Asian Games: ಅಮೃತಕಾಲದಲ್ಲಿ ಭಾರತಕ್ಕೆ ಸ್ವರ್ಣಲೇಪದ ತವಕ


Team Udayavani, Sep 23, 2023, 12:09 AM IST

ASIAN GAMES LOGO

19ನೇ ಏಷ್ಯನ್‌ ಗೇಮ್ಸ್‌ಗೆ ಭಾರತ ಸೇರಿ ವಿಶ್ವದ 45 ದೇಶಗಳು ಸಿದ್ಧವಾಗಿವೆ. ಚೀನದ ಹ್ಯಾಂಗ್‌ಝೂನಲ್ಲಿ ಸೆ.23ರಿಂದ ಅ.8ರ ವರೆಗೆ ಬಹುಸ್ಪರ್ಧೆಗಳ ಕ್ರೀಡಾಕೂಟ ನಡೆಯಲಿದೆ. ಭಾರತದ ಸ್ಪರ್ಧಿಗಳು ಭಾರೀ ನಿರೀಕ್ಷೆಯಿಟ್ಟುಕೊಂಡು ಕೂಟಕ್ಕೆ ಸಜ್ಜಾಗಿದ್ದಾರೆ.

ಈ ಬಾರಿ ಚಿನ್ನ, ಬೆಳ್ಳಿ ಪದಕಗಳನ್ನು ಗರಿಷ್ಠ ಪ್ರಮಾಣದಲ್ಲಿ ಗೆಲ್ಲಲು ಸಿದ್ಧತೆ ನಡೆಸಲಾಗಿದೆ. ಸ್ವಾತಂತ್ರ್ಯದ ಅಮೃತವರ್ಷ ಪೂರೈಸಿರುವ ಭಾರತಕ್ಕೆ ಕ್ರೀಡಾಪಟುಗಳು ಸ್ವರ್ಣಲೇಪನ ಮಾಡಲಿ ಎನ್ನುವುದು ನಮ್ಮ ಹಾರೈಕೆ. ಏಷ್ಯಾ ಉತ್ಸವದಲ್ಲಿ ಅತ್ಯುತ್ತಮ ಸಾಧನೆ ಮಾಡಬಲ್ಲ ಸ್ಪರ್ಧಿಗಳು/ಸ್ಪರ್ಧೆಗಳ ಸಂಕ್ಷಿಪ್ತ ವಿವರವನ್ನು ಇಲ್ಲಿ ನೀಡಲಾಗಿದೆ.

ಲವ್ಲೀನಾ ಬೊರ್ಗೊಹೇನ್‌
ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದಿರುವ ಮಹಿಳಾ ಬಾಕ್ಸರ್‌ ಲವ್ಲೀನಾ ಬೊರ್ಗೊಹೇನ್‌ 75 ಕೆ.ಜಿ.ವಿಭಾಗದಲ್ಲಿ ಭಾರತದ ಭರವಸೆಯಾಗಿದ್ದಾರೆ. ಚೀನದ ಬಾಕ್ಸರ್‌ಗಳನ್ನು ಎದುರಿಸಿ ಗೆದ್ದರೆ, ಲವ್ಲೀನಾಗೆ ಫೈನಲ್‌ಗೇರುವುದು, ಚಿನ್ನ ಗೆಲ್ಲುವುದು ಕಷ್ಟವೇನಲ್ಲ.

ಮುರಳಿ ಶ್ರೀಶಂಕರ್‌
ಉದ್ದಜಿಗಿತ ಸ್ಪರ್ಧಿ ಮುರಳಿ ಶ್ರೀಶಂಕರ್‌ ಈ ವರ್ಷ ವಿಶ್ವಮಟ್ಟದಲ್ಲಿ ಹಲವು ಬಾರಿ ವಿಫ‌ಲರಾಗಿದ್ದಾರೆ. ಏಷ್ಯಾಡ್‌ನ‌ಲ್ಲಿ ಪದಕ ಗೆಲ್ಲಲು ಅವರಿಗೊಂದು ಉತ್ತಮ ಅವಕಾಶವಿದೆ. 8.41 ಮೀ. ದೂರ ಹಾರಿದ್ದು ಅವರ ಈವರೆಗಿನ ಶ್ರೇಷ್ಠ ಸಾಧನೆ. ಅದನ್ನು ಪುನರಾವರ್ತಿಸಿದರೆ ಪದಕ ಕಷ್ಟವಲ್ಲ.

