿಭಾಗಗಳಿದ್ದು, ಕನಿಷ್ಠ ಒಂದು ಠಾಣೆಯಲ್ಲಿ 70-80 ಮಂದಿ ಸಿಬ್ಬಂದಿ- ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಪೈಕಿ ಒಬ್ಬ ಸಿಬ್ಬಂದಿಗೆ ಸೋಂಕು ತಗುಲಿದರೆ, ಅವರ ಸಂಪರ್ಕದಲ್ಲಿದ್ದ ಕನಿಷ್ಠ 30-40 ಮಂದಿಯನ್ನು 14 ದಿನ ಕ್ವಾರಂಟೈನ್ ಮಾಡಲಾಗು ತ್ತದೆ. ಹೀಗಾಗಿ ಬೆರ ಣಿಕೆಯಷ್ಟು ಪ್ರಕರಣ ಗಳ ತನಿಖೆ ಕೂಡ ಮುಕ್ತಾಯವಾಗುತ್ತಿಲ್ಲ. ಗಂಭೀರ ಸ್ವರೂಪವಲ್ಲದ ಪ್ರಕರಣಗಳನ್ನು ಠಾಣಾ ಮಟ್ಟದಲ್ಲೇ ಇತ್ಯರ್ಥಪಡಿಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಹಿಂದಿನಂತೆ ಸಂಚಾರ ನಿಯಮ ಉಲ್ಲಂಘಿಸಿದ ಜನರನ್ನು ತಡೆದು ಪೊಲೀಸರು ಪ್ರಶ್ನಿಸುವುದನ್ನು ಕಡಿಮೆ ಮಾಡಿದ್ದಾರೆ. ಆದರೆ, ರಸ್ತೆ, ವೃತ್ತಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾ, ಕರ್ತವ್ಯದ ವೇಳೆ ನಿಯಮ ಉಲ್ಲಂ ಸಿದ ವಾಹನ ಸಂಖ್ಯೆ ನೋಂದಾಯಿಸಿ ಆನ್ಲೈನ್ನಲ್ಲಿ ದಾಖಲಿಸುತ್ತಾರೆ. ಬಳಿಕ ಅವರ ಮನೆಗೆ ನೋಟಿಸ್ ನೀಡಿ ದಂಡಕ್ಕೆ ಸೂಚಿಸಲಾಗುವುದು. ಎಲ್ಲವೂ ಡಿಜಿಟಲೀಕರಣ ಮಾಡಲಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದರು.
ಒತ್ತಡದಲ್ಲಿ ಪೊಲೀಸ್ ಸಿಬ್ಬಂದಿ: ಠಾಣೆಗಳ ಸೀಲ್ಡೌನ್ ಬಳಿಕ ಈ ಠಾಣೆಗಳ ಕಾರ್ಯನಿರ್ವಹಣೆ ಸಮೀಪದ ಬೇರೆ ಪೊಲೀಸ್ ಠಾಣೆ, ಠಾಣಾಧಿಕಾರಿ ಗಳಿಗೆ ವರ್ಗಾವಣೆ ಮಾಡಲಾಗುತ್ತಿದೆ. ಇದು ಅಧಿಕಾರಿಗಳಲ್ಲಿ ಕಾರ್ಯದೊತ್ತಡ ಹೆಚ್ಚಾಗುತ್ತಿದೆ. ಜತೆಗೆ ಕಂಟೈನ್ಮೆಂಟ್ ವಲಯಗಳಲ್ಲಿ ಭದ್ರತೆಯೂ ಸವಾಲಿನ ಕೆಲಸವಾಗಿದೆ. ಇದರೊಂದಿಗೆ ಕಾನೂನು ಸುವ್ಯವಸ್ಥೆ ಪಾಲನೆ, ಗಣ್ಯರ ಭದ್ರತೆ ಹೀಗೆ ನಾನಾ ರೀತಿಯಲ್ಲಿ ಕಾರ್ಯದೊತ್ತಡ ಹೆಚ್ಚಾ ಗಿದೆ ಎಂದು ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದರು.
ಆರೋಪಿಗಳು ಆಸ್ಪತ್ರೆಗೆ: ಇದುವರೆಗೂ 10 ಪ್ರಕರಣಗಳಲ್ಲಿ ಆರೋಪಿಗಳ ಬಂಧನದ ವೇಳೆಯೇ ಪೊಲೀಸರಿಗೆ ಸೋಂಕು ದೃಢಪಟ್ಟಿರುವುದರಿಂದ ಇನ್ಮುಂದೆ ಯಾವುದೇ ಆರೋಪಿಯನ್ನು ಬಂಧನ ಅಥವಾ ವಶಕ್ಕೆ ಪಡೆಯುತ್ತಿದ್ದಂತೆ ನೇರವಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದು ಕೋವಿಡ್ ಪರೀಕ್ಷೆ ನಡೆಸಿ ನೆಗೆಟಿವ್ ಬಂದರಷ್ಟೇ ಠಾಣೆಗೆ ಕರೆದೊಯ್ಯಲು ಸೂಚಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಆನ್ಲೈನ್ ದೂರುಗಳು: ಫೇಸ್ಬುಕ್, ಟ್ವಿಟರ್ ಹಾಗೂ ಇತರೆ ಮಾರ್ಗಗಳ ಮೂಲಕ ಆನ್ಲೈನ್ ಮಾರ್ಗಗಳ ಮೂಲಕ ದೂರು ಬರುತ್ತಿವೆ. ಅದಕ್ಕೆ ತಕ್ಕಂತೆ ಪೊಲೀಸ್ ಇಲಾಖೆಯೂ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದು, ಕೂಡಲೇ ಸ್ಪಂದಿಸುತ್ತಿದ್ದಾರೆ. ಸಮೀಪದ ಠಾಣೆಗೆ ಮಾಹಿತಿ ನೀಡಿ ದೂರುದಾರರ ಸ್ಥಳಕ್ಕೆ ಕಳುಹಿಸಿ ದೂರು ಸ್ವೀಕರಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ನಗರದ ಸಾಮಾಜಿಕ ಜಾಲತಾಣ ವಿಭಾಗ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಕೋವಿಡ್ 19 ಜತೆಗೆ ಪೊಲೀಸರು ಧೈರ್ಯದಿಂದ ಕೆಲಸ ಮಾಡುತ್ತಿದ್ದಾರೆ. ಅದರ ಬಗ್ಗೆ ನಮಗೆ ಹೆಮ್ಮೆಯಿದೆ. ಎಲ್ಲರಂತೆ ನಮಗೂ ವೃತ್ತಿಪರ ಸಮಸ್ಯೆಗಳಿವೆ. ಭಯಪಟ್ಟರೆ ದುಷ್ಟಶಕ್ತಿಗಳಿಗೆ ತಾವೇ ಆಹ್ವಾನ ಕೊಟ್ಟಂತೆ ಆಗುತ್ತದೆ. ಅಪರಾಧ ಪ್ರಕರಣಗಳ ತನಿಖೆಗೆ ಕೆಲವೊಂದು ಅಡೆತಡೆ ಬರುತ್ತಿದ್ದರೂ ಪ್ರತಿಯೊಬ್ಬ ಸಿಬ್ಬಂದಿಗೂ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಕರ್ತವ್ಯ ನಿರ್ವಹಿಸುವಂತೆ ಸೂಚಿಸಲಾಗಿದೆ.
-ಭಾಸ್ಕರ್ ರಾವ್, ನಗರ ಪೊಲೀಸ್ ಆಯುಕ
* ಮೋಹನ್ ಭದ್ರಾವತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