17 ರಿಂದ ನಾಲ್ಕು ದಿನಗಳ ಕೃಷಿ ಹಬ್ಬ; 10 ಲಕ್ಷ ಜನ ಭಾಗಿಯಾಗುವ ನಿರೀಕ್ಷೆ
2 ವರ್ಷಗಳ ಬಳಿಕ ರೈತರ ಮೇಳ ; ಬೀಜ ಮೇಳ ಮೂಲಕ ಚಾಲನೆ
Team Udayavani, Sep 15, 2022, 12:57 PM IST
ಧಾರವಾಡ: ಕೊರೊನಾ ಮಹಾಮಾರಿಯಿಂದಾಗಿ ಕಳೆದೆರಡು ವರ್ಷಗಳಿಂದ ಕೈ ಬಿಟ್ಟಿದ್ದ ಪ್ರತಿಷ್ಠಿತ ಧಾರವಾಡ ಕೃಷಿ ವಿವಿ ನಡೆಸುವ ಧಾರವಾಡ ಕೃಷಿ ಮೇಳವನ್ನು ಸೆ.17ರಿಂದ ಸೆ.20ರವರೆಗೆ ನಡೆಸಲು ಕೃಷಿ ವಿಶ್ವವಿದ್ಯಾಲಯ ತೀರ್ಮಾನಿಸಿದೆ.
ನಾಲ್ಕು ದಿನಗಳವರೆಗೆ ನಡೆಯುವ ಈ ವರ್ಷದ ಕೃಷಿ ಮೇಳವನ್ನು “ರೈತರ ಆದಾಯ ದ್ವಿಗುಣಗೊಳಿಸಲು ಕೃಷಿ ತಾಂತ್ರಿಕತೆಗಳು’ ಎಂಬ ಶೀರ್ಷಿಕೆಯಡಿಯಲ್ಲಿ ಆಯೋಜಿಸಲಾಗಿದ್ದು, ಶನಿವಾರವೇ ಬೀಜ ಮೇಳದ ಮೂಲಕ ರೈತರ ಹಬ್ಬಕ್ಕೆ ಚಾಲನೆ ದೊರೆಯಲಿದೆ. ಕಳೆದ 2-3 ವರ್ಷಗಳಿಂದ ನೆರೆ ಹಾವಳಿ, ಕೋವಿಡ್-19 ಹೊಡೆತದಿಂದ ಮುಂದೂಡುತ್ತ ರದ್ದಾಗಿದ್ದ ಕೃಷಿ ಮೇಳವು ಈ ಸಲ ರಂಗೇರಿದ್ದು, ಮೇಳಕ್ಕಾಗಿ ಈಗಾಗಲೇ ತಯಾರಿ ಅಂತಿಮ ರೂಪ ಪಡೆದಿದೆ. ವಿವಿ ಆವರಣದಲ್ಲಿ ಮಳಿಗೆಗಳ ನಿರ್ಮಾಣ ಕಾರ್ಯ ಮುಗಿದಿದ್ದು, ಮುಖ್ಯ ವೇದಿಕೆ ಸಿದ್ಧಪಡಿಸುವ ಕಾರ್ಯ ಸಾಗಿದೆ.
ನಾಲ್ಕು ದಿನಗಳ ಈ ಮೇಳದಲ್ಲಿ ಸುಮಾರು 10 ಲಕ್ಷ ರೈತರು ಭಾಗವಹಿಸುವ ನಿರೀಕ್ಷೆಯಿದ್ದು, ಕೃಷಿ ಹಾಗೂ ಕೃಷಿ ಪೂರಕ ತಂತ್ರಜ್ಞಾನಗಳೊಂದಿಗೆ ಬೀಜ ಮೇಳ-ಮತ್ಸ್ಯ ಮೇಳವೂ ಇರಲಿದೆ. ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಆವರಣಗಳಲ್ಲಿ ಕೈಗೊಂಡ ಬೋಧನೆ, ಸಂಶೋಧನೆ, ವಿಸ್ತರಣಾ ಚಟುವಟಿಕೆಗಳ ಸಮಗ್ರ ಮಾಹಿತಿ ಮೇಳದಲ್ಲಿ ಸಿಗಲಿದೆ. ಇದಲ್ಲದೇ ವಿಶ್ವವಿದ್ಯಾಲಯದಿಂದ ಬಿಡುಗಡೆಯಾದ ಮತ್ತು ಬಿಡುಗಡೆಯ ಹಂತದಲ್ಲಿರುವ ತಂತ್ರಜ್ಞಾನಗಳ ಬಗ್ಗೆ ರೈತರಿಗೆ ಕ್ಷೇತ್ರ ಪ್ರಯೋಗ ಹಾಗೂ ವಿವಿಧ ಪ್ರಾತ್ಯಕ್ಷಿಕೆಗಳ ಮೂಲಕ ಮನದಟ್ಟಾಗುವ ರೀತಿಯಲ್ಲಿ ನಿಯೋಜಿಸಲಾಗಿದೆ.