ಪ್ರವೀಣ್‌ ಚಿತ್ರವೇಲ್‌
ಏಷ್ಯಾ ಮಟ್ಟದಲ್ಲಿ ಈ ಋತುವಿನಲ್ಲಿ ಪ್ರವೀಣ್‌ ಚಿತ್ರವೇಲ್‌ ಟ್ರಿಪಲ್‌ ಜಂಪ್‌ನಲ್ಲಿ ಮಿಂಚಿದ್ದಾರೆ. ಅವರ ಶ್ರೇಷ್ಠ ಸಾಧನೆ 17.37 ಮೀಟರ್‌. ಟ್ರಿಪಲ್‌ ಜಂಪ್‌ನಲ್ಲಿ ಪದಕ ನಿರೀಕ್ಷೆ ಮೂಡಿಸಿದ್ದಾರೆ. ಆದರೆ ಕಳೆದ ಮೂರು ಸ್ಪರ್ಧೆಗಳಲ್ಲಿ ಅವರು 17 ಮೀ. ದೂರ ಹಾರಲು ವಿಫ‌ಲರಾಗಿದ್ದಾರೆ.

ಪುರುಷರ 400 ಮೀ. ರಿಲೇ ತಂಡ
ಮುಹಮ್ಮದ್‌ ಅನಾಸ್‌ ಯಾಹಿಯ, ಅಮೋಜ್‌ ಜೇಕಬ್‌, ಮುಹಮ್ಮದ್‌ ಅಜ್ಮಲ್‌ ಮತ್ತು ರಾಜೇಶ್‌ ರಮೇಶ್‌ ಈ ಬಾರಿ ಪುರುಷರ ವಿಭಾಗದ 4×400 ಮೀ. ರಿಲೇಯಲ್ಲಿ ಭರವಸೆ ಮೂಡಿಸಿದ್ದಾರೆ. ವಿಶ್ವ ಆ್ಯತ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಅಮೆರಿಕ ತಂಡಕ್ಕೆ ಬಲವಾದ ಪೈಪೋಟಿ ನೀಡಿದ್ದ ಭಾರತೀಯರು ಅಂತಿಮವಾಗಿ 5ನೇ ಸ್ಥಾನಕ್ಕೆ ಸಮಾಧಾನ ಗೊಂಡಿದ್ದರು. ಹೀಗಿರುವಾಗ ಏಷ್ಯಾಡ್‌ ಗೆಲ್ಲುವುದು ಇವರಿಗೆ ಕಷ್ಟವಾಗಲಾರದು.

ಬಜರಂಗ್‌
ಪ್ರಸ್ತುತ ಭಾರತದ ಕುಸ್ತಿಯಲ್ಲಿ ಎಲ್ಲವೂ ಸರಿಯಿಲ್ಲ. ಬಿಜೆಪಿ ಸಂಸದ, ಭಾರತ ಕುಸ್ತಿ ಸಂಸ್ಥೆಯ ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್‌ ಶರಣ್‌ ಸಿಂಗ್‌ ವಿರುದ್ಧ ತೊಡೆತಟ್ಟಿದ ವಿನೇಶ್‌ ಫೋಗಟ್‌, ಸಾಕ್ಷಿ ಮಲಿಕ್‌, ಬಜರಂಗ್‌ ಪೂನಿಯ ಮತ್ತಿತರರು ತಮ್ಮ ಹೋರಾಟದಲ್ಲಿ ಒಂದು ಹಂತದ ಯಶಸ್ಸು ಕಂಡಿದ್ದಾರೆ. ಈ ಗೊಂದಲಗಳ ಮಧ್ಯೆ ವಿನೇಶ್‌ ಫೋಗಟ್‌, ಸಾಕ್ಷಿ, ರವಿ ದಹಿಯರಂತಹ ತಾರೆಯರು ಈ ಬಾರಿ ಕಾಣಿಸಿಕೊಂಡಿಲ್ಲ. ಹಾಗೆಂದು ಭರವಸೆ ಕಳೆದುಕೊಳ್ಳುವ ಅಗತ್ಯವಿಲ್ಲ. 65 ಕೆ.ಜಿ.ವಿಭಾಗದಲ್ಲಿ ವಿಶ್ವವಿಖ್ಯಾತ ಕುಸ್ತಿಪಟು ಬಜರಂಗ್‌ ಪೂನಿಯ ಇದ್ದೇ ಇದ್ದಾರೆ. ಇನ್ನು ದೀಪಕ್‌ ಪೂನಿಯ, ಅಂತಿಮ್‌ ಪಂಘಲ್‌, ಪೂಜಾ ಗೆಹಲೋತ್‌, ಸೋನಮ್‌ ಮಲಿಕ್‌ ಕೂಡ ಆಶಾಕಿರಣಗಳಾಗಿದ್ದಾರೆ.

