Hunsur: ಚಿರತೆ ದಾಳಿಗೆ ಮೇಕೆ ಸಾವು; ಜನವಸತಿ ಪ್ರದೇಶದಲ್ಲೇ ಚಿರತೆ ಪ್ರತ್ಯಕ್ಷ
ಚಿರತೆ ಸೆರೆಗೆ ಗ್ರಾಮಸ್ಥರ ಆಗ್ರಹ
Team Udayavani, Oct 28, 2023, 12:44 PM IST
ಹುಣಸೂರು: ಚಿರತೆಯೊಂದು ಕೊಟ್ಟಿಗೆಗೆ ನುಗ್ಗಿ ಮೇಕೆಯನ್ನು ಹೊತ್ತೊಯ್ದು ಕೊಂದಿರುವ ಘಟನೆ ತಾಲೂಕಿನ ಹನಗೋಡಿನಲ್ಲಿ ನಡೆದಿದೆ.
ಹನಗೋಡಿನ ಹರಿಜನ ಬಡಾವಣೆಯ ಪಾಪಯ್ಯ ಎಂಬವರಿಗೆ ಸೇರಿದ ಮೇಕೆ ಇದಾಗಿದ್ದು, ಗುರುವಾರ ರಾತ್ರಿ 8ರ ವೇಳೆ ಮನೆಯ ಹಿಂಬದಿಯಿಂದ ಚಿರತೆ ಕೊಟ್ಟಿಗೆಗೆ ಧಾವಿಸಿ, ಮೇಕೆಯನ್ನು ಹೊತ್ತೊಯ್ದಿದ್ದನ್ನು ಕಂಡ ಬೀದಿನಾಯಿಗಳು ಬೊಗಳಲಾರಂಭಿಸಿದ್ದನ್ನು ಗಮನಿಸಿದ ಗ್ರಾಮಸ್ಥರು ಹತ್ತಿರಕ್ಕೆ ಬರುವುದನ್ನು ಗಮನಿಸಿ ಚಿರತೆ ಮೇಕೆಯನ್ನು ಜಮೀನಿನತ್ತ ಹೊತೊಯ್ದು ಕೊಂದು ಅಲ್ಲಿಯೇ ಬಿಟ್ಟು ಪರಾರಿಯಾಗಿದೆ.
ಆತಂಕದಲ್ಲಿ ಗ್ರಾಮಸ್ಥರು:
ವರ್ಷದಿಂದೀಚೆಗೆ ಈ ಬಡಾವಣೆಯಲ್ಲಿ ಆಗಾಗ್ಗೆ ಚಿರತೆ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದ್ದರೆ, ಹತ್ತಿರದ ಸವಲಯ್ಯನ ಕೆರೆ ಬಳಿ ಹುಲಿ ಹೆಜ್ಜೆ ಸಹ ಕಾಣಿಸಿಕೊಂಡಿದ್ದು, ರಾತ್ರಿಯಾಯಿತೆಂದರೆ ಬಡಾವಣೆಯಲ್ಲಿ ಓಡಾಡಲು ಹೆದರುತ್ತಿದ್ದಾರೆ. ತಕ್ಷಣವೇ ಚಿರತೆಯನ್ನು ಸೆರೆ ಹಿಡಿಯಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದರೆ. ಈ ಭಾಗದಲ್ಲಿ ವನ್ಯಪ್ರಾಣಿಗಳ ಹಾವಳಿ ತಪ್ಪಿಸದಿದ್ದಲ್ಲಿ ಗ್ರಾಮಸ್ಥರೊಡಗೂಡಿ ಪ್ರತಿಭಟಿಸಲಾಗುವುದೆಂದು ತಾ.ಪಂ.ಮಾಜಿ ಸದಸ್ಯ ಎಚ್.ಆರ್.ರಮೇಶ್ ಎಚ್ಚರಿಸಿದ್ದಾರೆ.
ಬೋನ್ ಇಡಲಾಗಿದೆ:
ವಿಷಯ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಚಿರತೆ ಸೆರೆ ಹಿಡಿಯಲು ಬೋನ್ ಇಡಲಾಗಿದೆ. ಶೀGರ ಪರಿಹಾರ ನೀಡಲಾಗುವುದು. ಈ ಚಿರತೆಯನ್ನು ಹಿಡಿಯಲು ಕ್ರಮವಹಿಸಲಾಗಿದೆ ಎಂದು ಆರ್.ಎಫ್.ಓ.ನಂದಕುಮಾರ್ ಉದಯವಾಣಿಗೆ ತಿಳಿಸಿದ್ದಾರೆ.