ಕೆಕೆಆರ್ಡಿಬಿ ಅಭಿವೃದ್ಧಿಗೆ 1100 ಕೋಟಿ ಬಿಡುಗಡೆ
ಸೊನ್ನದ ಶ್ರೀಗಳು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.
Team Udayavani, Jan 25, 2021, 3:29 PM IST
ಜೇವರ್ಗಿ: ಸೊನ್ನ ಮಠ ಈ ಭಾಗದ ಎರಡನೇ ಅನುಭವ ಮಂಟಪ ಇದ್ದಂತೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ, ಶಾಸಕ ದತ್ತಾತ್ರೆಯ ಪಾಟೀಲ ರೇವೂರ ಹೇಳಿದರು. ತಾಲೂಕಿನ ಸೊನ್ನ ಗ್ರಾಮದಲ್ಲಿ ಸಿದ್ಧಲಿಂಗೇಶ್ವರ ವಿರಕ್ತಮಠದ ಪೀಠಾಧಿಪತಿ ಲಿಂ. ಗುರುಸಿದ್ಧ ಮಹಾ ಸ್ವಾಮೀಜಿ ಅವರ 29ನೇ ಪುಣ್ಯಸ್ಮರಣೋತ್ಸವ ನಿಮಿತ್ತ ರವಿವಾರ ಆಯೋಜಿಸಿದ್ದ 18 ಜೋಡಿಗಳ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಇದನ್ನೂ ಓದಿ:ಉತ್ತರ ಭಾರತದಲ್ಲಿ ಮುಂದುವರಿದ ಹಿಮಪಾತ; ಕೆಲವೆಡೆ ಆರೆಂಜ್ ಅಲರ್ಟ್
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಸವಕಲ್ಯಾಣದಲ್ಲಿ 500 ಕೋಟಿ ರೂ. ವೆಚ್ಚದ ಅನುಭವ ಮಂಟಪ ನಿರ್ಮಿಸಲು ಶಂಕು ಸ್ಥಾಪನೆ ನೆರವೇರಿಸಿದ್ದು ಬಸವಾಭಿಮಾನಿಗಳಲ್ಲಿ ಹರ್ಷ ಮನೆ ಮಾಡಿದೆ. ಅದೇ ರೀತಿ ಈ ಭಾಗದಲ್ಲಿ ಯಾವುದೇ ಜಾತಿ, ಬೇಧಭಾವ ಇಲ್ಲದೇ ನಿರ್ಗತಿಕ, ಅನಾಥ, ಬಡ ಮಕ್ಕಳಿಗೆ ಆಶ್ರಯ ನೀಡುವುದರ ಜತೆಗೆ ಶಿಕ್ಷಣ, ಜ್ಞಾನ, ಅನ್ನ ದಾಸೋಹ ಮಾಡುತ್ತಿರುವ ಸೊನ್ನಮಠದ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಕಲ್ಯಾಣ ಕರ್ನಾಟಕ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪ ಪ್ರಸಕ್ತ ಸಾಲಿನಲ್ಲಿ 1,100 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದಾರೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಡಾ| ಅಜಯಸಿಂಗ್, ಸೊನ್ನ ಗ್ರಾಮದಲ್ಲಿ ಸಾಮೂಹಿಕ ವಿವಾಹ ನಿಮಿತ್ತ ಹಬ್ಬದ ವಾತಾವರಣ ನಿರ್ಮಾಣವಾಗಿದೆ, ಸೊನ್ನದ ಡಾ| ಶಿವಾನಂದ ಸ್ವಾಮೀಜಿ ಸಮಾಜಮುಖೀ ಕಾರ್ಯ ಗಳಿಂದ ಗುರುತಿಸಿಕೊಂಡಿದ್ದಾರೆ.
ಸೊನ್ನದ ಶ್ರೀಗಳು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅನ್ನದ ಮಠ, ಸೊನ್ನದ ಮಠವೆಂದು ಖ್ಯಾತಿ ಪಡೆದಿದೆ. ಸೊನ್ನದ ಮಠ ರಾಜ್ಯದ ಎರಡನೇ ಸಿದ್ಧಗಂಗಾ ಮಠವಾಗಿದೆ. ಯಾವುದೇ ಜಾತಿ, ಬೇಧವಿಲ್ಲದೇ ಎಲ್ಲ ಜಾತಿ, ವರ್ಗಗಳ ಜನತೆಗೆ ಸೊನ್ನದ ಶ್ರೀಗಳು ಸಹಾಯ ಹಸ್ತ ಚಾಚುತ್ತಾರೆ. ಸಾಮಾಜಿಕ ಸಮಾನತೆಗೆ ಶ್ರೀಮಠ ಹೆಸರುವಾಸಿಯಾಗಿದೆ ಎಂದರು.