ನಿಖತ್‌ ಜರೀನ್‌
ಖಚಿತವಾಗಿ ಚಿನ್ನ ಗೆದ್ದೇ ಗೆಲ್ಲುತ್ತಾರೆ ಎಂದು ಹೇಳಬಹುದಾದವರ ಪಟ್ಟಿಯಲ್ಲಿ ಬಾಕ್ಸರ್‌ ನಿಖತ್‌ ಜರೀನ್‌ ಬರುತ್ತಾರೆ. ಕಳೆದ 2 ವರ್ಷಗಳಲ್ಲಿ ಇವರ ಸಾಧನೆ ಅದ್ಭುತವಾಗಿದೆ. 2 ಬಾರಿ ವಿಶ್ವಕಪ್‌ ಗೆದ್ದಿದ್ದಾರೆ. 2022ರ ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಚಿನ್ನ ಗೆದ್ದಿದ್ದಾರೆ. ಏಷ್ಯಾಡ್‌ನ‌ಲ್ಲಿ ಚಿನ್ನದ ಖಾತೆ ತೆರೆದರೆ ಅದು ಅಚ್ಚರಿಯೇನಲ್ಲ.

ಆರ್‌.ಪ್ರಜ್ಞಾನಂದ
ಇತ್ತೀಚೆಗಷ್ಟೇ ಚೆಸ್‌ ವಿಶ್ವಕಪ್‌ ಫೈನಲ್‌ಗೇರಿದ್ದ ತಮಿಳುನಾಡಿನ ಆರ್‌. ಪ್ರಜ್ಞಾನಂದ ಅಲ್ಲಿ ದಂತಕಥೆ ಮ್ಯಾಗ್ನಸ್‌ ಕಾಲ್ಸìನ್‌ ವಿರುದ್ಧ ಸೋತಿದ್ದರು. ಈ ಯುವ ಪ್ರತಿಭೆ ವಿಶ್ವನಾಥನ್‌ ಆನಂದ್‌ ಅನಂತರ ಈ ಸಾಧನೆ ಮಾಡಿರುವ ಭಾರತದ ಮೊದಲ ಸಾಧಕ. ಇವರ ಮೇಲೊಂದು ಬಂಗಾರದ ನಿರೀಕ್ಷೆಯಿದೆ.

ಡಿ.ಗುಕೇಶ್‌
ಇನ್ನೂ 17 ವರ್ಷದ ಡಿ.ಗುಕೇಶ್‌ ಈಗ ಭಾರತದ ನಂ.1 ಚೆಸ್‌ ಆಟಗಾರ. ಸತತ 37 ವರ್ಷಗಳ ಕಾಲ ದಂತಕಥೆ ವಿಶ್ವನಾಥನ್‌ ಆನಂದ್‌ ಅವರು ಈ ಸ್ಥಾನದಲ್ಲಿದ್ದರು. ಮೊದಲ ಬಾರಿಗೆ ಆನಂದ್‌ರನ್ನು ಈ ಸ್ಥಾನದಿಂದ ಕೆಳಗಿಳಿಸಿರುವ ಗುಕೇಶ್‌ ಏಷ್ಯಾಡ್‌ನ‌ಲ್ಲಿ ಚಿನ್ನದ ನಿರೀಕ್ಷೆ ಮೂಡಿಸಿದ್ದಾರೆ.

