ಸಕಾಲದಲ್ಲಿ ಸಾಲ ಪಾವತಿಸಿ
Team Udayavani, Jun 21, 2020, 5:18 AM IST
ಮೈಸೂರು: ಫಲಾನುಭವಿಗಳು ಸಕಾಲದಲ್ಲಿ ಸಾಲ ಮರುಪಾತಿಸಬೇಕು ಎಂದು ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್ ಮನವಿ ಮಾಡಿದರು.
ನಗರದಲ್ಲಿ ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ 2019-20ನೇ ಸಾಲಿನ ಫಲಾನುಭವಿಗಳಿಗೆ ಸಾಲ ಆದೇಶ ಪತ್ರ ವಿತರಿಸಿದರು. ನಿಗಮದಿಂದ ಮೊದಲ ಬಾರಿಗೆ ಸಾಲ ನೀಡಲಾಗಿದೆ. ಸಕಾಲದಲ್ಲಿ ಸಾಲ ಪಾವತಿಸಿದರೆ ಬೇರೆಯವರಿಗೂ ಸಾಲ ನೀಡಲು ಅನುಕೂಲವಾಗಲಿದೆ. ರಾಜ್ಯಾದ್ಯಂತ ಸಮುದಾಯದ 1,150 ಫಲಾನುಭವಿಗಳಿಗೆ ಸಾಲ ನೀಡಿದ್ದು, ಮುಂದಿನ ದಿನಗಳಲ್ಲಿ ಹೊಸ ಯೋಜನೆಗಳನ್ನು ಜಾರಿಗೆ ತರಲಾಗಿದೆ.
ಶೈಕ್ಷಣಿಕ ಸಾಲ ಯೋಜನೆ ಮತ್ತು ಸಣ್ಣ ವ್ಯಾಪಾರಿಗಳ ಅಭಿವೃದ್ಧಿಗೆ ನೇರ ಉದ್ಯೋಗ ಸಾಲ ಯೋಜನೆ ಜಾರಿಗೆ ತರಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ನಿಗಮದ ಸಹಾಯಕ ಪ್ರಧಾನ ವ್ಯವಸ್ಥಾಪಕ ಶ್ರೀನಿವಾಸ್ ಕುಮಾರ್, ಜಿಲ್ಲಾ ವ್ಯವಸ್ಥಾಪಕ ಶೋಭ, ಸಹಾಯಕ ಅಭಿವೃದ್ಧಿ ಅಧಿಕಾರಿ ಶ್ವೇತ, ಬಿಜೆಪಿ ಉಪಧ್ಯಾಕ್ಷ ದಿನೇಶ್, ಮುಖಂಡರಾದ ಪುಟ್ಟೂರು ಶ್ರೀನಿವಾಸ್, ನಾಗೇಶ್, ಕುಮಾರಸ್ವಾಮಿ ಇದ್ದರು.