287 ಕೋಟಿ ರೂ. ವೆಚ್ಚದಲ್ಲಿ ಡ್ರೋನ್ ಸರ್ವೆ: ಸಚಿವ ಆರ್. ಅಶೋಕ್
Team Udayavani, Mar 16, 2022, 11:04 PM IST
ಬೆಂಗಳೂರು: ರಾಜ್ಯದ 26 ಜಿಲ್ಲೆಗಳಲ್ಲಿನ ಒಟ್ಟಾರೆ 1.40 ಲಕ್ಷ ಚ.ಕಿ.ಮೀ ಭೂಪ್ರದೇಶವನ್ನು ಡ್ರೋನ್ ಹಾಗೂ ವೈಮಾನಿಕ ಸರ್ವೆ ಕಾರ್ಯವನ್ನು 287 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ವಿಧಾನಪರಿಷತ್ನಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್ ಸದಸ್ಯ ಕೆ.ಎ. ತಿಪ್ಪೇಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಸಚಿವರು, 2017-18ರಲ್ಲಿ ರಾಜ್ಯದ ಐದು ಜಿಲ್ಲೆಗಳಾದ ರಾಮನಗರ, ತುಮಕೂರು, ಹಾಸನ ಬೆಳಗಾವಿ, ಉತ್ತರ ಕನ್ನಡ, ಬೆಂಗಳೂರು ನಗರ ಜಿಲ್ಲೆಗಳಲ್ಲಿನ ಒಟ್ಟು 51 ಸಾವಿರ ಚ.ಕಿ.ಮೀ ಭೂಪ್ರದೇಶವನ್ನು ಡ್ರೋನ್ ಆಧಾರಿತ ಭೂಮಾಪನ ಭಾರತೀಯ ಸರ್ವೇಕ್ಷಣ ಸಂಸ್ಥೆಯ ಸಹಯೋಗದೊಂದಿಗೆ ಕೈಗೊಳ್ಳಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ 26 ಜಿಲ್ಲೆಗಳಲ್ಲಿ ಸರ್ವೆ ಕಾರ್ಯ ನಡೆಸಲಾಗುವುದು ಎಂದರು.
ರಾಜ್ಯದಲ್ಲಿ 2018ರಲ್ಲಿ ಡ್ರೋಣ್ ಆಧಾರಿತ ಮರು ಭೂಮಾಪನ ಕಾರ್ಯ ಪ್ರಾರಂಭಿಸಲಾಗಿದ್ದು, ರಾಜ್ಯಾದ್ಯಂತ 49 ಕೇಂದ್ರಗಳಲ್ಲಿ ಸಿಒಆರ್ಸಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ತುಮಕೂರು, ರಾಮನಗರ ಮತ್ತು ಬೆಂಗಳೂರು ನಗರದಲ್ಲಿ ಡ್ರೋನ್ ಫ್ಲೈಯಿಂಗ್ ಕಾರ್ಯ ಆರಂಭಿಸಲಾಗಿತ್ತು.
ಕೋವಿಡ್-19 ಲಾಕ್ಡೌನ್ ಕಾರಣ ಹಾಗೂ ಕೇಂದ್ರದ ಸ್ವಮಿತ್ವ ಯೋಜನೆ ಜಾರಿಯಿಂದ ಭೂಮಾಪನ ಕಾರ್ಯ ತಾತ್ಕಾಲಿಕ ಸ್ಥಗಿತಗೊಂಡಿತ್ತು. ಈ ಯೋಜನೆಯನ್ನು ಭಾರತೀಯ ಸರ್ವೇಕ್ಷಣಾ ಸಂಸ್ಥೆಯ ತಾಂತ್ರಿಕ ಸಹಯೋಗದೊಂದಿಗೆ ಅನುಷ್ಠಾನಗೊಳಿಸಲಾಗುತ್ತಿದೆ 76 ಕೋಟಿ ರೂ. ವೆಚ್ಚದ ಅಂದಾಜು ಮಾಡಲಾಗಿದ್ದು, ಭಾರತೀಯ ಸರ್ವೇಕ್ಷಣ ಸಂಸ್ಥೆಗೆ 22 ಕೋಟಿ ರೂ. ಪಾವತಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.