ಹೈಟೆಕ್ ಮಳಿಗೆಗಳು ಸಿದ್ಧ: ಕೃಷಿ ವಸ್ತು ಪ್ರದರ್ಶನದಲ್ಲಿ 184 ಹೈಟೆಕ್ ಮಳಿಗೆಗಳು, 364 ಸಾಮಾನ್ಯ ಮಳಿಗೆಗಳು, 21 ಯಂತ್ರೋಪಕರಣ ಮಳಿಗೆಗಳು, 27 ಆಹಾರ ಮಳಿಗೆಗಳು, 54 ಜಾನುವಾರು ಪ್ರದರ್ಶನ ಮಳಿಗೆಗಳು, 9 ಕ್ಷೇತ್ರ ಮಳಿಗೆಗಳ ವ್ಯವಸ್ಥೆ ಮಾಡಲಾಗಿದೆ. ರೈತರಿಗೆ ಕ್ಷೇತ್ರ ವೀಕ್ಷಣೆಗಾಗಿ ಕೃಷಿ ಮಹಾವಿದ್ಯಾಲಯ ಮುಖ್ಯ ಕಟ್ಟಡದಿಂದ ಪ್ರತಿ 15 ನಿಮಿಷಕ್ಕೆ ವಾಹನದ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೇ ವಿಮಾ ವ್ಯಾಪ್ತಿಗೆ ಕೃಷಿ ಮೇಳದ ಆವರಣ ಒಳಪಡಿಸಲಾಗಿದ್ದು, ಸನ್ನದ್ಧ ಸ್ಥಿತಿಯಲ್ಲಿರುವ ಅಗ್ನಿಶಾಮಕ ವಾಹನ ಇರಲಿದೆ. ಮೊಬೈಲ್ ಎಟಿಎಂ ವಾಹನಗಳು, ಕ್ಷೇತ್ರ ಪ್ರಾತ್ಯಕ್ಷಿಕೆಗಳಿಗೆ ಭೇಟಿ, ಉಚಿತ ವೈದ್ಯಕೀಯ ಸಲಹಾ ಕೇಂದ್ರ, ಸಾರಿಗೆ ನಿರ್ವಹಣಾ ವ್ಯವಸ್ಥೆ, ಪೊಲೀಸ್ ಸಹಾಯ ಕೇಂದ್ರಗಳು ಇರಲಿವೆ.