ನೀರಜ್‌ ಚೋಪ್ರಾ
2021ರಲ್ಲಿ ಟೋಕಿಯೊ ಒಲಿಂಪಿಕ್ಸ್‌ನ ಜಾವೆಲಿನ್‌ ಕ್ರೀಡೆಯಲ್ಲಿ ಚಿನ್ನ ಗೆದ್ದು ದಂತಕಥೆಯ ಸ್ಥಾನ ಪಡೆದಿರುವ ನೀರಜ್‌ ಚೋಪ್ರಾ, ಈ ವರ್ಷ ಹಂಗೇರಿಯ ಬುಡಾಪೆಸ್ಟ್‌ನಲ್ಲಿ ನಡೆದ ವಿಶ್ವ ಆ್ಯತ್ಯೆಟಿಕ್ಸ್‌ ಕೂಟದಲ್ಲೂ ಚಿನ್ನ ಗೆದ್ದರು. ಅದರ ಮೂಲಕ ಟೋಕಿಯೊದಲ್ಲಿ ತಾನು ಗೆದ್ದಿದ್ದು ಅದೃಷ್ಟದ ಬಲದ ಮೇಲಾದ ಸಾಧನೆಯಲ್ಲ ಎನ್ನುವುದನ್ನು ಸಾಬೀತು ಮಾಡಿದರು. 2018ರ ಏಷ್ಯಾಡ್‌ನ‌ಲ್ಲೂ ಚಿನ್ನ ಗೆದ್ದಿದ್ದ ಅವರಿಗೆ ಈ ಬಾರಿಯ ಏಷ್ಯಾಡ್‌ ದೊಡ್ಡ ಸವಾಲೇ ಅಲ್ಲ ಎಂದು ವಿಶ್ಲೇಷಿಸಲಾಗಿದೆ.

ಕಬಡ್ಡಿಯಲ್ಲೂ 2 ಸ್ವರ್ಣ ಖಾತ್ರಿ
ಕಬಡ್ಡಿಯಲ್ಲಿ ಭಾರತ ಪ್ರತಿಭೆಗಳ ಗಣಿಯೇ ಇರುವ ದೇಶ. ಭಾರತ ಪುರುಷ ಮತ್ತು ಮಹಿಳಾ ವಿಭಾಗಗಳಲ್ಲಿ ಅತ್ಯುತ್ತಮ ಪ್ರತಿಭೆಗಳೊಂದಿಗೆ ಕಣಕ್ಕಿಳಿಯಲಿದೆ. ಇಲ್ಲಿ ಭಾರತದ 2 ಚಿನ್ನದ ಬೇಟೆಯನ್ನು ತಡೆಯುವ ದೇಶ ಇಲ್ಲವೆಂದರೂ ಸರಿಯಾಗುತ್ತದೆ.

ಕೂಟ ಶುರುವಾಗಿದ್ದೇ ಭಾರತದ ಆಸಕ್ತಿಯಿಂದ
ಬೃಹತ್‌ ಕ್ರೀಡಾಕೂಟವಾಗಿರುವ ಏಷ್ಯಾಡನ್ನು ನಡೆಸಲು ಪ್ರೇರಣೆ ನೀಡಿ, ಆರಂಭಿಸಿದ್ದೇ ಭಾರತ ಎನ್ನುವುದು ಗಮನಾರ್ಹ. ಪಟಿಯಾಲ ಸಾಮ್ರಾಜ್ಯದ ಕೊನೆಯ ಮಹಾರಾಜ ಯಾದವಿಂದ್ರ ಸಿಂಗ್‌ ಹೀಗೊಂದು ಕೂಟ ನಡೆಯಬೇಕೆಂದು ಚಿಂತಿಸಿದರು. ಅದಕ್ಕೆ ಎಲ್ಲರನ್ನೂ ಒಪ್ಪಿಸಿದರು. 1951ರಲ್ಲಿ ಉದ್ಘಾಟನ ಕೂಟ ಹೊಸದಿಲ್ಲಿಯಲ್ಲೇ ನಡೆಯಿತು. ಇಲ್ಲಿ 2ನೇ ಸ್ಥಾನ ಪಡೆದ ಭಾರತ, ಇಲ್ಲಿಯವರೆಗೆ ಅಗ್ರ-10ರೊಳಗೊಂದು ಸ್ಥಾನವನ್ನು ಪಡೆಯುತ್ತ ಬಂದಿದೆ.

