ಕರಾವಳಿಯಾದ್ಯಂತ ವಿಶೇಷ ಬಲಿಪೂಜೆ, ಕ್ರಿಸ್ಮಸ್ ಸಂಭ್ರಮದ ಆಚರಣೆ
Team Udayavani, Dec 25, 2021, 6:35 AM IST
ಮಂಗಳೂರು/ಉಡುಪಿ: ಕೊರೊನಾ ಭೀತಿಯ ನಡುವೆಯೂ ಏಸು ಕ್ರಿಸ್ತರ ಜನ್ಮದಿನವಾದ ಕ್ರಿಸ್ಮಸ್ ಹಬ್ಬವನ್ನು ಕ್ರೈಸ್ತ ಬಾಂಧವರು ಕರಾವಳಿಯಾದ್ಯಂತ ಶುಕ್ರವಾರ ರಾತ್ರಿ ಭಕ್ತಿ, ಶ್ರದ್ಧೆ, ಸಂಭ್ರಮ ಸಡಗರದಿಂದ ಆಚರಿಸಿದರು.
ದ.ಕ. ಜಿಲ್ಲೆಯ ಚರ್ಚ್ಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಚರ್ಚ್ ಆವರಣದಲ್ಲಿ ಮತ್ತು ಕ್ರೈಸ್ತರ ಮನೆ ಆವರಣದಲ್ಲಿ ಆಕರ್ಷಕ ಕ್ರಿಬ್ಗಳನ್ನು (ಗೋದಲಿ) ನಿರ್ಮಿಸಲಾಗಿತ್ತು, ನಕ್ಷತ್ರಗಳನ್ನು ಜೋಡಿಸಲಾಗಿತ್ತು.
ಚರ್ಚ್ಗಳಲ್ಲಿ ರಾತ್ರಿ ವೇಳೆ ಜರಗಿದ ವಿಶೇಷ ಪ್ರಾರ್ಥನೆಗಳಲ್ಲಿ ಕ್ರೈಸ್ತರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಕ್ರಿಸ್ಮಸ್ ಗೀತೆಗಳನ್ನು (ಕ್ಯಾರಲ್ಸ್) ಹಾಡಿ ಯೇಸು ಕ್ರಿಸ್ತರ ಜನನವನ್ನು ಸ್ಮರಿಸಿ ಯೇಸು ಕಂದನಿಗೆ ನಮಿಸಿದರು.
ಮಂಗಳೂರು ಧರ್ಮ ಪ್ರಾಂತದ ಬಿಷಪ್ ರೈ| ರೆ| ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಮೂಡುಬಿದಿರೆ ತಾಲೂಕಿನ ನೆಲ್ಲಿಕಾರು ಸೈಂಟ್ ವಿಕ್ಟರ್ ಚರ್ಚ್ನಲ್ಲಿ ಕ್ರಿಸ್ಮಸ್ ಹಬ್ಬದ ಬಲಿ ಪೂಜೆ ಅರ್ಪಿಸಿ ಸಂದೇಶ ನೀಡಿದರು. ಚರ್ಚ್ನ ಧರ್ಮಗುರು ವಂ| ಮೆಲ್ವಿನ್ ಜಾನ್ ಡಿ’ಸೋಜಾ, ಉಪಾಧ್ಯಕ್ಷರಾದ ಲಿಲ್ಲಿ ಫೆರ್ನಾಂಡಿಸ್, ಕಾರ್ಯದರ್ಶಿ ಹೆಲೆನ್ ಡಿ’ಸೋಜಾ ಉಪಸ್ಥಿತರಿದ್ದರು.
ಬಲಿ ಪೂಜೆಯ ಬಳಿಕ ಕ್ರೈಸ್ತರು ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಇದೇ ಸಂದರ್ಭ ಕೇಕ್ ವಿತರಿಸಲಾಯಿತು. ಮಂಗಳೂರು ಧರ್ಮ ಪ್ರಾಂತದ ಪ್ರಧಾನ ಗುರು ಮೊ| ಮ್ಯಾಕ್ಸಿಂ ಎಲ್. ನೊರೊನ್ಹಾ ಅವರು ಕಿನ್ನಿಗೋಳಿ ಚರ್ಚ್ನಲ್ಲಿ ನಡೆದ ಬಲಿಪೂಜೆಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ:ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್ಗೆ ತಲೆಬಾಗಿದ ತಮಿಳ್ ತಲೈವಾಸ್
ಕೊರೊನಾ ರೂಪಾಂತರಿತ ವೈರಸ್ ಒಮಿಕ್ರಾನ್ ಆತಂಕದ ಹಿನ್ನೆಲೆಯಲ್ಲಿ ಸರಕಾರದ ಮಾರ್ಗಸೂಚಿ ಪಾಲಿಸಿ ಕಾರ್ಯಕ್ರಮಗಳು ನಡೆದವು.
ಶನಿವಾರ ಕ್ರಿಸ್ಮಸ್ ಹಬ್ಬದ ಆಚರಣೆ ನಡೆಯಲಿದೆ. ಚರ್ಚ್ಗಳಲ್ಲಿ ಹಬ್ಬದ ಬಲಿ ಪೂಜೆ, ಶುಭಾಶಯಗಳ ವಿನಿಮಯ ನಡೆಯುವುದು. ಮನೆಗಳಲ್ಲಿ ಕ್ರಿಸ್ಮಸ್ ವಿಶೇಷ ತಿಂಡಿ ತಿನಿಸು “ಕುಸ್ವಾರ್’ ವಿನಿಮಯ ಮತ್ತು ಹಬ್ಬದ ಭೋಜನದೊಂದಿಗೆ ಹಬ್ಬದ ಸಂಭ್ರಮ ನೆರವೇರಲಿದೆ.