ಮಳೆ ನೀರು ಕೊಯ್ಲು ಮತ್ತು ಅಂತರ್ಜಲ ಮರುಪೂರಣ, ಅಧಿಕ ಇಳುವರಿ ಮತ್ತು ನೀರಿನ ಉಳಿತಾಯಕ್ಕಾಗಿ ಸುಧಾರಿತ ನೀರಾವರಿ ಪದ್ಧತಿಗಳು, ಸಂಪನ್ಮೂಲ ಸಂರಕ್ಷಣೆಗಾಗಿ ಸಮಗ್ರ ಜಲಾನಯನ ಅಭಿವೃದ್ಧಿ, ಸಮಗ್ರ ಬೆಳೆ, ಪೋಷಕಾಂಶ, ಪೀಡೆಗಳ ನಿರ್ವಹಣೆ, ಕೃಷಿಯಲ್ಲಿ ಜೈವಿಕ ಹಾಗೂ ನ್ಯಾನೋ ತಂತ್ರಜ್ಞಾನಗಳ ಬಳಕೆ, ದ್ವಿದಳ ಧಾನ್ಯಗಳ ಉತ್ಪಾದನೆ, ಮೌಲ್ಯವರ್ಧನೆ, ಹೈಟೆಕ್ ತೋಟಗಾರಿಕೆ, ಮಣ್ಣು ರಹಿತ ಬೇಸಾಯ, ಸುಗಂಧ ಮತ್ತು ಔಷಧ ಬೆಳೆಗಳು, ಫಲ-ಪುಷ್ಪಗಳ ಪ್ರದರ್ಶನ, ಅಲಂಕಾರಿಕ ಮೀನು ಸಾಕಾಣಿಕೆ, ಮತ್ಸ್ಯ ಸಸ್ಯ ಸಂಗಮ, ಮೀನು ಮತ್ತು ಸಿಗಡಿ ಸಾಕಣೆ ಹಾಗೂ ಅಲಂಕಾರಿಕ ಮೀನುಗಳ ಪ್ರದರ್ಶನ ಮೇಳದಲ್ಲಿ ಗಮನ ಸೆಳೆಯಲಿದೆ.
ಬೀಜದ ಜತೆಗೆ ಜೈವಿಕ ಗೊಬ್ಬರ:ಮೇಳದಲ್ಲಿ 333 ಕ್ವಿಂಟಲ್ ಹಿಂಗಾರಿ ಜೋಳ, 344 ಕ್ವಿಂಟಲ್ ಗೋಧಿ, 1445 ಕ್ವಿಂಟಲ್ ಕಡಲೆ, 39 ಕ್ವಿಂಟಲ್ ಕುಸುಬೆ ಮತ್ತು 1 ಕ್ವಿಂಟಲ್ ಸಾಸಿವೆ ಒಟ್ಟು 2161 ಕ್ವಿಂಟಲ್ ಬೀಜ ಪ್ರಸಕ್ತ ಕೃಷಿ ಮೇಳದಲ್ಲಿ ಮಾರಾಟಕ್ಕೆ ಲಭ್ಯವಿದೆ. ಇದಲ್ಲದೇ ವಿಶ್ವವಿದ್ಯಾಲಯಕ್ಕೆ ಪ್ರಪ್ರಥಮ ಬಾರಿಗೆ ಜೈವಿಕ ಕೃಷಿ ಪರಿಕರಗಳ ಉತ್ಪನ್ನ ಹಾಗೂ ಮಾರಾಟಕ್ಕೆ ಪರವಾನಗಿ ಪತ್ರ ದೊರೆತಿದೆ. ಈ ಹಿನ್ನೆಲೆಯಲ್ಲಿ 847 ಕೆಜಿ ವಿವಿಧ ಪ್ರಕಾರದ ಜೈವಿಕ ಗೊಬ್ಬರಗಳ ಪುಡಿ, 410 ಲೀಟರ್ ವಿವಿಧ ಪ್ರಕಾರದ ಜೈವಿಕ ಗೊಬ್ಬರದ ದ್ರವಗಳು ಪ್ರಸಕ್ತ ಕೃಷಿ ಮೇಳದಲ್ಲಿ ಮಾರಾಟಕ್ಕೆ ಲಭ್ಯವಿದೆ.