ಆಗಿನ ಏಷ್ಯಾಡ್‌-ಈಗಿನ ಏಷ್ಯಾಡ್‌
ಏಷ್ಯಾಡ್‌ ಎಷ್ಟು ಬೆಳೆದಿದೆ ಎನ್ನುವುದಕ್ಕೆ ಇಲ್ಲೊಂದು ಉದಾಹರಣೆಯಿದೆ. 1951ರಲ್ಲಿ ಉದ್ಘಾಟನ ಕೂಟ ನಡೆದಾಗ ಪಾಲ್ಗೊಂಡಿದ್ದು 11 ದೇಶಗಳು ಮಾತ್ರ. ಆಗ ಒಟ್ಟು ಸ್ಪರ್ಧಿಗಳ ಸಂಖ್ಯೆ 478. ಪ್ರಸ್ತುತ ಭಾರತವೊಂದೇ 634 ಕ್ರೀಡಾಪಟುಗಳನ್ನು ಕಳಿಸುತ್ತಿದೆ. ಮೊದಲ ಕೂಟದಲ್ಲಿ ಭಾರತ 15 ಚಿನ್ನ ಸೇರಿ 51 ಪದಕ ಗೆದ್ದಿತ್ತು. 2018ರಲ್ಲಿ ಭಾರತ 16 ಚಿನ್ನ ಸೇರಿ ಒಟ್ಟು 70 ಪದಕ ಗೆದ್ದಿತ್ತು. ಈಗ ಒಟ್ಟು 45 ದೇಶಗಳಿಂದ 5054 ಕ್ರೀಡಾಪಟುಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಮೀರಾಬಾಯಿ ಚಾನು

2021ರಲ್ಲಿ ನಡೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಅನಂತರ ಮಣಿಪುರದ ಮೀರಾಬಾಯಿ ಚಾನು ಮನೆಮಾತಾದರು. ಅವರು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 1 ಚಿನ್ನ, 1 ಬೆಳ್ಳಿ ಗೆದಿದ್ದಾರೆ. ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ 2 ಚಿನ್ನವೂ ಇವರ ಪದಕ ಪಟ್ಟಿಯಲ್ಲಿದೆ. 49 ಕೆ.ಜಿ.ವಿಭಾಗ
ದಲ್ಲಿ ಏಷ್ಯಾಡ್‌ ಚಿನ್ನವೆನಿಸಿಕೊಳ್ಳುವುದು ಇವರಿಗೆ ಕಷ್ಟವೇನಲ್ಲ. ಇವರೊಂದಿಗೆ ಬಿಂದ್ಯಾ ರಾಣಿ ಭರವಸೆ ಮೂಡಿಸಿದ್ದಾರೆ.

ಚಿಗುರಿದ ಭರವಸೆ
2021ರಲ್ಲಿ ಟೋಕಿಯೊದಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಭಾರತ ಪುರುಷರ ಹಾಕಿ ತಂಡ ಯಾರೂ ಊಹಿಸದ ರೀತಿಯಲ್ಲಿ ಕಂಚಿನ ಪದಕ ಗೆದ್ದಿತ್ತು. ಹಲವು ದಶಕಗಳು ಕಳೆದ ಮೇಲೆ ಭಾರತ ಅಂತಹದ್ದೊಂದು ಸಾಧನೆ ಮಾಡಿತ್ತು. ಅದೇ ವೇಳೆ ಮಹಿಳಾ ತಂಡ ರೋಚಕ ವಾಗಿ ಹೋರಾಡಿದರೂ ಕಂಚಿನ ಪದಕ ತಪ್ಪಿಸಿಕೊಂಡು 4ನೇ ಸ್ಥಾನಿಯಾಗಿತ್ತು. ಸದ್ಯ ಎರಡೂ ತಂಡಗಳು ಪ್ರಬಲ ವಾಗಿವೆ. ಗತವೈಭವವನ್ನು ಮರುಸ್ಥಾಪಿಸುವ ಆಶೆಯೊಂದಿದೆ.