ಮಠದ ಪೀಠಾಧಿಪತಿ ಡಾ| ಶಿವಾನಂದ ಸ್ವಾಮಿಜಿ ಮಾತನಾಡಿ, ಶರಣರ ನಡೆನುಡಿ ಆಚಾರ-ವಿಚಾರಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳುವುದರ ಮೂಲಕ ಬಸವಣ್ಣ ಆದಿಯಾಗಿ ಶರಣರ ವಿಚಾರಗಳನ್ನು ಹಂಚಿಕೊಂಡು ಸದೃಢ ಸಮಾಜ ನಿರ್ಮಿಸಬೇಕಾಗಿದೆ ಎಂದು ಹೇಳಿದರು.
ಸುಲಫಲ ಮಠದ ಡಾ| ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ, ನೆಲೋಗಿಯ ಸಿದ್ಧಲಿಂಗ ಸ್ವಾಮೀಜಿ, ಜೇರಟಗಿ ಶ್ರೀ, ಅಂಕಲಗಿ, ಕಲಬುರಗಿ ಚೌವಡಾಪುರಿ ಶ್ರೀ, ಹಾಗರಗುಂಡಗಿ ಶ್ರೀ ಸೇರಿದಂತೆ ಜಿಲ್ಲೆಯ ಮಠಾಧೀಶರು ಸಾನ್ನಿಧ್ಯ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಅಧ್ಯಕ್ಷತೆ ವಹಿಸಿದ್ದರು. ಮಾಜಿ ವಿಧಾನ ಪರಿಷತ್ ಸದಸ್ಯ ಅಲ್ಲಮಪ್ರಭು ಪಾಟೀಲ, ಶರಣಪ್ಪ ತಳವಾರ, ಜೆಡಿಎಸ್ ಮುಖಂಡ ಚನಮಲ್ಲಯ್ಯ ಹಿರೇಮಠ, ಶಿವಾನಂದ ಸಾಹು ಮಾಕಾ, ಜಿ.ಪಂ ಸದಸ್ಯ ದಂಡಪ್ಪ ಸಾಹು ಕುಳಗೇರಾ, ಸಾಹೇಬಗೌಡ ಬಿರಾದಾರ, ಚಂದ್ರಶೇಖರ ಹರನಾಳ, ರೇವಣಸಿದ್ದಪ್ಪ ಸಂಕಾಲಿ, ಭೀಮರಾವ್ ಗುಜಗೊಂಡ, ಎಂ.ಬಿ. ಪಾಟೀಲ, ರಮೇಶಬಾಬು ವಕೀಲ, ಬೈಲಪ್ಪ ನೆಲೋಗಿ, ವಿಜಯಕುಮಾರ ಕಲ್ಲಹಂಗರಗಾ, ಶಿವುಕುಮಾರ ಕಲ್ಲಾ, ಬಸವರಾಜ ಪಾಟೀಲ ನರಿಬೋಳ, ಎಸ್. ಎಸ್. ಸಲಗರ, ಮಲ್ಲಿಕಾರ್ಜುನ ಬಿರಾದಾರ ಹಾಗೂ ತಾಲೂಕಿನ ವಿವಿಧ ಗ್ರಾಮಸ್ಥರು ಹಾಗೂ ಶ್ರೀಮಠದ ಭಕ್ತಾದಿಗಳು ಪಾಲ್ಗೊಂಡಿದ್ದರು.
ಗವಾಯಿ ಶಿವರುದ್ರಯ್ಯ ಗೌಡಗಾಂವ ಪ್ರಾರ್ಥಿಸಿದರು, ಪ್ರಾಚಾರ್ಯ ಸದಾನಂದ ಪಾಟೀಲ ಸ್ವಾಗತಿಸಿದರು, ಸಾಹಿತಿ ಅಮರಯ್ಯ ಸ್ವಾಮಿ ಜಾಲಿಬೆಂಚಿ ನಿರೂಪಿಸಿ, ವಂದಿಸಿದರು.