ಕಾಡುತ್ತಿದೆ ಮಳೆ ಆತಂಕ
ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಅಬ್ಬರ, ನೆರೆ ಹಾವಳಿ ಮುಂದುವರಿದಿದ್ದು, ಬೆಳಗಾವಿ, ವಿಜಯಪುರ, ಬಾಗಲಕೋಟೆ ಸೇರಿದಂತೆ ಸುತ್ತಲಿನ ಜಿಲ್ಲೆಗಳಲ್ಲಿ ಕಳೆದ ಒಂದು ವಾರದಿಂದ ವರುಣಾರ್ಭಟ ಸಾಗಿದೆ. ಇದರ ಮಧ್ಯೆಯೇ ಕೃಷಿ ಮೇಳಕ್ಕೆ ವೇದಿಕೆ ಸಜ್ಜಾಗಿದ್ದು, ವರುಣ ದೇವನ ಕೃಪೆ ಕಾದು ನೋಡಬೇಕಿದೆ. ಉತ್ತರ ಕರ್ನಾಟಕ ಭಾಗ ಸೇರಿದಂತೆ ಧಾರವಾಡ ಜಿಲ್ಲೆಯಲ್ಲೂ ವಾಡಿಕೆಗಿಂತ ಅಧಿಕ ಮಳೆಯಾಗಿದ್ದು, ಬೆಳೆ ನಷ್ಟದಿಂದ ರೈತರು ಸಂಕಷ್ಟದಲ್ಲಿದ್ದಾರೆ. ಇದಲ್ಲದೇ ಮೇಳದ ಸಮಯದಲ್ಲಿಯೇ ಮಳೆಯ ಮುನ್ಸೂಚನೆ ಇರುವ ಕಾರಣ ಮಳೆಯ ಆತಂಕವಿದ್ದು, ರೈತರ ಸಂಖ್ಯೆಯಲ್ಲಿ ಇಳಿಮುಖ ಆಗುವ ಸಾಧ್ಯತೆ ಇದೆ.
ಈ ಬಾರಿ ದನಕರುಗಳಿಗೆ ಅವಕಾಶ ಇಲ್ಲ
ಕೃಷಿ ವಿಶ್ವವಿದ್ಯಾಲಯ ವ್ಯಾಪ್ತಿಯ 7 ಜಿಲ್ಲೆಗಳಿಂದ 2021-22ನೇ ಸಾಲಿಗೆ ಆಯ್ಕೆಯಾದ ಶ್ರೇಷ್ಠ ಕೃಷಿಕ ಮತ್ತು ಶ್ರೇಷ್ಠ ಕೃಷಿ ಮಹಿಳೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, ಇದೇ ಮೊದಲ ಬಾರಿ ಮೇಳದಲ್ಲಿ ನೀಡುತ್ತಿದ್ದ ತಾಲೂಕುವಾರು ಯುವ ಕೃಷಿಕ ಹಾಗೂ ಮಹಿಳೆ ಪ್ರಶಸ್ತಿಯನ್ನು ಈ ಸಲ ಕೈಬಿಡಲಾಗಿದೆ. ಇನ್ನು ಇದೇ ಮೊದಲ ಬಾರಿಗೆ ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ಜಾನುವಾರು ಪ್ರದರ್ಶನದಲ್ಲಿ ದನಕರುಗಳಿಗೆ ಅವಕಾಶ ನೀಡಿಲ್ಲ. ಶ್ವಾನ ಸೇರಿದಂತೆ ಬರೀ ಸಾಕು ಪ್ರಾಣಿಗಳಿಗಷ್ಟೇ ಅವಕಾಶ ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ
ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ
Loksabha; ಧಾರವಾಡ ಕ್ಷೇತ್ರದ ಅಭ್ಯರ್ಥಿ ಬದಲಾವಣೆಯಿಲ್ಲ: ಯಡಿಯೂರಪ್ಪ ಸ್ಪಷ್ಟನೆ
Pralhad Joshi; ಧಾರವಾಡದ ಬಿಜೆಪಿ ಅಭ್ಯರ್ಥಿ ಬದಲಿಸಬೇಕು: ದಿಂಗಾಲೇಶ್ವರ ಸ್ವಾಮೀಜಿ
Kannada; ಹಿರಿಯ ಸಾಹಿತಿ ಡಾ.ಗುರುಲಿಂಗ ಕಾಪಸೆ ಇನ್ನಿಲ್ಲ: ದೇಹ ದಾನ
MUST WATCH
ಹೊಸ ಸೇರ್ಪಡೆ
Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು
ಸಂಸದ ಡಿ.ಕೆ.ಸುರೇಶ್ ಆಸ್ತಿ ಮೌಲ್ಯ 593 ಕೋಟಿ ರೂ.!
IPL; ಇಂದು ಚಿನ್ನಸ್ವಾಮಿಯಲ್ಲಿ ಆರ್ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?
Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್
Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