ಜ್ಯೋತಿ ಸುರೇಖಾ ವೆನ್ನಮ್‌
ಪ್ರಸ್ತುತ ಭಾರತದಲ್ಲಿ ಬಿಲ್ಗಾರರ ವಿಭಾಗದಲ್ಲಿ ಅತ್ಯಂತ ಭರವಸೆ ಮೂಡಿಸಿರುವುದು ಜ್ಯೋತಿಕಾ ಸುರೇಖಾ ವೆನ್ನಮ್‌. ವಿಶ್ವ ನಂ.4 ಬಿಲ್ಗಾರ್ತಿಯಾಗಿರುವ ಇವರು ಚಿನ್ನ ಗೆದ್ದು, ವೈಯಕ್ತಿಕ ವಿಭಾಗದಲ್ಲಿ ಭಾರತದ ಚಿನ್ನದ ಖಾತೆ ತೆರೆಯುವ ಸಾಧ್ಯತೆಯೊಂದಿದೆ. ಕಳೆದ ಒಂದೇ ವರ್ಷದಲ್ಲಿ ಜ್ಯೋತಿ 6 ಚಿನ್ನ, 1 ಬೆಳ್ಳಿ, 3 ಕಂಚು ಗೆದ್ದಿದ್ದಾರೆ.

ಅಭಿಷೇಕ್‌ ವರ್ಮ
ಏಷ್ಯಾಡ್‌ನ‌ಲ್ಲಿ ತಂಡ ವಿಭಾಗದಲ್ಲಿ ಅಭಿಷೇಕ್‌ ವರ್ಮ 1 ಚಿನ್ನ, 2 ಬೆಳ್ಳಿ ಪದಕಗಳನ್ನು ಗೆದ್ದಿದ್ದಾರೆ. 34 ವರ್ಷದ ಅವರು ಸಾಧನೆಯ ಉತ್ತುಂಗಕ್ಕೇರಿ ಏಷ್ಯನ್‌ ಗೇಮ್ಸ್‌ ಮುಗಿಸುವ ಲೆಕ್ಕಾಚಾರದಲ್ಲಿದ್ದಾರೆ. ಪುರುಷರ ಕಾಂಪೌಂಡ್‌ ವಿಭಾಗದಲ್ಲಿ ಭಾರತ ಇನ್ನೊಮ್ಮೆ ಚಿನ್ನ ಗೆಲ್ಲಲು ಇವರ ಅನುಭವದ ನೆರವಿನ ಅಗತ್ಯವಿದೆ.

ಚಿರಾಗ್‌-ಸಾತ್ವಿಕ್‌
ಭಾರತದ ಬ್ಯಾಡ್ಮಿಂಟನ್‌ ತಂಡದಲ್ಲಿ ಪದಕ ಗೆಲ್ಲುವ ಭರವಸೆ ಮೂಡಿಸಿ ರುವುದು ಎಚ್‌.ಎಸ್‌.ಪ್ರಣಯ್‌. ಪ್ರಸ್ತುತ ಅವರು ಉತ್ತಮ ಲಹರಿಯಲ್ಲಿದ್ದಾರೆ. ಇನ್ನು ಲಕ್ಷ್ಯಸೇನ್‌ ಉದಯೋನ್ಮುಖ ಆಟಗಾರರಾಗಿ ಹೆಸರು ಮಾಡಿದ್ದಾರೆ. ಇವರ ಮೇಲೂ ಭರವಸೆ ಯಿದೆ. ಎಲ್ಲಕ್ಕಿಂತ ಗಟ್ಟಿ ಭರವಸೆಯಿರುವುದು ಬ್ಯಾಡ್ಮಿಂಟನ್‌ ಡಬಲ್ಸ್‌ ಜೋಡಿಯಾದ ಸಾತ್ವಿಕ್‌ ರಾಂಕಿ ರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ಮೇಲೆ. ವಿಶ್ವಮಟ್ಟದಲ್ಲಿ ಇವರಿಬ್ಬರೂ ಹಲವು ಪ್ರಶಸ್ತಿ ಗೆದ್ದು, ಏಷ್ಯಾಡ್‌ನ‌ಲ್ಲಿ ಚಿನ್ನದ ಮೇಲೆ ಕಣ್ಣಿಟ್ಟಿದ್ದಾರೆ.

