ಬಿಜೆಪಿ ಸರಕಾರ ಭ್ರಷ್ಟಾಚಾರದಲ್ಲಿ ನಂ. 1 : ಸತೀಶ್ ಜಾರಕಿಹೊಳಿ
Team Udayavani, Jan 18, 2021, 2:49 PM IST
ರಾಯಬಾಗ: ಬಿಜೆಪಿ ನೇತೃತ್ವದ ಈಗಿನ ರಾಜ್ಯ ಸರಕಾರ ಭ್ರಷ್ಟಾಚಾರದಲ್ಲಿ ಮುಳಗಿದ್ದು, ದೇಶದಲ್ಲಿ ನಂ.1 ಭ್ರಷ್ಟಾಚಾರ ಸರಕಾರ ಎನ್ನಿಸಿಕೊಂಡಿದೆ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ ಜಾರಕಿಹೊಳಿ ಟೀಕಿಸಿದರು.
ರವಿವಾರ ಪಟ್ಟಣ ಮಹಾವೀರ ಸಮುದಾಯ ಭವನದಲ್ಲಿ ಕಾಂಗ್ರೆಸ್ ಪಕ್ಷದಿಂದ ಏರ್ಪಡಿಸಿದ್ದ ರಾಯಬಾಗ ಮತ್ತು ಕುಡಚಿ ವಿಧಾನಸಭಾ ಮತಕ್ಷೇತ್ರದ ನೂತನ ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯತ ಸದಸ್ಯರ ಸತ್ಕಾರ ಸಮಾರಂಭವನ್ನು
ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ ಪಕ್ಷದ ಶಾಸಕರೇ ರಾಜಾರೋಷವಾಗಿ ತಮ್ಮ ಪಕ್ಷದಲ್ಲಿ ಸೂಟ್ಕೇಸ್ ಕೊಟ್ಟಿವರಿಗೆ ಮಂತ್ರಿ ಸ್ಥಾನ ದೊರಕುತ್ತದೆ ಎಂದು ಆಡಿಕೊಳ್ಳುತ್ತಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರ ಎಲ್ಲ ಕ್ಷೇತ್ರದಲ್ಲಿ ಎಡವಿದೆ. ರಾಜ್ಯದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ ಎಂದು ಟೀಕಿಸಿದರು. ಕೇಂದ್ರ ಮತ್ತು ರಾಜ್ಯ ಸರಕಾರಗಳು ರೈತರ ಹೆಸರಿನಲ್ಲಿ ಅಧಿ ಕಾರಕ್ಕೆ ಬಂದು, ಈಗ
ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದು ರೈತರನ್ನು ಬಲಿಪಶುವನ್ನಾಗಿ ಮಾಡುತ್ತಿವೆ ಎಂದು ಆರೋಪಿಸಿದರು.
ಮುಂಬರುವ ತಾ.ಪಂ., ಜಿ.ಪಂ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಕಾಂಗ್ರೆಸ್ ಪಕ್ಷ ಗೆಲ್ಲುವಂತೆ ಕಾರ್ಯಕರ್ತರು ಕೆಲಸ
ಮಾಡಬೇಕು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ ಎಂದರು. ಗ್ರಾ.ಪಂ ಸದಸ್ಯರು ಪ್ರಾಮಾಣಿಕವಾಗಿ
ಕೆಲಸ ಮಾಡಬೇಕೆಂದು ಸಲಹೆ ನೀಡಿದರು.
ಇದನ್ನೂ ಓದಿ:ಬಾಲಕನಿಗೆ ಹಾವು ಕಡಿತ: ಔಷಧಿ ಇಲ್ಲವೆಂದ ವೈದ್ಯರು, ಬಾಲಕ ಸಾವು
ಮಾಜಿ ಸಚಿವ ವೀರಕುಮಾರ ಪಾಟೀಲ, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ ಮಾತನಾಡಿದರು. ಮಾಜಿ ಶಾಸಕ ಎಸ್.ಬಿ.ಘಾಟಗೆ ಅಧ್ಯಕ್ಷತೆ ವಹಿಸಿದ್ದರು. ರಾಯಬಾಗ ಬ್ಲಾಕ್ ಕಾಂಗ್ರೆಸ್ ಕಮೀಟಿ ಅಧ್ಯಕ್ಷ ಈರಗೌಡ ಪಾಟೀಲ, ಚಿಕ್ಕೋಡಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಕಮೀಟಿ ಅಧ್ಯಕ್ಷೆ ತೇಜಸ್ವಿನಿ ನಾಯಿಕವಾಡಿ, ಕೆಆರ್ಡಿಸಿಎಲ್ ಮಾಜಿ ಉಪಾಧ್ಯಕ್ಷ
ಮಹಾವೀರ ಮೊಹಿತೆ, ಡಾ.ಎನ್.ಎ.ಮಗದುಮ್ಮ, ಸುನೀಲ ಹನುಮಣ್ಣವರ, ಸಂಜೀವಕುಮಾರ ಬಾನೆಸರಕಾರ, ರೇವಣ್ಣ ಸರವ, ಶಂಕರಗೌಡ ಪಾಟೀಲ, ಮಹೇಶ ತಮ್ಮಣ್ಣವರ, ಸುಜಾತಾ ಪಾಟೀಲ, ರಾಜು ಪಾಟೀಲ, ಯುನಿಸ್ ಅತ್ತಾರ, ನಾಮದೇವ ಕಾಂಬಳೆ, ಅಪ್ಪಾಸಾಬ ಕುಲಗುಡೆ ಸೇರಿದಂತೆ ಗ್ರಾ.ಪಂ.ಸದಸ್ಯರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.
ನ್ಯಾಯವಾದಿ ರಾಜು ಶಿರಗಾಂವೆ ಸ್ವಾಗತಿಸಿದರು, ಯಲ್ಲಪ್ಪ ಶಿಂಗೆ ನಿರೂಪಿಸಿದರು, ಯುವ ಧುರೀಣ ಧೂಳಗೌಡ ಪಾಟೀಲ
ವಂದಿಸಿದರು.