ರಾಜ್ಯಕ್ಕೆ ಕೇಂದ್ರ ಕೊಟ್ಟಿದ್ದೆಷ್ಟು ಮೋದಿ ಅವರೇ: ಎಚ್ಡಿಕೆ ಪ್ರಶ್ನೆ
Team Udayavani, Feb 11, 2023, 10:35 PM IST
ಬೆಂಗಳೂರು: ಜಿಎಸ್ಟಿ ಸೇರಿ ರಾಜ್ಯದಿಂದ ಕೇಂದ್ರ ಸರಕಾರದ ಬೊಕ್ಕಸಕ್ಕೆ ತೆರಿಗೆ ಹಣ ಹರಿದು ಹೋಗುತ್ತಿದ್ದರೂ ರಾಜ್ಯಕ್ಕೆ ಕೊಟ್ಟಿದ್ದು ಎಷ್ಟು ಎಂಬುದು ರಾಜ್ಯಕ್ಕೆ ಬಂದಾಗ ಲೆಕ್ಕ ಕೊಡಿ ಮೋದಿ ಅವರೇ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.
ಕೇಂದ್ರ ಸರಕಾರದ ಪಾಲಿಗೆ ಕರ್ನಾಟಕವು ಕಾಮಧೇನು. ಅದರ ಖಜಾನೆ ತುಂಬುವಲ್ಲಿ ನಮ್ಮದು ದೊಡ್ಡ ಪಾಲಿದೆ. ದುರದೃಷ್ಟವಶಾತ್, ದೇಶದ ಪ್ರಮುಖ ಆರ್ಥಿಕ ಶಕ್ತಿಯಾಗಿ ಬೆಳೆದಿರುವ ರಾಜ್ಯಕ್ಕೆ ತೆರಿಗೆ, ಜಿಎಸ್ಟಿಯಲ್ಲಿ ಸಮರ್ಪಕ ಪಾಲು ಸಿಗುವುದಿಲ್ಲ. ನಮ್ಮ ದುಡಿಮೆಯ ಶ್ರಮ ಉತ್ತರದ ರಾಜ್ಯಗಳಿಗೆ ಹರಿದು ಹೋಗುತ್ತಿದೆ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ದಾಖಲೆಗಳ ಪ್ರಕಾರ ಉತ್ತರ ಪ್ರದೇಶ ಮತ್ತು ಗುಜರಾತ್ ರಾಜ್ಯಗಳಲ್ಲಿ ಕ್ರಮವಾಗಿ 1,24,039 ಹಾಗೂ 1,14,437 ಕೋ. ರೂ. ಮೂಲಸೌಕರ್ಯ ಯೋಜನೆಗಳಿಗಾಗಿ ಒಕ್ಕೂಟ ಸರಕಾರ ನೀಡುತ್ತಿದೆ. ಕರ್ನಾಟಕಕ್ಕೆ ಮಾತ್ರ ಕೇವಲ 84,584 ಕೋ. ರೂ. ನೀಡಲಾಗುತ್ತಿದೆ. ಕಣ್ಣಿಗೆ ರಾಚುವ ತಾರತಮ್ಯವಲ್ಲವೆ ಇದು ಎಂದಿದ್ದಾರೆ.