ಕ್ರಿಕೆಟ್‌ನಲ್ಲಿ ಎರಡು ಚಿನ್ನ?
ಭಾರತದ ಪುರುಷರ ಮತ್ತು ಮಹಿಳಾ ಕ್ರಿಕೆಟ್‌ ತಂಡಗಳು ಏಷ್ಯಾಡ್‌ ಪ್ರವೇಶಿಸಿವೆ. ಸದ್ಯದಲ್ಲೇ ವಿಶ್ವಕಪ್‌ ಇರುವುದರಿಂದ ಪುರುಷರ ತೃತೀಯ ದರ್ಜೆಯ ತಂಡ ಏಷ್ಯನ್‌ ಗೇಮ್ಸ್‌ನಲ್ಲಿ ಕಣಕ್ಕಿಳಿದಿದೆ. ಹಾಗೆಂದು ಈ ತಂಡವನ್ನು ಅವಗಣಿಸಲು ಸಾಧ್ಯವೇ ಇಲ್ಲ. ಋತುರಾಜ್‌ ಗಾಯಕ್ವಾಡ್‌, ಯಶಸ್ವಿ ಜೈಸ್ವಾಲ್‌, ವಾಷಿಂಗ್ಟನ್‌ ಸುಂದರ್‌, ಅರ್ಷದೀಪ್‌ ಸಿಂಗ್‌ ಇರುವ ಭಾರತ ತಂಡ ಪ್ರತಿಭಾವಂತರಿಂದ ತುಂಬಿಕೊಂಡಿದೆ. ಇನ್ನು ಮಹಿಳಾ ತಂಡ ಹರ್ಮನ್‌ಪ್ರೀತ್‌ ಕೌರ್‌ ನೇತೃತ್ವದಲ್ಲಿ ಪೂರ್ಣಪ್ರಮಾಣದಲ್ಲೇ ಸಿದ್ಧವಾಗಿದೆ. ಈ ಎರಡೂ ತಂಡಗಳು ಚಿನ್ನ ಗೆಲ್ಲುವ ಪ್ರಬಲ ಸಾಧ್ಯತೆಯಿದೆ.

ತೇಜಿಂದರ್‌ ತೂರ್‌
2018ರ ಏಷ್ಯಾಡ್‌ನ‌ಲ್ಲಿ ತೇಜಿಂದರ್‌ ಪಾಲ್‌ ಸಿಂಗ್‌ ತೂರ್‌ ಶಾಟ್‌ಪುಟ್‌ನಲ್ಲಿ ಚಿನ್ನ ಗೆದ್ದಿದ್ದರು. ಈ ಬಾರಿಯೂ ಗೆಲ್ಲುತ್ತಾರೆ ಎಂದು ಭರವಸೆಯಿಂದ ಹೇಳಬಹುದು. ಏಷ್ಯಾ ಮಟ್ಟದಲ್ಲಿ ವೈಯಕ್ತಿಕ ದಾಖಲೆಯನ್ನು ಹೊಂದಿರುವ ವರ್ತಮಾನದ ಏಕೈಕ ಭಾರತೀಯ ಸ್ಪರ್ಧಿ ಇವರು. ಆದರೆ ಸತತವಾಗಿ ಗಾಯಗೊಳ್ಳುವುದೊಂದು ಇವರು ಎದುರಿಸುತ್ತಿರುವ ಸಮಸ್ಯೆ. ಅದೊಂದನ್ನು ಎಚ್ಚರಿಕೆಯಿಂದ ನಿಭಾಯಿಸಬೇಕಿದೆ

ಅವಿನಾಶ್‌ ಸಾಬಲೆ
3000 ಮೀ. ಸ್ಟೀಪಲ್‌ ಚೇಸ್‌ ಓಟದಲ್ಲಿ ಅವಿನಾಶ್‌ ಸಾಬಲೆ ಪದಕ ಗೆಲ್ಲುವ ಭರವಸೆಯಿದೆ. 2022ರ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಅವರು ಬೆಳ್ಳಿ ಗೆದ್ದಿದ್ದರು. ಈ ವಿಭಾಗದಲ್ಲಿ ಅವರು ರಾಷ್ಟ್ರೀಯ ದಾಖಲೆಯನ್ನು ಹೊಂದಿದ್ದಾರೆ. ಈ ಋತುವಿನಲ್ಲಿ ಅವರು 8:11:63 ನಿಮಿಷಗಳ ಸಾಧನೆ ಮಾಡಿದ್ದಾರೆ. ಇದು ಸದ್ಯ ಏಷ್ಯಾ ಮಟ್ಟದಲ್ಲಿ 2ನೇ ಶ್ರೇಷ್ಠ ಸಾಧನೆ.

