ಸೋಂಕಿತರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸಲು ಗವಿಮಠ ಆಸ್ಪತ್ರೆಯಲ್ಲಿ ಭಜನೆ!
Team Udayavani, Jun 3, 2021, 7:15 PM IST
ಕೊಪ್ಪಳ: ಕೊರೊನಾ ಸೋಂಕಿತರ ಆರೈಕೆಯಲ್ಲಿ ಎಲ್ಲರಿಗಿಂತ ವಿಭಿನ್ನ ಎಂದೆನಿಸಿರುವ ಕೊಪ್ಪಳದ ಗವಿಮಠ ಕೋವಿಡ್ ಆಸ್ಪತ್ರೆಯು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಆಸ್ಪತ್ರೆಯಲ್ಲಿ ಭಜನಾ ಪದ ಪ್ರಸ್ತುತ ಪಡಿಸಿ ಸೋಂಕಿತರ ಆತ್ಮಸ್ಥೈರ್ಯ
ಹೆಚ್ಚಿಸುವ ಕೆಲಸ ಮಾಡಿದೆ. ವಿವಿಧ ಹಾಡುಗಳಿಗೆ ಸೋಂಕಿತರು ಭಜನೆ ಮಾಡುವ ಮೂಲಕ ಗವಿಸಿದ್ದೇಶ್ವರರನ್ನು ನೆನೆದಿದ್ದಾರೆ.
ಗವಿಮಠವು ಸೋಂಕಿತರ ಆರೈಕೆಗಾಗಿ ಹಗಲು-ರಾತ್ರಿ ಎನ್ನದೇ ಶ್ರಮಿಸುತಿದೆ. ಆಸ್ಪತ್ರೆಗೆ ದಾಖಲಾಗುವ ಯಾರೊಬ್ಬರೂ ಮಾನಸಿಕ
ಒತ್ತಡಕ್ಕೆ ಒಳಗಾಗಬಾರದು ಎಂಬ ಉದ್ದೇಶದಿಂದ ಅವರೆಲ್ಲರೂ ಕ್ರಿಯಾತ್ಮಕವಾಗಿ ಚಿಕಿತ್ಸೆ ಪಡೆಯಲು, ಮಾನಸಿಕ ಸ್ಥೆ çರ್ಯವನ್ನು ಹೆಚ್ಚಿಸಲು ವಿಭಿನ್ನ ಚಟುವಟಿಕೆ ಮೂಲಕ ಗವಿಸಿದ್ದೇಶ್ವರ ಸ್ವಾಮಿಗಳು ಎಲ್ಲರ ಗಮನ ಸೆಳೆದಿದ್ದಾರೆ.
ಸೋಂಕಿತರಿಗೆ ವಾಲಿಬಾಲ್, ರಿಂಗ್, ಕೇರಂ, ಚೆಸ್ ಆಟ ಆಡಿಸುವ ಮೂಲಕ ತಮಗೆ ಯಾವುದೇ ಸೋಂಕು ಇಲ್ಲ ನಾವು ಗವಿಮಠದ ನೆಲದಲ್ಲಿದ್ದೇವೆ. ಪುಣ್ಯದ ಸ್ಥಳದಲ್ಲಿದ್ದೇವೆ. ನಾವು ಅಧ್ಯಾತ್ಮ ಕೇಂದ್ರದಲ್ಲಿದ್ದೇವೆ ಎನ್ನವು ರೀತಿ ಮನಸ್ಸನ್ನು
ಕೇಂದ್ರೀಕರಿಸಲು ಶ್ರೀಗಳು ಮುಂದಾಗಿದ್ದಾರೆ.
ಇದನ್ನೂ ಓದಿ :ಕೋವಿಡ್ ನಿಂದ ಸಾವನ್ನಪ್ಪಿದ ವ್ಯಕ್ತಿಯ ಕುಟುಂಬಸ್ಥರಿಗೆ 2 ಲಕ್ಷ ರೂ. ಸಹಾಯಧನ ಘೋಷಿಸಿದ ಸರ್ಕಾರ
ಇದರೊಟ್ಟಿಗೆ ಆಸ್ಪತ್ರೆಯಲ್ಲಿ ನಿತ್ಯವು ಗಾನಸುಧೆ, ಯೋಗ, ಧ್ಯಾನ, ಅಧ್ಯಾತ್ಮ ಕಾರ್ಯಕ್ರಮಗಳು ನಡೆಯುತ್ತಿವೆ. ಇದರೊಟ್ಟಿಗೆ ಮಂಗಳವಾರ ಸಂಜೆ ಆಸ್ಪತ್ರೆಯಲ್ಲಿ ವಿವಿಧ ಗೀತೆಗಳ ಧ್ವನಿಸುರಳಿ ಪ್ರಸಾರ ಮಾಡುವ ಮೂಲಕ ಸೋಂಕಿತರು ಇದರಲ್ಲಿ ತೊಡಗಿ ಕೈ, ಕೈ, ತಟ್ಟಿ ತಾಳ ಹಾಕುವ ಮೂಲಕ ಗವಿಸಿದ್ದೇಶ್ವರರ ಸ್ಮರಣೆ ಮಾಡಿ ಸೋಂಕು ನಮ್ಮಿಂದ ದೂರವಾಗಲಿ ಎಂದು ಪ್ರಾರ್ಥಿಸಿದ್ದಾರೆ.
ಇದರಿಂದ ಅವರ ಮಾನಸಿಕ ಸ್ಥೈರ್ಯವೂ ಹೆಚ್ಚಿ ಉತ್ತಮವಾಗಿಯೇ ಚಿಕಿತ್ಸೆ ಪಡೆದು ಬೇಗ ಗುಣಮುಖರಾಗುತ್ತಿದ್ದಾರೆ.