ಕಳೆದ ವರ್ಷವೇ ನಡೆಯಬೇಕಿತ್ತು
ಈ ಬಾರಿ ಚೀನದ ಹ್ಯಾಂಗ್‌ಝೂನಲ್ಲಿ ನಡೆಯುತ್ತಿರುವ ಏಷ್ಯಾಡ್‌ ಕಳೆದ ವರ್ಷವೇ ನಡೆಯಬೇಕಿತ್ತು. ಆ ವರ್ಷ ಸೆ.10ರಿಂದ 25ರ ವರೆಗೆ ನಡೆಯಬೇಕಿದ್ದ ಕೂಟ ಕೊರೊನಾ ಕಾರಣದಿಂದ ಈ ವರ್ಷಕ್ಕೆ ಮುಂದೂಡಲ್ಪಟ್ಟಿತ್ತು. 2020ರಲ್ಲಿ ನಡೆಯಬೇಕಿದ್ದ ಒಲಿಂಪಿಕ್ಸ್‌ 2021ಕ್ಕೆ ಮುಂದೂಡಲ್ಪಟ್ಟಿದ್ದನ್ನು ಇಲ್ಲಿ ಗಮನಿಸಬಹುದು. ತೀವ್ರ ಕೊರೊನಾ ಸಂಕಟದ ನಡುವೆಯೇ ಜಪಾನ್‌ ಒಲಿಂಪಿಕ್ಸ್‌ ಅನ್ನು ಯಶಸ್ವಿಯಾಗಿ ನಡೆಸಿತ್ತು.

ವಿಶ್ವದಲ್ಲೇ ಎರಡನೇ ಬೃಹತ್‌ ಬಹು ಕ್ರೀಡಾಕೂಟ
ಬಹುಕ್ರೀಡಾ ಕೂಟಗಳನ್ನು ತೆಗೆದುಕೊಂಡರೆ ವಿಶ್ವದಲ್ಲೇ 2ನೇ ದೊಡ್ಡ ಸ್ಥಾನ ಪಡೆಯುವುದು ಏಷ್ಯನ್‌ ಗೇಮ್ಸ್‌. ಒಲಿಂಪಿಕ್ಸ್‌ಗೆ ಮೊದಲನೇ ಸ್ಥಾನ. ವಾಸ್ತವವಾಗಿ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ 70ಕ್ಕೂ ಅಧಿಕ ದೇಶಗಳು ಭಾಗವಹಿಸುತ್ತವೆ. ಏಷ್ಯಾಡ್‌ನ‌ಲ್ಲಿ ಪಾಲ್ಗೊಳ್ಳುವುದು 45 ದೇಶಗಳು ಮಾತ್ರ. ಆದರೂ ಏಷ್ಯಾಡ್‌ಗೆ 2ನೇ ಬೃಹತ್‌ ಕೂಟದ ಸ್ಥಾನಕ್ಕೆ ಸಿಕ್ಕಿರುವುದಕ್ಕೆ ಕಾರಣ ಇಲ್ಲಿ ನಡೆಯುವ ಸ್ಪರ್ಧೆಗಳ ಪ್ರಮಾಣ ಜಾಸ್ತಿಯಿರುವುದು. ಜತೆಗೆ ಕಡಿಮೆ ರಾಷ್ಟ್ರಗಳಿದ್ದರೂ ಕಾಮನ್‌ವೆಲ್ತ್‌ಗೆ ಸರಿಸಮನಾಗಿ ಸ್ಪರ್ಧಿಗಳಿರುತ್ತಾರೆ.

ಮಾಹಿತಿ: ಕೆ.ಪೃಥ್ವಿಜಿತ್‌

ಟಾಪ್ ನ್ಯೂಸ್

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.